
ಗುಂಡ್ಲುಪೇಟೆ (ಜೂ.30): ದೇಶದಲ್ಲಿ ಸಂವಿಧಾನ ಬದಲಾವಣೆಗೆ ಹಾಗೂ ಪರಾಮರ್ಶೆಗೆ ಪ್ರಯತ್ನ ನಡೆಯುತ್ತಿದೆ. ಇದು ದೇಶಕ್ಕೆ ದೊಡ್ಡಅಪಾಯ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ತಾಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನ ಆಚರಣಾ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಬದಲಿಸಿದರೆ ದೇಶಕ್ಕೆ ಗಂಡಾಂತರ ಎದುರಾಗಬಹುದು. ಕೋಮುವಾದ ಹಾಗೂ ಮನುವಾದಿಗಳು ಸಂವಿಧಾನದ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಒಟ್ಟಾಗಿ ಹೋರಾಟ ನಡೆಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಸರ್ವಾಧಿಕಾರಿ ಯಾರು?: ದೇಶದಲ್ಲಿ ತುರ್ತು ಪರಿಸ್ಥಿತಿ ತಂದು ಸರ್ವಾಧಿಕಾರ ಆಡಳಿತ ಕಾಂಗ್ರೆಸ್ ನಡೆಸಿತು ಎಂದು ಬಿಜೆಪಿ ಹೇಳುತ್ತಿದೆ, ಇಡಿ, ಸಿಬಿಐ ಸೇರಿದಂತೆ ಇನ್ನಿತರ ಸಂಸ್ಥೆಗಳ ಉಪಯೋಗಿಸಿಕೊಂಡು ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವರು ಯಾರು ಎಂದು ಪ್ರಶ್ನಿಸಿದರು. ಜಾತ್ಯಾತೀತ ಹಾಗೂ ಸಮಾಜವಾದ ಎಂಬ ಪದ ತೆಗೆದುಹಾಕಬೇಕು ಎನ್ನುತ್ತಿದ್ದಾರೆ. ಸಂಸತ್ ನಲ್ಲಿ ಚರ್ಚೆ ನಡೆದು ಅನುಮೋದನೆಗೊಂಡಿದೆ. ಆದರೂ ಮನುವಾದಿ ಹಾಗೂ ಜಾತಿವಾದಿಗಳ ಮನಸ್ಥಿತಿಯಾಗಿದೆ ಇದೇ ಸಂವಿಧಾನ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.
ದೇಶಕ್ಕೆ ಸಂವಿಧಾನ ಬಂದಿದೆ, ಅಗತಗೌಡನಹಳ್ಳಿಯಲ್ಲಿ 50ನೇ ವರ್ಷದಲ್ಲಿ ಅಂಬೇಡ್ಕರ್ ಸಂಘ ಆರಂಭವಾಗಿದೆ. ಜೊತೆಗೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿವೆ ಆದರೂ ದೇಶದಲ್ಲಿ ಸಂಪೂರ್ಣ ಬದಲಾವಣೆ ಆಗಿಲ್ಲ.ಇನ್ನೂ ನಾವು ಬಾರತೀಯರಾದ ನಾವು ಎನ್ನಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಮ ಸಮಾಜ, ಸಮಾನತೆ ಇಲ್ಲ,ಸ್ವಾಭಿಮಾನ,ಗೌರವ,ಘನತೆ,ಅವಕಾಶ,ಸ್ಥಾನ,ಮಾನ ಬೇಕು ನಮಗೆ,ಅದು ಸಂವಿಧಾನದಲ್ಲಿದೆ ಆಧರೆ ಆದರೂ ಅಸಮಾನತೆ ಇನ್ನೂ ಜೀವಂತವಾಗಿದೆ,ಅಸಮಾನತೆ ತೊಡದು ಹಾಕಿ,ಸಮಾನತೆ ಬರಬೇಕಿದೆ ಎಂದರು.
ಪಾಕಿಸ್ತಾನದ ಜೊತೆಗೆ ನಡೆದ ಯುದ್ಧ ಗೆದ್ದದ್ದು ಕೇಂದ್ರ ಸರ್ಕಾರವಲ್ಲ, ದೇಶದ ಜನರು ಏಕತೆ, ಸಮಾನತೆಗೆ ಒಗ್ಗೂಡಿ ಸಂದೇಶ ಕೊಟ್ಟದ್ದರಿಂದಲೇ ಶತೃ ದೇಶ ಹಿಮ್ಮೆಟ್ಟಲು ಕಾರಣವೇ ಹೊರತು ಸರ್ಕಾರವಲ್ಲ, ಸರ್ಕಾರ ಯುದ್ದದ ವಿಷಯದಲ್ಲಿ ಕರ್ತವ್ಯ ಹಾಗೂ ಜವಾಬ್ದಾರಿ ನಿಭಾಯಿಸಿದೆ. ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದವರ ಬಾಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಾನು ಚರ್ಚಿಸಿ ಸಂವಿಧಾನ ಪೀಠಿಕೆ ಓದುವಂತೆ ಮಾಡಿದೆವು ಎಂದಾಗ ಸಭಿಕರೆಲ್ಲ ಜೋರಾದ ಚಪ್ಪಾಳೆ ತಟ್ಟಿದರು.
ಕೊಳ್ಳೇಗಾಲ ಬಳಿಯ ಚೆನ್ನಲಿಂಗನಹಳ್ಳಿ ಚೇತವನ ಬುದ್ದ ವಿಹಾರದ ಮನೋರಕ್ಷಿತ ಭಂತೇಜಿ,ಮಾಜಿ ಸಂಸದ ಎ.ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಳ್ಳೇಗಾಲ ಶಾಸಕಎ.ಆರ್.ಕೃಷ್ಣಮೂರ್ತಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿದರು. ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ನಿವೃತ್ತ ಅಧಿಕಾರಿಗಳಾದ ಎಚ್.ಆಂಜನೇಯ,ಎ.ಮಾದಪ್ಪ,ಹಾಸನ ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್,ಮುಖಂಡರಾದ ಮಳ್ಳೂರು ಶಿವಮಲ್ಲು,ವಾಲೆ ಮಹದೇವ್, ಸಚಿವರ ಆಪ್ತ ಕೆ.ಗೋಪಾಲ್ ಹೊರೆಯಾಲ,ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿಯ ಸೋಮಶೇಖರ ಮೂರ್ತಿ, ಪಿ. ರಾಘವೇಂದ್ರ,ಶಿವರಾಜು, ದೇವರಾಜು ಇದ್ದರು.
2600 ವರ್ಷಗಳ ಹಿಂದೆಯೇ ಸಮ ಸಮಾಜದ ಬೀಜ ಬಿತ್ತಿದ ಬುದ್ಧ: ಸಮ ಸಮಾಜದ ಕನಸು ಕಂಡ ಬುದ್ದ 2600 ವರ್ಷಗಳ ಹಿಂದೆಯೇ ಬೀಜ ಬಿತ್ತಿದ್ರು, ೮೦೦ ವರ್ಷಗಳ ಹಿಂದೆ ಬಸವಣ್ಣ ಬೀಜ ಮರವಾಗುತ್ತ ಬಂತು, ಅಂಬೇಡ್ಕರ್ ಕಾಲದಲ್ಲಿ ಪ್ರಜಾಪ್ರಭುತ್ವದ ಹಣ್ಣು ಕೊಟ್ಟರು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಣ್ಣಿಸಿದರು. ಬುದ್ದ, ಬಸವ,ಅಂಬೇಡ್ಕರ್ ಸಮ ಸಮಾಜ ನಿರ್ಮಾಣವಾಗಬೇಕು ಎಂಬ ಕನಸಿನೊಂದಿಗೆ ಜೀವವನ್ನೇ ಸವೆಸಿದರು. ಬುದ್ದ ನೆಟ್ಟ ಬೀಜ ಬಸವಣ್ಣನ ಕಾಲದಲ್ಲಿ ಮರವಾಯಿತು ಆದರೆ ಅಂಬೇಡ್ಕರ್ ಕಾಲದಲ್ಲಿ ಪ್ರಜಾಪ್ರಭುತ್ವ ಬಂದು ಗಿಡದಲ್ಲಿದ್ದ ಹಣ್ಣು ದೇಶದ ಜನರು ತಿನ್ನುತ್ತಿದ್ದಾರೆ ಇದು ಸಾಮಾನ್ಯ ಸಂಗತಿನಾ ಎಂದರು. ಬಲಾಡ್ಯರಿಂದ ಬಲ ಹೀನರಿಗೆ ಅಭಿವೃದ್ದಿ,ರಕ್ಷಣೆ ನೀಡುವುದೇ ಪ್ರಜಾಪ್ರಭುತ್ವದ ಆಶಯವಾಗಿದೆ. ಸ್ವಾಭಿಮಾನದ ಬದುಕು ಬಯಸಿದ ಬುದ್ದ,ಬಸವ,ಅಂಬೇಡ್ಕರ್ ಚರಿತ್ರೆಯಲ್ಲಿ ಉಳಿದಿದ್ದಾರೆ.ಅವರ ಸ್ಮರಣೆ ಆಗಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.