ಈಶ್ವರಪ್ಪ, ವಿಶ್ವನಾಥ್‌ ಮುಂದಿಟ್ಟು CT ರವಿ ಹೊಸ ದಾಳ

By Kannadaprabha NewsFirst Published Mar 3, 2021, 10:03 AM IST
Highlights

ಎಚ್ ವಿಶ್ವನಾಥ್ ಹಾಗೂ ಸಚಿವ ಈಶ್ವರಪ್ಪ ಅವರನ್ನು ಮುಂದಿಟ್ಟುಕೊಂಡು ಸಿ ಟಿ ರವಿ ಇದೀಗ ಹೊಸ ದಾಳ ಬೀಸಿದ್ದಾರೆ. ಏನದು ರಾಜಕೀಯ ದಾಳ

ಬೆಂಗಳೂರು (ಮಾ.03):  ನೆರೆ ರಾಜ್ಯ ತಮಿಳುನಾಡು ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಕರ್ನಾಟಕದ ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸುವಲ್ಲಿ ತೊಡಗಿದ್ದು, ಕುರುಬರ ಮತಗಳನ್ನು ಸೆಳೆಯಲು ಆ ಸಮುದಾಯದ ನಾಯಕರನ್ನು ನಿಯೋಜಿಸಲು ಮುಂದಾಗಿದ್ದಾರೆ.

ತಮಿಳುನಾಡಿನಲ್ಲಿ ನೆಲೆಯೂರಲು ಜಾತಿಯಾಧಾರಿತ ಮತಬೇಟೆಗೆ ಈ ಕಸರತ್ತು ನಡೆದಿದ್ದು, ಈ ಬಗ್ಗೆ ತಮಿಳುನಾಡು ಉಸ್ತುವಾರಿಯಾಗಿರುವ ಸಿ.ಟಿ.ರವಿ ಅವರು ಮಲ್ಲೇಶ್ವರದಲ್ಲಿನ ಪಕ್ಷದ ಕಚೇರಿಯಲ್ಲಿ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರೊಂದಿಗೆ ಮಾತುಕತೆ ನಡೆಸಿದರು. ಚೆನ್ನೈ ನಗರ, ಕೃಷ್ಣಗಿರಿ, ಮದುರೈ ಸೇರಿದಂತೆ ಇತರೆ ಪ್ರದೇಶದಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಆ ಮತದಾರರನ್ನು ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ರಾಜ್ಯದ ನಾಯಕರು ಕಾರ್ಯೋನ್ಮುಖರಾಗಿದ್ದಾರೆ.

ಮೀಸಲಾತಿ ಕೇಳೋದು ಜೇನುಗೂಡಿಗೆ ಕೈ ಹಾಕಿದಂತೆ: ಸಿ.ಟಿ.ರವಿ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ನೇತೃತ್ವದಲ್ಲಿ ಮತದಾರರನ್ನು ಸೆಳೆಯಲು ಸಿ.ಟಿ.ರವಿ ಮುಂದಾಗಿದ್ದು, ತಮಿಳುನಾಡಿನ 66 ವಿಧಾನಸಭಾ ಕ್ಷೇತ್ರದಲ್ಲಿರುವ ಕುರುಬರನ್ನು ಬಿಜೆಪಿಯತ್ತ ಕರೆತರುವ ಪ್ರಯತ್ನವನ್ನು ಆರಂಭಿಸಿದ್ದಾರೆ. ಕುರುಂಬರ್‌, ಕುರುಮಾ ಹೆಸರಲ್ಲಿ ತಮಿಳುನಾಡಿನಲ್ಲಿ ಕುರುಬರನ್ನು ಕರೆಯಲಾಗುತ್ತದೆ. ಮಾ.15ರಂದು ಅಲ್ಲಿ ಕುರುಬರ ಸಂಘಟನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈಶ್ವರಪ್ಪ, ವಿಶ್ವನಾಥ್‌ ಸೇರಿದಂತೆ ಇತರೆ ಕುರುಬ ನಾಯಕರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

click me!