ಕೇಂದ್ರ ಸಚಿವ ಖೂಬಾ ವಿರುದ್ಧ ಪಿತೂರಿ: ಗುರುನಾಥ ಕೊಳ್ಳುರ್‌

By Kannadaprabha NewsFirst Published Jun 19, 2022, 4:00 AM IST
Highlights

*  ಕೆಲವರು ರಾಜಕೀಯ ಸ್ವಾರ್ಥ, ದುರುದ್ದೇಶದಿಂದ ಇಲ್ಲದ ವಿವಾದ ಸೃಷ್ಟಿ
*  ಸಚಿವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ
*  ಬೀದರ್‌ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತವಾಗಿ ದುಡಿಯುತ್ತಿರುಬ ಖೂಬಾ
 

ಬೀದರ್‌(ಜೂ.19):  ಗೊಬ್ಬರ ಸರಬರಾಜಿಗೆ ಸಂಬಂ​ಧಿಸಿದಂತೆ ಶಾಲಾ ಶಿಕ್ಷಕರೊಬ್ಬರು ರೈತನ ಹೆಸರಿನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ದೂರವಾಣಿಯಲ್ಲಿ ಕಿರಿಕಿರಿ ಮಾಡಿ, ಅಸಭ್ಯ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ ಎಂದು ಹಿರಿಯ ಉದ್ಯಮಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್‌ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ ಭಗವಂತ ಖೂಬಾ ಅವರು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕಳೆದ ಎಂಟು ವರ್ಷದಿಂದ ಸಂಸದರಾಗಿ, ಸಚಿವರಾಗಿ, ದಕ್ಷತೆ, ನಿಷ್ಠೆಯಿಂದ ದಿನದ 24 ಗಂಟೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಸಂಸದರಾಗಿ ಬೀದರ್‌ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತವಾಗಿ ದುಡಿಯುತ್ತಿದ್ದಾರೆ. ಹೆದ್ದಾರಿ, ರೈಲ್ವೆ ಸೇರಿ ಅನೇಕ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ.

Crop Insurance: ರೈತರಿಗೆ 15 ದಿನದಲ್ಲಿ ಖಾಸಗಿ ಬೆಳೆ ವಿಮೆ ಪರಿಹಾರ: ಭಗವಂತ ಖೂಬಾ

ಕೇಂದ್ರ ಸಚಿವ ಸಂಪುಟದಲ್ಲಿ ಬೀದರ್‌ ಜಿಲ್ಲೆಯಿಂದ ಮೊದಲ ಬಾರಿ ಪ್ರಾತಿನಿಧ್ಯ ಪಡೆದಿದ್ದು, ಸಚಿವರಾಗಿ ತಮಗೆ ವಹಿಸಿದಂತಹ ಮೂರೂ ಇಲಾಖೆಗಳ ಜವಾಬ್ದಾರಿ ಅತ್ಯಂತ ಸಮರ್ಥವಾಗಿ ನಿರ್ವಹಿಸಲು ಹಗಲಿರುಳು ಪ್ರಯತ್ನಿಸುತ್ತಿದ್ದಾರೆ. ಎಲ್ಲರೊಂದಿಗೆ ಬೆರೆತು, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡುವ ಇವರ ಕಾರ್ಯಶೈಲಿ ವಿಶಿಷ್ಟ ಹಾಗೂ ಮಾದರಿಯಾಗಿದೆ. ಹೀಗಿರುವಾಗ ಕೆಲವರು ರಾಜಕೀಯ ಸ್ವಾರ್ಥ, ದುರುದ್ದೇಶದಿಂದ ಇಲ್ಲದ ವಿವಾದ ಸೃಷ್ಟಿಸಿ ಇವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ಗುರುನಾಥ ಕೊಳ್ಳುರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

click me!