
ಚಿಕ್ಕಮಗಳೂರು (ಏ.16): ಶಾಸಕ ಸಿ.ಟಿ.ರವಿ ಅವರು 'ಲಿಂಗಾಯುತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ' ಎಂದು ಹೇಳಿಕೆ ನೀಡಿದ್ದಾರೆಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಬಿಜೆಪಿ ಲಿಂಗಾಯುತ ವಿರೋಧಿ ಎಂಬ ಭಾವನೆ ಲಿಂಗಾಯುತ ಸಮುದಾಯದಲ್ಲಿ ಮೂಡಿದೆ. ಇದರಿಂದ ಪಕ್ಷಕ್ಕೆ ಉಂಟಾಗಿರುವ ಡ್ಯಾಮೇಜ್ ಕಂಟ್ರೊಲ್ ಮಾಡಲು ಮುಂದಾಗಿರುವ ಜಿಲ್ಲಾ ಬಿಜೆಪಿ ಘಟಕ ಸಿಟಿ ರವಿ ಅವರನ್ನು ಹೊರಗಿಟ್ಟು ವೀರಶೈವ ಲಿಂಗಾಯತ ಸಮಾವೇಶವನ್ನು ಮಾಡಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿದ್ದಾರೆನ್ನಲಾದ ಲಿಂಗಾಯತರಿಗೆ ಸಂಬಂಧಪಟ್ಟ ವೀಡಿಯೋವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಲಿಂಗಾಯತ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಆದರೆ, ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿರುವುದು ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಎಚ್ಚೆತ್ತುಕೊಂಡ ಹಿನ್ನೆಲ್ಲೆ ಬಿಜೆಪಿ ತರಾತುರಿಯಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಯೋಜನೆಯನ್ನು ರೂಪಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿಯವರ ಗೈರಿನಲ್ಲಿ ಲಿಂಗಾಯುತ ಸಮುದಾಯ ದ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಕಲ್ಯಾಣ ನಗರದಲ್ಲಿರುವ ಬಸವ ತತ್ವ ಪೀಠದ ಆವರಣದಲ್ಲಿ ನಡೆದ ವೀರಶೈವ ಲಿಂಗಾಯುತ ಸಮಾವೇಶದಲ್ಲಿ ಲಿಂಗಾಯುತ ಸಮುದಾಯದ ಮುಖಂಡರು, ತರೀಕೆರೆ ಶಾಸಕ ಸುರೇಶ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಶಾಸಕ ಸಿ.ಟಿ.ರವಿಯನ್ನ ಹಾಡಿ ಹೊಗಳಿದ್ದರು.
ಸವದಿ ಹೆಣವನ್ನು ಸ್ಮಶಾನಕ್ಕೆ ಕಳಿಸಿ, ಬಿಜೆಪಿ ಕಚೇರಿ ಮುಂದೆ ಯಾಕೆ ತರ್ತೀರಿ?: ಯತ್ನಾಳ್
ಚುನಾವಣೆಯಲ್ಲಿ ತಕ್ಕ ಪಾಠ ಮುಖಂಡರು ಕರೆ: ಶಾಸಕ ಸಿ.ಟಿ.ರವಿ ಅವರು ವೀರಶೈವ-ಲಿಂಗಾಯತರ ವಿರೋಧಿ ಎಂದು ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಸಮಾಜದ ಮುಖಂಡರು ಕರೆ ನೀಡಿದರು. ಸಭೆಯಲ್ಲಿ ಮಾನತಾಡಿದ ವಿವಿಧ ಮುಖಂಡರು ಕಾಂಗ್ರೆಸ್ ಪಕ್ಷ ಸಿ.ಟಿ.ರವಿ ಅವರ ವಿರುದ್ಧ ಸಮಾಜವನ್ನು ಎತ್ತಿಕಟ್ಟುವ ಸಲುವಾಗಿ ಸುಳ್ಳು ಪ್ರಚಾರಗಳನ್ನು ಮಾಡುತ್ತ ಕಿಡಿಗೇಡಿ ಕೃತ್ಯದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮಾವೇಶವನ್ನ ಉದ್ದೇಶಿಸಿದ ಮಾತನಾಡಿದ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಸಿ.ಟಿ.ರವಿ ವಿರುದ್ಧ ಸೋಲಿನ ಭಯದಿಂದ ಜಾತಿರಾಜಕಾರಣದ ಮೂಲಕ ಜಾತಿಯನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಸಿ.ಟಿ. ರವಿ ಲಿಂಗಾಯುತ ಸಮುದಾಯಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ನೀವೆಲ್ಲಾ ಹೇಳಿ, ಕಲ್ಮುರುಡಪ್ಪ ಅವರನ್ನ ಬಿಜೆಪಿ ಜಿಲ್ಲಾಧ್ಯಕ್ಷ ಮಾಡಿದ್ದಾರೆ. ಕಡೂರು ಶಾಸಕ ಬೆಳ್ಳಿ ಪ್ರಕಾಶ್ ರನ್ನ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಅವರನ್ನ ಶಾಸಕರ ಜೊತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸಿ.ಟಿ.ರವಿ ಲಿಂಗಾಯುತ ವಿರೋಧಿ ಆಗಿದ್ರೆ ಇದನ್ನೆಲ್ಲಾ ಮಾಡುತ್ತಿದ್ದರಾ ಎಂದು ಕೇಳಿ ಎಂದರು. ನಿಮ್ಮ ಅಭಿವೃದ್ಧಿ ನಮ್ಮ ಜವಾಬ್ದಾರಿ. ಜಿಲ್ಲೆಯಲ್ಲಿ ನಮಗೆ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ. ರವಿಯನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ, ಸಿ.ಟಿ.ರವಿಯನ್ನ ಹಾಡಿ ಹೊಗಳಿದ ತರೀಕೆರೆ ಶಾಸಕ ಡಿ.ಎಸ್.ಸುರೇಶ್, ನಾನು ಶಾಸಕನಾಗಲು ಸಿ.ಟಿ.ರವಿ ಕಾರಣ ಎಂದರು. ಈ ಬಾರಿ ಮೂರನೇ ಸಲ ಶಾಸಕನಾಗಲು ಸಿ.ಟಿ.ರವಿಯೇ ಕಾರಣಕರ್ತರು ಎಂದರು. ನಾನು 2008ರಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನ ಮಾಡುತ್ತಿದ್ದೆ. ಆದರೆ, ಯಾರೋ ಒಬ್ಬರು ಕಾಂಗ್ರೆಸ್ಸಲ್ಲಿ ನಿನಗೆ ಟಿಕೆಟ್ ಸಿಗಲ್ಲ. ಬಿಜೆಪಿ ಸೇರು ಎಂದರು. ಸಿ.ಟಿ. ರವಿ ಮನೆಗೆ ಹೋಗಿ ಕೇಳಿದೆ. ಪ್ರಚಾರ ಆರಂಭ ಮಾಡು ಎಂದರು. ನಂತರ ನನಗೆ ಟಿಕೆಟ್ ಕೊಡಿಸಿ 18 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರು. ಇಂತಹ ಸಿ.ಟಿ.ರವಿ ಲಿಂಗಾಯುತ ವಿರೋಧಿಯಾಗಲು ಸಾಧ್ಯವಿಲ್ಲ ಎಂದರು.
ನಾನಿನ್ನೂ ಪಕ್ಷಕ್ಕೆ ರಾಜಿನಾಮೆ ಕೊಟ್ಟಿಲ್ಲ: ಬಿಜೆಪಿಯಲ್ಲೇ ಉಳಿತಾರಾ ಮಾಜಿ ಸಿಎಂ ಜಗದೀಶ್ ಶೆಟ್ಟರ್!
ಭಾವುಕರಾಗಿ ಮತಯಾಚನೆ ಮಾಡಿದ ಪಲ್ಲವಿ ರವಿ: ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ ಅವರು ಮಾತನಾಡಿ, ಶಾಸಕರು ನಿಮ್ಮ ಮನೆಯ ಮಗ ಇದ್ದಂತೆ. ಅವರು ಎಂದಿಗೂ ಜಾತೀಯತೆ ಮಾಡಿದವರಲ್ಲ. ಎಲ್ಲರನ್ನೂ ಸಮನಾಗಿ ಕಾಣುವವರು, ನಿಮ್ಮ ಬೆಂಬಲದಿಂದಲೇ ಬೆಳೆದು ಬಂದವರು ಮುಂದೆಯೂ ನಿಮ್ಮ ಆಶಿರ್ವಾದ ಇರಲಿ ಎಂದು ಭಾವುಕರಾಗಿ ಮನವಿ ಮಾಡಿದರು. ಇನ್ನು ಶಾಸಕ ಸಿ.ಟಿ.ರವಿ ಅವರು ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಗೈರು ಹಾಜರಾಗಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ಅಲ್ಲಿಂದಲೇ ಮಾತನಾಡಿ ಬೆಂಬಲ ಕೋರಿದ ಮುದ್ರಿತ ವೀಡಿಯೋವನ್ನು ಸಮಾವೇಶದಲ್ಲಿ ಬಿತ್ತರಪಡಿಸಲಾಯಿತು.
ಶಕ್ತಿಪ್ರದರ್ಶನ ಮೂಲಕ ತಿರುಗೇಟು: ಸಿ.ಟಿ.ರವಿ ವೀರಶೈವ-ಲಿಂಗಾಯತರ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಪಕ್ಷ ಸುಳ್ಳು ಆರೋಪ ಮಾಡುತ್ತಿದೆ ಎನ್ನುವ ಕಾರಣಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರನ್ನು ಸೇರಿಸಿದ್ದ ಬಿಜೆಪಿ ಶಕ್ತಿ ಪ್ರದರ್ಶನದ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.