
ಬೆಂಗಳೂರು (ಡಿ.01): ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೂರು ರಾಜ್ಯಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಛತ್ತೀಸ್ಗಢ, ತೆಲಂಗಾಣ ಹಾಗೂ ಮಧ್ಯಪ್ರದೇಶಗಳಲ್ಲಿ ಗೆಲ್ಲುತ್ತೇವೆ. ರಾಜಸ್ಥಾನದಲ್ಲಿ ಸ್ವಲ್ಪ ಕಷ್ಟ ಇದ್ದು, 50:50 ಅವಕಾಶ ಇದೆ ಎಂದು ಹೇಳಿದರು. ಇನ್ನು ಮಿಜೋರಂನಲ್ಲೂ ಆಶಾಭಾವನೆ ಇಟ್ಟುಕೊಂಡಿದ್ದೇವೆ. ಪಂಚರಾಜ್ಯ ಚುನಾವಣೆಯಲ್ಲಿ ಗೆಲ್ಲುವ ಜತೆಗೆ ಲೋಕಸಭೆ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದರು.
ಜಾತಿ ಗಣತಿ ಬಗ್ಗೆ ಪ್ರಬಲ ಸಮರ್ಥನೆ: ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿ ಗಣತಿ ವರದಿಗೆ ವ್ಯಾಪಕ ಪರ-ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 168 ಕೋಟಿ ರು. ಅನುದಾನ ನೀಡಿ ಜಾತಿ ಗಣತಿ ವರದಿ ಪ್ರಾರಂಭ ಮಾಡಿಸಿದ್ದೇ ನಾನು. ಜಾತಿ ಗಣತಿ ಎಂದು ಹೇಳಿದ ತಕ್ಷಣ ಚಪ್ಪಾಳೆ ತಟ್ಟುವುದಲ್ಲ. ಯಾರು ಮಾಡಿಸಿದರು, ಏಕೆ ಮಾಡಿಸಿದರು ಎಂದು ಗೊತ್ತಾಗಬಾರದೇ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗೋದು ಖಚಿತ: ಕೆ.ಎಸ್.ಈಶ್ವರಪ್ಪ
ಜಾತಿ ರಹಿತ, ವರ್ಗ ರಹಿತ ಸಮ ಸಮಾಜ ನಿರ್ಮಾಣವಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಿಂದುಳಿದವರಿಗೆ ಯೋಜನೆಗಳನ್ನು ನೀಡಬೇಕೆಂದರೆ ನ್ಯಾಯಾಲಯ ಅಂಕಿ ಅಂಶಗಳನ್ನು ಕೇಳುತ್ತಿತ್ತು. ದಾಖಲೆ ಬೇಕಾಗಿದ್ದರಿಂದ ದೇಶದಲ್ಲೇ ಮೊದಲು ನಾನು ಜಾತಿ ಗಣತಿಗೆ ಆದೇಶಿಸಿದ್ದೆ. ಆದರೆ ವರದಿಯನ್ನು ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಸ್ವೀಕರಿಸಲಿಲ್ಲ. ಅವರಿಗೂ ಚಪ್ಪಾಳೆ ತಟ್ಟುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದರು. ಸಮ ಸಮಾಜ ನಿರ್ಮಾಣವಾಗಬೇಕು ಎಂದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಶಿವರಾಜ ತಂಗಡಗಿ, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಎಲ್ಲಿದ್ದಾರೆ ಎಂಬುದು ಗೊತ್ತಾಬೇಕಲ್ಲವೇ ಎಂದು ವೇದಿಕೆಯಲ್ಲೇ ಇದ್ದ ಇವರೆಲ್ಲರ ಕಡೆ ನೋಡುತ್ತಾ ಹೇಳಿದ ಸಿದ್ದರಾಮಯ್ಯ, ಇತಿಹಾಸ ತಿಳಿದಿರುವವರು ಮಾತ್ರ ಭವಿಷ್ಯ ರೂಪಿಸಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದರು.
ಸೋನಿಯಾಗಾಂಧಿಗೆ ತಲೆಬಾಗಲಿಲ್ಲವೆಂದು ಜೈಲಿಗೆ ಹೋಗಬೇಕಾಯ್ತು: ಜನಾರ್ದನ ರೆಡ್ಡಿ
ಹಿಂದಿನ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷದಿಂದ ಕನಕದಾಸ ಜಯಂತಿ ಆಚರಣೆ ಮಾಡಿರಲಿಲ್ಲ. ಏಕೆ ನಿಲ್ಲಿಸಿದರು ಎಂದು ನೀವು ಕೇಳಲಿಲ್ಲ. ಎಲ್ಲರ ಹಿಂದೆಯೂ ಹೋಗುತ್ತೀರಿ. ಯಾರು ನಿಮ್ಮ ಜೊತೆ ಇರುತ್ತಾರೋ, ನಿಮಗೆ ರಕ್ಷಣೆ ನೀಡುತ್ತಾ ಸಹಾಯ ಮಾಡುತ್ತಾರೋ ಅಂತಹವರ ಜೊತೆ ನೀವಿರಿ. ಎಲ್ಲರಿಗೂ ಚಪ್ಪಾಳೆ ತಟ್ಟಬೇಡಿ ಎಂದು ಕುರುಬ ಸಮುದಾಯಕ್ಕೆ ಕರೆ ನೀಡಿದರು. ಕನಕಶ್ರೀ ಪ್ರಶಸ್ತಿ ಪ್ರದಾನವೂ ನಿಂತು ಹೋಗಿದ್ದರಿಂದ ಇಂದು ಬೆಳಿಗ್ಗೆಯೇ ಇಲಾಖೆ ಸಚಿವರನ್ನು ಸಂಪರ್ಕಿಸಿ ಪ್ರಶಸ್ತಿ ಪ್ರದಾನ ಮುಂದುವರೆಸಲು ಹೇಳಿ ನಿವೃತ್ತ ಇಂಜನಿಯರ್ ದಿ.ಲಿಂಗಪ್ಪ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಸೂಚಿಸಿದೆ. ಸಮುದಾಯದ ಅಭಿವೃದ್ಧಿಗೆ ಅವರು ಸಾಕಷ್ಟು ಶ್ರಮಿಸಿದ್ದಾರೆ. ಇನ್ನು ಮುಂದೆ ಪ್ರಶಸ್ತಿ ನೀಡುವಾಗ ಕೇವಲ ಕನಕದಾಸರ ಸಾಹಿತ್ಯಕ್ಕೆ ಸಂಬಂಧಿಸಿದವರನ್ನು ಮಾತ್ರ ಪರಿಗಣಿಸದೇ ಕನಕದಾಸರ ತತ್ವ, ಸಿದ್ಧಾಂತ ಅನುಸರಿಸಿ ಸೇವೆ ಸಲ್ಲಿಸುತ್ತಿರುವವರನ್ನೂ ಪರಿಗಣಿಸಬೇಕು ಎಂದು ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.