ಕೊರೋನಾ ಚರ್ಚೆಗೆ ವಿಶೇಷ ಅಧಿವೇಶನ ನಡೆಸಿ, ಭ್ರಷ್ಟಾ​ಚಾರದ ಬಗ್ಗೆ ಉತ್ತರ ಕೊಡಿ: ಡಿಕೆಶಿ

By Kannadaprabha NewsFirst Published Aug 5, 2020, 2:40 PM IST
Highlights

ಅಧಿ​ವೇ​ಶ​ನ​ದಲ್ಲಿ ಕೋವಿಡ್‌ ಚಿಕಿತ್ಸೆ ಉಪಕ​ರಣಗಳ ಖರೀ​ದಿ​ ಭ್ರಷ್ಟಾ​ಚಾರ ಬಗ್ಗೆ ಉತ್ತರಿಸಿ: ಸರ್ಕಾ​ರಕ್ಕೆ ಕೆಪಿ​ಸಿಸಿ ಅಧ್ಯಕ್ಷ ಡಿಕೆಶಿ ಆಗ್ರ​ಹ| ಬಿಜೆಪಿ ಸರ್ಕಾರದ ಯಾವ ಮಂತ್ರಿಯೂ ಸೋಂಕಿತರನ್ನ ಭೇಟಿ ಮಾಡಲಿಲ್ಲ| ಇದನ್ನೆಲ್ಲ ಪ್ರಶ್ನಿದರೆ ನನಗೆ ಸಿದ್ದರಾಮಯ್ಯನವರಿಗೆ ನೋಟಿಸ್‌ ಕೊಡ್ತಿರಾ? ನಿಮ್ಮ ಅವ್ಯವಹಾರ ಬಯಲು ಮಾಡಿದ ಮಾಧ್ಯಮವರಿಗೆ ನೋಟಿಸ್‌ ಕೊಡಿ ನೋಡೋಣ ಎಂದು ಸವಾಲು ಹಾಕಿದ ಡಿಕೆಶಿ|

ಕಲಬುರಗಿ(ಆ.05):  ಕೋವಿಡ್‌ 19 ಚಿಕಿತ್ಸೆಗಾಗಿ ಬೆಡ್‌, ಔಷಧಿ, ಪಿಪಿಇ ಕಿಟ್‌, ಸ್ಯಾನಿಟೈಸರ್‌ ಮತ್ತಿತರ ವೈದ್ಯಕೀಯ ಉಪಕರಣ ಖರೀದಿಸುವಾಗ ಭ್ರಷ್ಟಾಚಾರ ನಡೆದಿರುವುದಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಈಗಾಗಲೇ ಗಂಭೀರ ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಈ ವಿಚಾರಗಳ ಚರ್ಚೆಗೆ ವಿಧಾನ ಸಭೆ ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಏನೂ ಹಗರಣ ಆಗಿಲ್ಲ ಎನ್ನುವಾಗ ಅದ್ಯಾಕೆ ಸಾರ್ವಜನಿಕ ಲೆಕ್ಕಪತ್ರಸಮಿತಿ ಸಭೆ ನಡೆಸಲು ಅವಕಾಶ ನೀಡುತ್ತಿಲ್ಲವೆಂದು ಪ್ರಶ್ನಿಸಿದರು. ಕೊರೋನಾ ವೈದ್ಯಕೀಯ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸಂಪೂರ್ಣ ಎಡವಿ ಬಿದ್ದಿದೆ. ಮೋದಿಯವರು ನಮ್ಮ ಸರ್ಕಾರವನ್ನು ಹತ್ತು ಪರ್ಸೆಂಟ್‌ ಸರ್ಕಾರ ಎಂದಿದ್ದರು. ಈಗ ಇನ್ನೂರು, ಮುನ್ನೂರು ಪರ್ಸೆಂಟ್‌ ನಡೀತಿದೆ ಎಂದು ಬಿಜೆಪಿಗೆ ಟಾಂಗ್‌ ನೀಡಿದರು.

ತಮ್ಮ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ನೀಡಿರುವ ಲೀಗಲ್‌ ನೋಟಿಸ್‌ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆದ ಶಿವಕುಮಾರ್‌, ಎಂತೆಂಥದೋ ನೋಟಿಸುಗಳಿಗೆ ಹೆದರಿಲ್ಲ. ನಿಮ್ಮ ನೋಟಿಸಿಗೆ ಹೆದರುತ್ತೇವಾ ಎಂದರು.

ಕಲಬುರಗಿ: ರಾಮನಾಮ ಜಪಿಸಿದ ಡಿ.ಕೆ. ಶಿವಕುಮಾರ್‌

ಬಿಜೆಪಿ ಸರ್ಕಾರದ ಯಾವ ಮಂತ್ರಿಯೂ ಸೋಂಕಿತರನ್ನ ಭೇಟಿ ಮಾಡಲಿಲ್ಲ. ಇದನ್ನೆಲ್ಲ ಪ್ರಶ್ನಿದರೆ ನನಗೆ ಸಿದ್ದರಾಮಯ್ಯನವರಿಗೆ ನೋಟಿಸ್‌ ಕೊಡ್ತಿರಾ? ನಿಮ್ಮ ಅವ್ಯವಹಾರ ಬಯಲು ಮಾಡಿದ ಮಾಧ್ಯಮವರಿಗೆ ನೋಟಿಸ್‌ ಕೊಡಿ ನೋಡೋಣ ಎಂದು ಸವಾಲು ಹಾಕಿದರು. ಮಾತ್ರವಲ್ಲದೆ ನಾವೂ ನಿಮ್ಮ ಮೇಲೆ ಮಾನನಷ್ಟಮೊಕದ್ದಮೆ ಹಾಕ್ತೀವಿ. ಬಿಜೆಪಿಯ ಕೋವಿಡ್‌ ಭ್ರಷ್ಟಾಚಾರವನ್ನ ತಾವು ಜನತಾ ನ್ಯಾಯಾಲಯದಲ್ಲಿ ತೆಗೆದುಕೊಂಡು ಹೋಗುತ್ತಿರೋದಾಗಿ ಹೇಳಿದರು.

ನಾನು ಫಿಟ್‌ ಅಂಡ್‌ ಫೈನ್‌ ಆಗಿ​ದ್ದೇನೆ!

ಕೊರೋನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿಯಮದಂತೆ 7 ದಿನ ಹೋಂ ಕ್ವಾರಂಟೈನ್‌ ಆಗಿರಬೇಕಿತ್ತು. ಆದರೆ ಅವರೀಗ ಸ್ಪೀಕ್‌ ಆಫ್‌ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಕಲಬುರಗಿ ಪ್ರವಾಸ ಕೈಗೊಂಡರಲ್ಲದೆ ಕಾರ್ಯಕರ್ತರ ಸಭೆ ಸಹ ನಡೆಸಿದರು. 

ಗಾಣಗಾಪುರ ಕ್ಷೇತ್ರಕ್ಕೂ ಭೇಟಿ ನೀಡಿದರು. ಈ ಬಗ್ಗೆ ಸುದ್ದಿಗಾರರು ಕೇಳಿದಾಗ ನಾನು ಫಿಟ್‌ ಆ್ಯಂಡ್‌ ಫೈನ್‌ ಇದ್ದೇನೆ. ಸಮಯಕ್ಕೆ ತಕ್ಕಂತೆ ಟ್ರಿಟ್ಮೆಂಟ್‌ ತಗೊತೀನಿ, ಯಾರ ಪ್ರೈಮರಿ ಕಾಂಟ್ಯಾಕ್ಟ್ಸ್ ಬಂದಿಲ್ಲ ಎಂದರು. ಜೊತೆಗೆ ತಮ್ಮ ಕೊರಳಲ್ಲಿನ ಆಸ್ಪತ್ರೆ ಐಡಿ ಕಾರ್ಡ್‌ ತೋರಿಸುತ್ತ ಯಾರು ಭಯ ಪಡುವ ಅವಶ್ಯಕತೆ ಇಲ್ಲ ಎಂದರು.
 

click me!