ಆಟದ ವಸ್ತವಾದ ಚನ್ನಪಟ್ಟಣ ತಹಶೀಲ್ದಾರ್ ಹುದ್ದೆ, 24 ಗಂಟೆಯಲ್ಲಿ ಇಬ್ಬರು ತಹಶೀಲ್ದಾರ್ ವರ್ಗಾವಣೆ

By Suvarna NewsFirst Published May 1, 2022, 6:01 PM IST
Highlights

* ಆಟದ ವಸ್ತವಾದ ಚನ್ನಪಟ್ಟಣ ತಹಶೀಲ್ದಾರ್ ಹುದ್ದೆ
* ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೀಶ್ವರ್ ನಡುವಿನ ತಿಕ್ಕಾಟದಲ್ಲಿ ತಹಶೀಲ್ದಾರ್ ವರ್ಗಾವಣೆ  ಆಟ
* 24 ಗಂಟೆಯಲ್ಲಿ ಇಬ್ಬರು ತಹಶಿಲ್ದಾರ್ ವರ್ಗಾವಣೆಯಾಗಿ 3 ನೇ ತಹಶೀಲ್ದಾರ್ ಅಧಿಕಾರ

ವರದಿ : ಜಗದೀಶ್ ಆರ್ ಏಷ್ಯಾ ನೆಟ್ ಸುವರ್ಣ ನ್ಯೂಸ್ ರಾಮನಗರ

ರಾಮನಗರ, (ಮೇ.01) ತಹಶಿಲ್ದಾರ್ ವರ್ಗಾವಣೆ ವಿಚಾರ ಆ ಕ್ಷೇತ್ರದಲ್ಲಿ ಆಟದ ವಸ್ತುವಾಗಿದೆ. ಆ ಕ್ಷೇತ್ರದ ರಾಜಕೀಯ ನಾಯಕರ ದೊಂಬರಾಟಕ್ಕೆ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. 24 ಗಂಟೆಯಲ್ಲಿ ಇಬ್ಬರು ತಹಶೀಲ್ದಾರ್ ವರ್ಗಾವಣೆಯಾಗಿ 3ನೇ ತಹಶೀಲ್ದಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ತಹಶೀಲ್ದಾರ್ ವರ್ಗಾವಣೆ ಪ್ರಹಸನ ಅಂತ್ತೀರಾ ಈ ವರದಿ ನೋಡಿ.

ಹೌದು.. ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ತಹಶೀಲ್ದಾರ್ ವರ್ಗಾವಣೆ ವಿಚಾರ ಹೆಚ್ಚು ಸದ್ದು ಮಾಡಿದೆ. ತಾಲೂಕಿಗೆ 24 ತಾಸಿನಲ್ಲಿ ಮೂರು ಮಂದಿ ತಹಶಿಲ್ದಾರ್ ಗಳು ವರ್ಗಾವಣೆ ಕಂಡಿದ್ದಾರೆ. ಇಲ್ಲಿನ ಎರಡು ಪಕ್ಷದ ನಾಯಕರಿಗೆ ತಹಶಿಲ್ದಾರ್ ಎತ್ತಂಗಡಿ ಮಾಡಿಸೋದು ಒಂದು ರೀತಿಯ ಪ್ರತಿಷ್ಟೆಯಾಗಿದೆ. ಮಾಜಿ ಸಿಎಂ ಹಾಲಿ ಶಾಸಕರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಎಂ.ಎಲ್.ಸಿ ಸಿ.ಪಿ.ಯೋಗೀಶ್ವರ್ ನಡುವೆ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಇಬ್ಬರು ನಾಯಕರ ಪ್ರತಿಷ್ಠೆಗೆ ಸಿಲುಕಿದ್ದು ಕ್ಷೇತ್ರದ ತಹಶಿಲ್ದಾರ್ ಹುದ್ದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ ನಾಗೇಶ್ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ರು ಇವರು ಜಿಡಿಎಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಅಂತಾ ಸಿ.ಪಿ.ಯೋಗೀಶ್ವರ್ ಅವರು ಸಿಎಂ ಶಿಫಾರಸ್ಸು ಪತ್ರದೊಂದಿಗೆ ನಾಗೇಶ್ ಅವರನ್ನ ವರ್ಗಾವಣೆ ಮಾಡಿಸಿ ತಮ್ಮ ಆಪ್ತ ಸುದರ್ಶನ್ ಅವರನ್ನ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿಸಿದ್ರು. ವರ್ಗಾವಣೆ ಅದ ಸಂಜೆ ವೇಳೆಗೆ ಹೆಚ್.ಡಿ.ಕೆ ತಮ್ಮ ಪ್ರಭಾವ ಬಳಸಿ ಸಿಎಂ ಶಿಫಾರಸ್ಸಿನೊಂದಿಗೆ ವರ್ಗಾವಣೆ ಆದೇಶವನ್ನ ರದ್ದುಮಾಡಿಸಿ ನಾಗೇಶ್ ಅವರನ್ನ ಕ್ಷೇತ್ರದಲ್ಲೇ ಉಳಿಸಿಕೊಂಡಿದ್ರು.

CP Yogeshwar VS HDK: 14 ತಿಂಗಳು ಚನ್ನಪಟ್ಟಣಕ್ಕೆ ಕಾಲಿಟ್ಟಿಲ್ಲ ಎಚ್‌ಡಿಕೆ: ಯೋಗೇಶ್ವರ್

ಇಷ್ಟಕ್ಕೆ ತಹಶೀಲ್ದಾರ್ ವರ್ಗಾವಣೆ ವಿಚಾರ ನಿಲ್ಲದೆ ಇಂದಿಗೂ ಮುಂದುವರೆದಿದೆ. ಮೊನ್ನೆಯಷ್ಟೇ ಸಿ.ಪಿ.ಯೋಗೀಶ್ವರ್ ಮತ್ತೆ ತಹಶೀಲ್ದಾರ್ ವರ್ಗಾವಣೆಗೆ ಕಟ್ಟುಬಿದ್ದು ಶುಕ್ರವಾರ ನಾಗೇಶ್ ಅವರನ್ನ ವರ್ಗಾವಣೆ ಮಾಡಿಸಿ ಸುದರ್ಶನ್ ಅವರನ್ನ ಮತ್ತೆ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿಸಿಕೊಂಡು ಬಂದಿದ್ರು. ಶುಕ್ರವಾರ ಸಂಜೆಯೆ ಸುದರ್ಶನ್ ತಹಶೀಲ್ದಾರ್ ಆಗಿ ಅಧಿಕಾರ ಕೂಡ ವಹಿಸಿಕೊಂಡಿದ್ರು. ಮತ್ತೆ ಹಠಕ್ಕೆ ಬಿದ್ದ ಹೆಚ್.ಡಿ.ಕುಮಾರಸ್ವಾಮಿ ಶನಿವಾರ ಅದೇ ಸಿಎಂ ಶಿಫಾರಸ್ಸು ಪತ್ರದೊಂದಿಗೆ ಸುದರ್ಶನ್ ಅವರನ್ನ ಎತ್ತಂಗಡಿ ಮಾಡಿಸಿ ಹರ್ಷವರ್ಧನ್ ಅವರನ್ನ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್​ ಅವರ ಪ್ರತಿಷ್ಠೆಯ ಮೇಲಾಟದಿಂದಾಗಿ ಚನ್ನಪಟ್ಟಣದ ತಹಶೀಲ್ದಾರ್​ಗಳಿಗೆ ಪೀಕಲಾಟ ಎಂಬಂತಾಗಿದೆ. ತಮ್ಮವರೇ ತಹಶೀಲ್ದಾರ್ ಇರಬೇಕು ಎಂಬ ಇವರಿಬ್ಬರ ಜಟಾಪಟಿಯಿಂದಾಗಿ ಮೂರೇ ವಾರಗಳಲ್ಲಿ ಮೇಲಿಂದ ಮೇಲೆ ತಹಶೀಲ್ದಾರ್​ಗಳ ವರ್ಗಾವಣೆ ಆಗಿದ್ದು, ದಿನ ಬೆಳಗಾಗುವುದರೊಳಗೆ ತಹಶೀಲ್ದಾರ್​ ಬದಲಾವಣೆ ಆಗುತ್ತಿರುವಂಥ ಬೆಳವಣಿಗೆಗಳು ಆಗುತ್ತಿವೆ. ಈ ತಹಶೀಲ್ದಾರ್ ವರ್ಗಾವಣೆ ವಿಚಾರವನ್ನ ಪ್ರಗತಿಪರ ಹೋರಾಟಗಾರರು ಟೀಕಿಸಿದ್ದಾರೆ‌. ತಹಶೀಲ್ದಾರ್ ವರ್ಗಾವಣೆ ವಿಚಾರದಲ್ಲಿ ನಾಯಕರು ತೋರುತ್ತಿರುವ ಕಾಳಜಿಯನ್ನ ಕ್ಷೇತ್ರದ ಅಭಿವೃದ್ಧಿ ಕಡೆ ಕೊಡಲಿ ಅಂತಾ ಹೇಳುತ್ತಿದ್ದಾರೆ.

ಒಟ್ಟಾರೆ ಬೊಂಬೆನಾಡಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕೆ ಹಾಗೂ ಎಂ.ಎಲ್.ಸಿ ಸಿಪಿವೈ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆ ಆದ್ರೆ ಅದು ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ತಿರುಗಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕಿದೆ.

click me!