
ಮಂಡ್ಯ/ಬಸವನಬಾಗೇವಾಡಿ(ಏ.27): ವಿಶ್ವದಲ್ಲಿ ಎಲ್ಲೇ ಹನುಮಂತನ ದೇಗುಲವಿದ್ದರೂ ಅಲ್ಲಿ ಶ್ರೀರಾಮ ಮಂದಿರ ನಿರ್ಮಿಸುವುದು ಶತಸಿದ್ಧ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಿಸಿದರು. ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಹಾಗೂ ವಿಜಯಪುರದ ಬಸವನಬಾಗೇವಾಡಿ ಪಟ್ಟಣದ ಹೊರವಲಯದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಹನುಮಂತನಿಗೂ-ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಆದ್ದರಿಂದಲೇ ನಾವು ಮಂದಿರ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವನ್ನು 2024ರ ಜನವರಿಯಲ್ಲಿ ನಾವು ಲೋಕಾರ್ಪಣೆ ಮಾಡುತ್ತೇವೆ. ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಜಾಗ ಕೇಳಿದ್ದರು. ನಾವು ಕರ್ನಾಟಕ ಭವನ ನಿರ್ಮಾಣಕ್ಕೆ ಜಾಗ ಕೊಟ್ಟಿದ್ದೇವೆ. ಎಲ್ಲರೂ ಬಂದು ರಾಮ ಮಂದಿರ ವೀಕ್ಷಣೆ ಮಾಡಬೇಕು ಎಂದರು.
ಬಿಜೆಪಿ ಲೂಟಿ ಹೊಡೆದದ್ದೇ ಹೆಚ್ಚು: ಪ್ರಿಯಾಂಕಾ ಗಾಂಧಿ
ಯುಪಿ-ಕರ್ನಾಟಕ ಸಂಬಂಧ:
ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ತ್ರೇತಾಯುಗದಲ್ಲಿ ಶ್ರೀರಾಮ ವನವಾಸಕ್ಕೆ ಬಂದಾಗ ಹನುಮಂತ ಕರ್ನಾಟಕದಲ್ಲೇ ಸಿಕ್ಕಿದ್ದು. ಆಂಜನೇಯ ಜನಿಸಿದ್ದೂ ಕರ್ನಾಟಕದಲ್ಲೆ. ಈ ಹಿನ್ನೆಲೆಯಲ್ಲಿ ಭಕ್ತ ಮತ್ತು ಸ್ವಾಮಿಯ ಸಂಬಂಧದ ರೀತಿಯಲ್ಲಿದೆ ಕರ್ನಾಟಕ ಮತ್ತು ಉತ್ತರ ಪ್ರದೇಶದ ಸಂಬಂಧ ಇದೆ. ಅಲ್ಲದೆ, ಪ್ರಧಾನಮಂತ್ರಿಯವರ ಏಕ್ಭಾರತ್ ಶ್ರೇಷ್ಠ ಭಾರತ್ ಎನ್ನುವ ಆಶಯಕ್ಕೆ ಉತ್ತಮ ಉದಾಹರಣೆ ಉತ್ತರ ಪ್ರದೇಶ ಹಾಗೂ ಕರ್ನಾಟಕದ ಸಂಬಂಧ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ಮಠಕ್ಕೆ ನಂಟು:
ಆದಿಚುನಗಿರಿ ಮಠದ ಭೈರವೇಶ್ವರನಿಗೂ ಉತ್ತರ ಪ್ರದೇಶದ ಗೋರಖ್ಪುರಕ್ಕೂ ಸಂಬಂಧ ಇದೆ. ಎರಡೂ ಮಠಗಳು ನಾಥ ಪರಂಪರೆಯ ಮಠಗಳು. ಹಾಗಾಗಿ ಮಂಡ್ಯಕ್ಕೂ ನಮಗೂ ನಂಟಿದೆ ಎಂದು ನಂಟು ಬೆಸೆಯುವ ಮಾತುಗಳನ್ನಾಡಿದರು.
Karnataka Assembly Elections 2023: ಉತ್ತರಕನ್ನಡದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ..!
ಕುಂಭ ಮೇಳ ಚೆನ್ನಾಗಿ ನಡೆದಿದೆ:
ಕೆ.ಆರ್.ಪೇಟೆಯಲ್ಲಿ ನಡೆದ ಕುಂಭಮೇಳ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂಬ ಮಾಹಿತಿ ಪಡೆದಿದ್ದೆ. ಅಂದು ನಾನೂ ಅದರಲ್ಲಿ ಭಾಗಿಯಾಗಬೇಕಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಕಾಣಿಸಿಕೊಂಡ ನೆರೆ ಹಾವಳಿಯಿಂದಾಗಿ ನಾನು ಬರಲಾಗಲಿಲ್ಲ. ಲಕ್ಷಾಂತರ ಜನ ಭಕ್ತರು ಬಂದಿದ್ದರೆಂಬ ಸುದ್ದಿ ಕೇಳಿ ಸಂತೋಷವಾಯಿತು ಎಂದು ಹೇಳಿದರು.
ಕಾಲಭೈರವೇಶ್ವರ ಕಂಚಿನ ಪ್ರತಿಮೆ ನೀಡಿ ಗೌರವ
ಮಂಡ್ಯ: ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬಿಜೆಪಿ ನಾಯಕರು ಶ್ರೀಕಾಲಭೈರವೇಶ್ವರ ಸ್ವಾಮಿ ಕಂಚಿನ ಪ್ರತಿಮೆ ನೀಡಿ ಗೌರವ ಸಮರ್ಪಿಸಿದರು. ಯೋಗಿ ಅವರೂ ಶ್ರೀಕಾಲಭೈರವೇಶ್ವರಸ್ವಾಮಿ ಆರಾಧಕರು. ಉತ್ತರ ಪ್ರದೇಶದ ಗೋರಕ್ನಾಥ ಮಠಕ್ಕೂ ಮಂಡ್ಯದ ಆದಿ ಚುಂಚನಗಿರಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇವೆರಡೂ ಮಠಗಳು ನಾಥ ಪರಂಪರೆಗೆ ಸೇರಿದವು. ಇದೇ ಕಾರಣಕ್ಕೆ ಪರಶಿವನ ಪ್ರತಿರೂಪವಾದ ಶ್ರೀಕಾಲಭೈರವೇಶ್ವರ ಸ್ವಾಮಿಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.