
ಹಾನಗಲ್ಲ (ಫೆ.7) : ಈ ಬಾರಿ ಸ್ಥಳೀಯರಿಗೆ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪಶ್ಚಾತ್ತಾಪ ಪಡಬೇಕಾಗುತ್ತದೆ. ರಾಜಕೀಯ ಧ್ರುವೀಕರಣ ಅನಿವಾರ್ಯ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ಗುಡುಗಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಚುನಾವಣೆಗೆ ನನಗೆ ಅವಕಾಶ ನೀಡಲಿಲ್ಲ. ಎಂಎಲ್ಸಿ ಮಾಡುವುದಾಗಿ ಭರವಸೆ ನೀಡಿ ನನಗೆ ಮೋಸ ಮಾಡಿದರು. ಈ ಬಾರಿ ನನಗೆ ಟಿಕೆಟ್ ಕೊಡುತ್ತಾರೆಂಬ ವಿಶ್ವಾಸವನ್ನು ಹೊಂದಿದ್ದೇನೆ ಎಂದರು.
Ticket Fight: ಮೂಲ ಕಾಂಗ್ರೆಸ್ಸಿಗ ವಾಸುಗೆ ಟಿಕೆಟ್ ಘೋಷಿಸಿದ ಮೊಯ್ಲಿ: ಸಿದ್ದರಾಮಯ್ಯ ಬಣಕ್ಕೆ ಠಕ್ಕರ್
50 ವರ್ಷಗಳಿಂದ ಕಾಂಗ್ರೆಸ್ ನಿಷ್ಠನಾಗಿ, ವಿಚಲಿತನಾಗದೆ, ಪಕ್ಷಕ್ಕೆ ದ್ರೋಹ ಮಾಡದೆ, ವರಿಷ್ಠರ ಮಾತಿನಂತೆ ನಡೆದುಕೊಂಡಿದ್ದೇನೆ. ನನಗೆ ಕಾಂಗ್ರೆಸ್ ಹೈಕಮಾಂಡ್ ಮತ್ತೆ ಅನ್ಯಾಯ ಮಾಡುವುದಿಲ್ಲ ಎಂದು ನಂಬಿದ್ದೇನೆ. ನಾವೇ ಕಟ್ಟಿದ ಕಾಂಗ್ರೆಸ್ ಮನೆಗೆ ದ್ರೋಹ ಮಾಡುವ ಮನಸ್ಸಿಲ್ಲ. ಇದನ್ನು ಹೈಕಮಾಂಡ್ ನನ್ನ ದೌರ್ಬಲ್ಯ ಎಂದು ಭಾವಿಸಿದರೆ ಅದಕ್ಕೆ ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೇ ಪಶ್ಚಾತ್ತಪ ಅನುಭವಿಸಬೇಕಾದೀತು ಎಂದು ಎಚ್ಚರಿಸಿದರು.
ಹಿಂದಿನ ಎರಡು ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಪಕ್ಷ ನಿಷ್ಠೆಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮನೆಮನೆಗೆ ತೆರಳಿ ಪ್ರಚಾರ ಮಾಡಿದ್ದೇನೆ. ಈಗಲೂ ನಾನು ಯಾರನ್ನೂ ಟೀಕಿಸುವ ಉದ್ದೇಶ ಹೊಂದಿಲ್ಲ. ಹೈಕಮಾಂಡ್ ಮಾತು ಕೊಟ್ಟಂತೆ ನನ್ನನ್ನು ಅಭ್ಯರ್ಥಿ ಮಾಡಲಿ. ಇಲ್ಲವೇ ಹಾನಗಲ್ಲ ತಾಲೂಕಿನ ಸ್ಥಳೀಯರನ್ನು ಯಾರನ್ನಾದರೂ ಅಭ್ಯರ್ಥಿ ಮಾಡಲಿ ಎಂದು ಆಗ್ರಹಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆದ್ಯತೆ ಇಲ್ಲ. ನಾವು ಮನೋಹರ ತಹಶೀಲ್ದಾರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಪಕ್ಷದ ಹೈಕಮಾಂಡ್ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂದು ನಂಬಿದ್ದೇವೆ. ಸ್ಥಳೀಯರಿಗೆ ಟಿಕೆಟ್ ನೀಡದಿದ್ದರೆ ತಾಲೂಕಿನಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ನಡೆಸಿ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ. ಎಂತಹದೇ ಸಂದರ್ಭದಲ್ಲಿ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಮಾರುತಿ ಪುರ್ಕಿ ಮಾತನಾಡಿ, ಹಾನಗಲ್ಲ ತಾಲೂಕಿನ ಆರು ಜಿಪಂ ಕ್ಷೇತ್ರದಲ್ಲಿ ಸಂಘಟನಾ ಸಮಾವೇಶ ಯೋಜನೆ ಮಾಡಲಾಗಿದ್ದು, ಫೆ.8ರಂದು ತಾಲೂಕಿನ ಶಿವಪುರದ ಮೈದಾನದಲ್ಲಿ ಮೊದಲ ಕಾರ್ಯಕರ್ತರ ಸಭೆ ಹಾಗೂ ರೈತ ಜನಸ್ಪಂದನಾ ಸಭೆಯನ್ನು ಮಾಡುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಎಲ್ಲ ಜಿಪಂ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಿ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದೇವೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಮಾಜಿ ಜಿಪಂ ಸದಸ್ಯ ರಾಘವೇಂದ್ರ ಸುರೇಶ ದೊಡ್ಡಕುರುಬರ, ತಹಶೀಲ್ದಾರ, ರವಿ ಚಿಕ್ಕೇರಿ, ಉಮೇಶ ವಿರುಪಣ್ಣನವರ, ಎಂ.ಎಂ. ವೆಂಕಟಾಪೂರ, ವಿನಾಯಕ ಕುರುಬರ ಇದ್ದರು.
Dharwad: ಕುರುಬ ಸಮುದಾಯಕ್ಕೊಂದು ಟಿಕೆಟ್ ಕೊಡಿ: ಈವರೆಗೆ ಬಿಜೆಪಿ ಕುರುಬರಿಗೆ ಟಿಕೆಟ್ ಕೊಟ್ಟಿಲ್ಲವೇಕೆ?
ಪಕ್ಷ ನಮಗೆ ಯಾವುದೆ ನೋಟಿಸ್ ನೀಡಿಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ಮಾಡಿದರೆ ನಾವು ಅಂಜುವುದಿಲ್ಲ. ಪಕ್ಷದ ಸಂಘಟನೆಗಾಗಿ ಗ್ರಾಮ ದರ್ಶನ ಮಾಡುತ್ತಿದ್ದೇವೆ. ಪಕ್ಷದ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸುತ್ತಿದ್ದೇವೆ.
ಮನೋಹರ ತಹಶೀಲ್ದಾರ, ಮಾಜಿ ಸಚಿವರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.