
ವಿಧಾನಸಭೆ (ಡಿ.15): ರಾಜ್ಯದಲ್ಲಿ ನೆರೆ ಹಾಗೂ ಬರದಿಂದ ಬೆಳೆ ನಷ್ಟ ಹೊಂದಿರುವ ವಿಮಾ ರೈತರಿಗೆ ಡಿಸೆಂಬರ್ ತಿಂಗಳಾಂತ್ಯದ ಒಳಗಾಗಿ ಬೆಳೆ ವಿಮೆ ಹಣ ಪಾವತಿ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು. ಇದೇ ವೇಳೆ ರೈತರಿಗೆ ಹೆಚ್ಚು ಪ್ರಮಾಣದ ವಿಮೆ ಮೊತ್ತ ಪಾವತಿಯಾಗುವಂತೆ ಮಾಡಲು ಪೂರಕವಾಗಿ ಕೆಲಸ ಮಾಡುವಂತೆಯೂ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಶರಣು ಸಲಗಾರ, ಬರದಿಂದ ರಾಜ್ಯ ತತ್ತರಿಸಿದೆ.
ನಮ್ಮ ಕ್ಷೇತ್ರದಲ್ಲೂ ಹಿಂದೆ ನೆರೆ ಹಾಗೂ ಈಗ ಬರದಿಂದ ಸಾಕಷ್ಟು ಬೆಳೆ ನಷ್ಟ ಉಂಟಾಗಿದೆ. ಇವರಿಗೆ ಫಸಲ್ ಬಿಮಾ ಯೋಜನೆಯಡಿ ಈವರೆಗೆ ಪರಿಹಾರ ಬಂದಿಲ್ಲ. ಇನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಪ್ರೀಮಿಯಂ ಪಾವತಿ ಮಾಡಿದ್ದಕ್ಕಿಂತ ಕಡಿಮೆ ವಿಮೆ ಹಣ ಬರುವ ಸಾಧ್ಯತೆಯಿದೆ. ಹಿಂದೆ ಇದೇ ರೀತಿ ನಡೆದಿದೆ ಎಂದು ಹೇಳಿದರು.ಇದಕ್ಕೆ ಉತ್ತರಿಸಿದ ಚೆಲುವರಾಯಸ್ವಾಮಿ, ವಿಮೆಗಾಗಿ ರಾಜ್ಯ ಸರ್ಕಾರ ₹450 ಕೋಟಿ ಹಣ ಭರಿಸಿದೆ. ಈಗಾಗಲೇ ಬೆಳೆ ಕಟಾವು ಸಮೀಕ್ಷೆ ಸಂಪೂರ್ಣ ಮುಗಿದಿದ್ದು, ವಿಮಾ ಯೋಜನೆಯಡಿ ಅರ್ಹ ರೈತರಿಗೆ ಮಾಸಾಂತ್ಯಕ್ಕೆ ವಿಮೆ ಹಣ ತಲುಪಲಿದೆ.ಇನ್ನು ವಿಮೆ ಹಣ ಕಡಿಮೆ ಬರಲು ಕೇಂದ್ರದ ಮಾರ್ಗಸೂಚಿ ಕಾರಣ.
ಬಿಜೆಪಿಗೆ ಸಾಮಾಜಿಕ ನ್ಯಾಯ ಬಗ್ಗೆ ಮಾತಾಡೋ ಹಕ್ಕಿಲ್ಲ: ಸಿಎಂ ಸಿದ್ದರಾಮಯ್ಯ
ಬೆಳೆ ಕಟಾವು ಸಮೀಕ್ಷೆಯ ಲ್ಲಿ ಕೇಂದ್ರ ಸರ್ಕಾರದ ಮಾರ್ಗ ಸೂಚಿಯನ್ವಯ ಹಿಂದಿನ ಏಳು ಸಾಲುಗಳಲ್ಲಿ ಐದು ವರ್ಷಗಳ ಸರಾಸರಿ ಇಳುವರಿಯನ್ನು ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿದೆ. ಇದನ್ನು ಬದಲಾಯಿಸುವಂತೆ ರಾಜ್ಯ ಸರ್ಕಾರದಿಂದ ಪತ್ರದ ಮೂಲಕ ಹಾಗೂ ಕೇಂದ್ರ ಹಣಕಾಸುಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಸಹ ಈ ಮಾರ್ಗಸೂಚಿಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸಮ್ಮತಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.ಆದರೂ ರಾಜ್ಯದ ರೈತರ ಹಿತವನ್ನು ಕಾಯ್ದುಕೊಂಡು, ಯಾವುದೇ ತೊಂದರೆಯಾಗದಂತೆ ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ಈ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.