ಧಾರವಾಡ: ಬಿಎಸ್‌ವೈ ಸೂಚನೆಯಂತೆ ಲಿಂಬಿಕಾಯಿಗೆ ಕಾಂಗ್ರೆಸ್‌ ಟಿಕೆಟ್‌?: ಟಿಕೆಟ್ ಆಕಾಂಕ್ಷಿಗಳ ಆಕ್ರೋಶ!

By Kannadaprabha NewsFirst Published Apr 2, 2023, 12:03 PM IST
Highlights
  • ಬಿಎಸ್‌ವೈ ಸೂಚನೆಯಂತೆæ ಲಿಂಬಿಕಾಯಿಗೆ ಕಾಂಗ್ರೆಸ್‌ ಟಿಕೆಟ್‌?
  • ಕಾಂಗ್ರೆಸ್‌ ನಾಯಕರ ವಿರುದ್ಧ ಹು-ಧಾ ಪಶ್ಚಿಮ ಕ್ಷೇತ್ರದ ಕೈ ಆಕಾಂಕ್ಷಿಗಳ ಆಕ್ರೋಶ
  • ಸುರ್ಜೆವಾಲಾ ವಿರುದ್ಧವೂ ಹರಿಹಾಯ್ದು, ಅವ್ರೇನು ಬದನೆಕಾಯಿ ತಿನ್ತಾ ಇದ್ದಾರಾ?: ನೀರಲಕೇರಿ

ಧಾರವಾಡ (ಏ.2) : ಮಾಜಿ ಸಿಎಂ, ಬಿಜೆಪಿ ಮುಖಂಡ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಮೋಹನ ಲಿಂಬಿಕಾಯಿಗೆ ರಾಜ್ಯ ಕಾಂಗ್ರೆಸ್‌ ವರಿಷ್ಠರು ಟಿಕೆಟ್‌ ನೀಡಲು ಮುಂದಾಗಿದ್ದಾರೆ ಎಂದು ಪಶ್ಚಿಮ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಗಳು ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ(Randeep singh surjewala) ಮೇಲೂ ಹರಿಹಾಯ್ದು, ಅವರಿಗೆ ಸ್ಥಳೀಯ ವಿಷಯಗಳ ಬಗ್ಗೆ ಮಾಹಿತಿ ಇಲ್ಲ. ಅವರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ, ಕಾರ್ಯಕರ್ತರ ನಾಡಿ ಮಿಡಿತ ಅವರು ಅರಿತಿಲ್ಲ. ಅವರೇನು ಬದನೆಕಾಯಿ ತಿನ್ನುತ್ತಿದ್ದಾರಾ? ಎಂದು ತರಾಟೆಗೆ ತೆಗೆದುಕೊಂಡರು.

Latest Videos

KARNATAKA ELECTION 2023: ಕದನ ಕುತೂಹಲ ಹೆಚ್ಚಿಸಿದ ಹು-ಧಾ ಮೀಸಲು ಕ್ಷೇತ್ರ!

ಶನಿವಾರ ಸುದ್ದಿಗೋಷ್ಠಿ ನಡೆಸಿದ ಟಿಕೆಟ್‌ ಆಕಾಂಕ್ಷಿಗಳೆಲ್ಲರೂ, ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದರು. ಒಂದು ವೇಳೆ ಲಿಂಬಿಕಾಯಿಗೆ ಟಿಕೆಟ್‌ ಕೊಟ್ಟರೆ, ನಾವು ಸಮಾನ ಮನಸ್ಕರೆಲ್ಲರೂ ಸೇರಿಕೊಂಡು ಪ್ರತ್ಯೇಕ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳೆಲ್ಲ ಸೇರಿ ಎಚ್ಚರಿಕೆ ನೀಡಿದ್ದಾರೆ.

ಕ್ಷೇತ್ರದಲ್ಲಿ 10 ಜನ ಆಕಾಂಕ್ಷಿಗಳಿದ್ದೇವೆ. ಆಕಾಂಕ್ಷಿಗಳನ್ನು ಬಿಟ್ಟು ಹೊರಗಿನಿಂದ ಬಂದವರಿಗೆ ಟಿಕೆಟ್‌ ನೀಡಿದರೆ ಹೇಗೆ? ಎಂದು ಪ್ರಶ್ನಿಸಿದ ಆಕಾಂಕ್ಷಿಗಳು, ಒಂದು ವೇಳೆ ಟಿಕೆಟ್‌ ನೀಡಿದಲ್ಲಿ ಆಕಾಂಕ್ಷಿಗಳ ಪೈಕಿ ಒಬ್ಬರನ್ನು ನಾವೇ ಕಣಕ್ಕಿಳಿಸುತ್ತೇವೆ. ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ, ನಾವು ಗೆದ್ದು ತೋರಿಸುತ್ತೇವೆ. ಗೆದ್ದ ನಂತರ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪ್ರಬಲ ಆಕಾಂಕ್ಷಿಯಾಗಿರುವ ಪಿ.ಎಚ್‌. ನೀರಲಕೇರಿ(PH Niralakeri), ಲಿಂಬಿಕಾಯಿ ಅವರಿಗೆ ಯಡಿಯೂರಪ್ಪ(BS Yadiyurappa) ಹೇಳಿದ್ದಾರೆ ಎಂದು ಕಾಂಗ್ರೆಸ್ಸಿನಲ್ಲಿ ಟಿಕೆಟ್‌ ಕೊಡುತ್ತಿದ್ದಾರೆ. ರಾಜ್ಯ ನಾಯಕರು ಪಕ್ಷದ ಸಿದ್ಧಾಂತ, ತತ್ವಗಳನ್ನು ಗಾಳಿ ತೂರಿ ವಲಸಿಗರಿಗೆ ಆದ್ಯತೆ ನೀಡುತ್ತಿದ್ದಾರೆ. ನಾವು ಪಕ್ಷದ ನಿಯಮದಂತೆ ಅರ್ಜಿ ಸಲ್ಲಿಸಿದ್ದೇವೆ. ಇದೀಗ ಪಕ್ಷಕ್ಕೆ ಬಂದ ಮೋಹನ ಲಿಂಬಿಕಾಯಿಗೆ ಆದ್ಯತೆ ನೀಡಿದ್ದು ಯಾವ ನ್ಯಾಯ? ನಮಗೆ ಅವಕಾಶ ನೀಡದಿದ್ದರೆ, ನಮ್ಮಲ್ಲಿ ಒಬ್ಬರನ್ನು ಕಣಕ್ಕಿಳಿಸಿ ಗೆಲ್ಲಿಸಿ ಕಾಂಗ್ರೆಸ್‌ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ಸವಾಲು ಹಾಕಿದರು.

ಟಿಕೆಟ್‌ ಬಯಸಿ 10 ಜನ ಅರ್ಜಿ ಸಲ್ಲಿಸಿದ್ದೇವೆ. ಸ್ಥಳೀಯ ಶಾಸಕರು ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷಿಸಿದ ಕಾರಣ ಜನ ಕಾಂಗ್ರೆಸ್ಸಿನತ್ತ ಒಲವು ತೋರುತ್ತಿದ್ದಾರೆ. ಇದಕ್ಕೆ ಇಲ್ಲಿನ ಕಾಂಗ್ರೆಸ್‌ ಮುಖಂಡರ, ಕಾರ್ಯಕರ್ತರ ಶ್ರಮ ಕಾರಣ. ಇದರ ಫಲ ಚುನಾವಣೆಯಲ್ಲಿ ಸಿಗಲಿದೆ. ಆದರೆ, ಈಗ ನಮ್ಮನ್ನು ಬಿಟ್ಟು ಮತ್ತೊಬ್ಬರಿಗೆ ಅವಕಾಶ ನೀಡುತ್ತಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ನಾಯಕರ ಒಳ ಒಪ್ಪಂದದಿಂದ ಇಂತಹ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಆದರೆ, ನಾವು ಸುಮ್ಮನಿರದೆ, ಈ ವಿಷಯವನ್ನು ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಗಮನಕ್ಕೆ ತರುತ್ತೇವೆ. ಅವರು ಸೂಕ್ತ ನಿರ್ಣಯಕ್ಕೆ ಬರುವ ವಿಶ್ವಾಸ ಇದೆ ಎಂದರು.

ಆಕಾಂಕ್ಷಿಗಳಿಗೆ ಸಮೀಕ್ಷೆ ನಡೆಸಿದ್ದೇವೆ ಎಂದು ರಾಜ್ಯ ನಾಯಕರು ಹೇಳುತ್ತಾರೆ. ಆದರೆ, ಇತ್ತೀಚಿಗಷ್ಟೇ ಪಕ್ಷಕ್ಕೆ ಬಂದಿರುವ ಲಿಂಬಿಕಾಯಿಗೆ ಟಿಕೆಟ್‌ ನೀಡಲು ಸಮೀಕ್ಷೆ ಸಂಬಂಧಪಡುವುದಿಲ್ಲವೇ? ಲಿಂಬಿಕಾಯಿ ಅವರ ಸಮೀಕ್ಷೆ ನಡೆಸಿದ್ದಾರಾ? ಎಂದು ಪ್ರಶ್ನಿಸಿದರು. ರಾಜ್ಯ ನಾಯಕರು ಇದೇ ಧೋರಣೆ ಮುಂದುವರಿಸಿದರೆ, ಕ್ಷೇತ್ರದ ಜನರ ಜತೆ ಚರ್ಚಿಸಿ ನಮ್ಮ ತೀರ್ಮಾನ ಕೈಕೊಳ್ಳುತ್ತೇವೆ ಎಂದರು.

ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಕಿತ್ತೂರ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ, ಸಿದ್ದಣ್ಣ ಕಂಬಾರ, ವಿರುಪಾಕ್ಷಪ್ಪ ಕೊಂಗವಾಡ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಧಾರವಾಡ: ಬ್ರಾಹ್ಮಣ ಸಮಾಜಕ್ಕೆ ಟಿಕೆಟ್‌ ನೀಡಿದ ಪಕ್ಷಕ್ಕೆ ನಮ್ಮ ಬೆಂಬಲ: ವಿಪ್ರ ಅಧ್ಯಕ್ಷ ಆರ್‌ ಡಿ ಕುಲಕರ್ಣಿ

ಸುರ್ಜೇವಾಲಾಗೇನು ಗೊತ್ತು, ಅವರಿಂದ ಪಕ್ಷಕ್ಕೆ ಲಾಭವಿಲ್ಲ

ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸುವ ಕೆಲಸವನ್ನು ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲಾ ಸರಿಯಾಗಿ ಮಾಡುತ್ತಿಲ್ಲ. ಈ ಕ್ಷೇತ್ರ ಬಗ್ಗೆ ಅವರಿಗೇನೂ ಗೊತ್ತಿಲ್ಲ. ಇಲ್ಲಿನ ಪರಿಸ್ಥಿತಿ ಅರಿತುಕೊಳ್ಳಲು ಈ ವರೆಗೆ ಸುರ್ಜೆವಾಲಾಗೆ ಆಗಿಲ್ಲ. ಅವರೇನೂ ಬದನೆಕಾಯಿ ತಿನ್ನುತ್ತಿದ್ದರಾ? ಎಂದು ಕಿಡಿಕಾರಿದ ನೀರಲಕೇರಿ, ಕಾರ್ಯಕರ್ತರು, ಆಕಾಂಕ್ಷಿಗಳ ಜತೆಗೆ ನಡೆದುಕೊಳ್ಳುವ ರೀತಿಯೂ ಅವರಿಗೆ ಗೊತ್ತಿಲ್ಲ. ಇವರಿಂದ ಪಕ್ಷಕ್ಕೆ ಯಾವುದೇ ಲಾಭ ಇಲ್ಲ. ಕಾರ್ಯಕರ್ತರಿದ್ದರೆ ಮಾತ್ರ ನಾಯಕರು. ಪಕ್ಷದ ತತ್ವ, ಸಿದ್ಧಾಂತದಂತೆ ನಡೆಯದ ನಾಯಕರಿಗೆ ತಕ್ಕ ಬುದ್ಧಿ ಕಲಿಸುತ್ತೇವೆ ಎಂದು ನೀರಲಕೇರಿ ಕಿಡಿಕಾರಿದರು.

Political Express: ಚಾಮರಾಜನಗರ ಬಿಜೆಪಿಯಲ್ಲಿ ಗೊಂದಲ, ಹೊರಗಿನವರಿಗೆ ವಿರೋಧ!

click me!