
ನವದೆಹಲಿ : ಬಿಜೆಪಿ ಜತೆ ಸೇರಿಕೊಂಡು ಚುನಾವಣಾ ಆಯೋಗ ಮತಗಳ್ಳತನ ನಡೆಸಿದೆ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆ.17ರಿಂದ ಬಿಹಾರದಿಂದ ‘ಮತದಾರ ಅಧಿಕಾರ ಯಾತ್ರೆ’ಯನ್ನು ಆರಂಭಿಸುವ ಮೂಲಕ ಆಯೋಗದ ವಿರುದ್ಧ ನೇರ ಹಣಾಹಣಿಗೆ ಮುಂದಾಗಲಿದೆ ಎಂದು ಘೋಷಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಆ.17ರಿಂದ ಮತದಾರ ಅಧಿಕಾರ ಯಾತ್ರೆಯನ್ನು ಆರಂಭಿಸುವ ಮೂಲಕ ಬಿಹಾರದ ಮಣ್ಣಿನಿಂದಲೇ ಚುನಾವಣಾ ಆಯೋಗದ ಮತಗಳ್ಳತನದ ವಿರುದ್ಧ ನೇರ ಯುದ್ಧ ಮಾಡಲಿದ್ದೇವೆ. ಇದು ಕೇವಲ ಚುನಾವಣಾ ಸಮಸ್ಯೆಗಾಗಿ ಅಲ್ಲ, ಇದು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ‘ಒಬ್ಬ ವ್ಯಕ್ತಿ-ಒಂದು ಮತ’ ನೀತಿಯನ್ನು ರಕ್ಷಿಸಲು ನಡೆಯುತ್ತಿರುವ ನಿರ್ಣಾಯಕ ಯುದ್ಧ’ ಎಂದು ತಿಳಿಸಿದ್ದಾರೆ.ಯಾತ್ರೆಯು ಆ.17ರಂದು ಸಸಾರಾಂನಲ್ಲಿ ಆರಂಭವಾಗಿ ಸೆ.1ರಂದು ಪಟನಾದ ಗಾಂಧಿ ಮೈದಾನದಲ್ಲಿ ನಡೆಯುವ ರ್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ.
ಒಂದು ನಿಮಿಷದ ವಿಡಿಯೋ
ನವದೆಹಲಿ: ‘ಮತಗಳ್ಳತನ’ದ ಆರೋಪ ಮುಂದಿಟ್ಟುಕೊಂಡು ಚುನಾವಣಾ ಆಯೋಗ, ಬಿಜೆಪಿ ವಿರುದ್ಧದ ದೇಶವ್ಯಾಪಿ ಅಭಿಯಾನಕ್ಕೆ ಕಾಂಗ್ರೆಸ್ ಬುಧವಾರ ಚಾಲನೆ ನೀಡಿದೆ. ಇದರ ಭಾಗವಾಗಿ ಯಾವ ರೀತಿ ನಕಲಿ ಮತದಾನ ನಡೆಯತ್ತದೆಂಬ ವಿವರಣೆಯಿರುವ ಸುಮಾರು ಒಂದು ನಿಮಿಷದ ವಿಡಿಯೋವೊಂದನ್ನೂ ಪಕ್ಷ ಬಿಡುಗಡೆ ಮಾಡಿದೆ.
ವಿಡಿಯೋದಲ್ಲೇನಿದೆ?
ದಂಪತಿಗಳು ಮತಕೇಂದ್ರವೊಂದಕ್ಕೆ ಪ್ರವೇಶಿಸುವಾಗ ಕೇಸರಿ ಶಾಲು ಹಾಕಿದ ವ್ಯಕ್ತಿಗಳಿಬ್ಬರು ಅವರನ್ನು ತಡೆಯುತ್ತಾರೆ.
ನಿಮ್ಮ ಮತಗಳನ್ನು ಈಗಾಗಲೇ ನಾವು ಚಲಾಯಿಸಿದ್ದೇವೆ, ನೀವು ವಾಪಸ್ ಹೋಗಿ ಎನ್ನುವ ಸೂಚನೆ ನೀಡುತ್ತಾರೆ. ಬಳಿಕ ಆ ಇಬ್ಬರು ವ್ಯಕ್ತಿಗಳು ‘ಮತಕಳ್ಳತನ ಆಯೋಗ’ದ ಬೋರ್ಡ್ ಇರುವ ಟೇಬಲ್ನಲ್ಲಿ ಕೂತಿರುವ ಅಧಿಕಾರಿಗೆ ಗೆಲುವಿನ ಸನ್ನೆ ತೋರಿಸುತ್ತಾರೆ.
ಯಾರೋ ನಿಮ್ಮ ಮತವನ್ನು ಕಿತ್ತುಕೊಳ್ಳಲು ಬಿಡಬೇಡಿ. ಈ ಬಾರಿ ಪ್ರಶ್ನೆ ಮಾಡಿ , ಉತ್ತರಕ್ಕಾಗಿ ಆಗ್ರಹಿಸಿ. ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿಯ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.