ಕಾಂಗ್ರೆಸ್‌ನಿಂದ ಆದಿವಾಸಿಗಳಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ

By Govindaraj SFirst Published Mar 20, 2023, 10:22 PM IST
Highlights

ಬೇಸಿಗೆ ದಿನಗಳು ಆರಂಭವಾಗಿದ್ದು, ಕೊಡಗಿನ ಚುನಾವಣಾ ಕಣ ಕೂಡ ಅಷ್ಟೇ ಬಿಸಿಯಾಗುತ್ತಿದೆ. ಪೊನ್ನಂಪೇಟೆಯಲ್ಲಿ ಸೋಮವಾರ ಬುಡಕಟ್ಟು ಸಮುದಾಯಗಳ ಸಮಾವೇಶ ನಡೆಯಿತು. 

ವರದಿ: ರವಿ.ಎಸ್.ಹಳ್ಳಿ.ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮಾ.20): ಬೇಸಿಗೆ ದಿನಗಳು ಆರಂಭವಾಗಿದ್ದು, ಕೊಡಗಿನ ಚುನಾವಣಾ ಕಣ ಕೂಡ ಅಷ್ಟೇ ಬಿಸಿಯಾಗುತ್ತಿದೆ. ಪೊನ್ನಂಪೇಟೆಯಲ್ಲಿ ಸೋಮವಾರ ಬುಡಕಟ್ಟು ಸಮುದಾಯಗಳ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಅವರನ್ನು ಗೆಲ್ಲಿಸಿ ಎಂದು ಸ್ವತಃ ಪೊನ್ನಣ್ಣ ಅವರೇ ಬಹಿರಂಗವಾಗಿ ಹೇಳುವ ಮೂಲಕ ಪೊನ್ನಣ್ಣ ಅವರೇ ಕಾಂಗ್ರೆಸ್ ಅಭ್ಯರ್ಥಿ ಎನ್ನುವುದನ್ನು ಖಚಿತಪಡಿಸಿದರು. ವಿಶೇಷವೆಂದರೆ ಸಮಾವೇಶದಲ್ಲಿ ಪೊನ್ನಣ್ಣ ಅವರು ಕೊಡಗು ಜಿಲ್ಲೆಗಾಗಿ ಅದರಲ್ಲೂ ಬುಡಕಟ್ಟು ಸಮುದಾಯಗಳಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದರು. 

ಬಳಿಕ ಮಾತನಾಡಿದ ಎ.ಎಸ್. ಪೊನ್ನಣ್ಣ, ಕೊಡಗಿನ ಆದಿವಾಸಿ ಬುಡಕಟ್ಟು ಜನರಿಗೆ ಕನಿಷ್ಟ ಸೌಲಭ್ಯಗಳಿಲ್ಲದೆ ಅತ್ಯಂತ ಹೀನಾಯ ಬದುಕು ನಡೆಸುತ್ತಿದ್ದಾರೆ. ಇಂದು ಸರ್ಕಾರದ ಯಾವುದೇ ಸೌಲಭ್ಯ ಇಲ್ಲದೆ ಜನರು ಕಣ್ಣೀರು ಸುರಿಸುತ್ತಿದ್ದಾರೆ. ಆ ಕಣ್ಣೀರು ಒರೆಸುವ ಮಾತಿರಲಿ, ಕನಿಷ್ಠ ಅದನ್ನು ಆಲಿಸುವ ಸೌಜನ್ಯವನ್ನು ಈ ಸರ್ಕಾರದ ಶಾಸಕರು ಉಳಿಸಿಕೊಂಡಿಲ್ಲ. ಹೀಗಾಗಿ ನನ್ನ ನೆಲದ ಜನರ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡುವುದಕ್ಕಾಗಿ ನಾನು ಹಗಲಿರುಳು ದುಡಿಯುವುದಕ್ಕೆ ಸಿದ್ದವಿದ್ದೇನೆ. ಇನ್ನೊಂದುವರೆ ತಿಂಗಳಲ್ಲಿ ಮತದಾನ ಬರಲಿದ್ದು, ಆ ಸಂದರ್ಭ ಎಲ್ಲರೂ ಹಣ, ಹೆಂಡಕ್ಕೆ ನಿಮ್ಮ ಮತ ಮಾರಿಕೊಳ್ಳದೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು. 

ಕೆಆರ್‌ಪಿಪಿ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಜನಾರ್ದನ ರೆಡ್ಡಿ

ದೊಡ್ಡಬಳ್ಳಾಪುರದ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೋವಿಡ್ ಇದ್ದಾಗ ಸರ್ಕಾರದ ಯಾವ ಪ್ರತಿನಿಧಿಯಾಗದಿದ್ದರೂ ಪೊನ್ನಣ್ಣ ಅವರು ಪ್ರತೀ ಆದಿವಾಸಿ ಕುಟುಂಬಗಳಿಗೆ ಆಹಾರ ಒದಗಿಸಿದರು. ಕಳೆದ ಮೂರು ಅವಧಿಯಿಂದ ಒಬ್ಬರೇ ಶಾಸಕರಾಗಿದ್ದಾರೆ. ಪರಿಶಿಷ್ಟ ಪಂಗಡದ ಒಂದು ಅಭಿವೃದ್ಧಿ ನಿಗಮ ಇದ್ದರೂ ಇದುವರೆಗೆ ಕೊಡಗಿನ ಬುಡಕಟ್ಟು ಜನರಿಗೆ ಇದುವರೆಗೂ ಯಾವುದೇ ಸೌಲಭ್ಯ ಕಲ್ಪಿಸಲಿಲ್ಲ. ಮೂರು ಬಾರಿಯಿಂದ ಶಾಸಕರಾಗಿದ್ದರೂ ಇದುವರೆಗೆ ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಿಲ್ಲ. ನಮ್ಮ ಗಿರಿಜನ ಮಕ್ಕಳು ವಿದ್ಯಾಭ್ಯಾಸ ಪಡೆದರೆ ಮಾತ್ರವೇ ನಾವು ನಮ್ಮ ಮಕ್ಕಳ ಜೀವನ ಸುಧಾರಿಸಲು ಸಾಧ್ಯ. 

ಅದು ಸಿಗಬೇಕಾದರೆ ನಮ್ಮ ಜನರ ಪರವಾಗಿ ಕೆಲಸ ಮಾಡುವ ಅಭ್ಯರ್ಥಿ ಪೊನ್ನಣ್ಣನಂತಹವರು ವಿಧಾನಸಭೆಗೆ ಹೋಗಲೇ ಬೇಕು ಎಂದರು. ಇನ್ನು ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಸಾಧುಕೋಕಿಲ ಮಾತನಾಡಿ ನಾನು ಕಾಮಿಡಿ ಮಾಡುತ್ತೇನೆ ನಿಜ. ಕಾಮಿಡಿ ಎಂದರೆ ನಿಮಗೂ ತುಂಬಾ ಇಷ್ಟ. ಆದರೆ ಬದುಕೇ ಕಾಮಿಡಿ ಆಗಬಾರದು. ಆದರೆ ಇಂದು ನಮ್ಮ ಬುಡಕಟ್ಟು ಜನರಿಗೆ ಯಾವುದೇ ಸೌಲಭ್ಯವಿಲ್ಲದೆ ಅವರ ಬದುಕು ಕಾಮಿಡಿ ಆಗಿದೆ. ಎಣ್ಣೆ, ಹಣಕ್ಕೆ ಯಾವುದೇ ರೀತಿಯಿಂದಲೂ ನಾವು ನಮ್ಮನ್ನು ನಾವು ಮಾರಾಟ ಮಾಡಿಕೊಳ್ಳದೆ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕಾಗಿದೆ ಎಂದರು. 

ಕಾಂಗ್ರೆಸ್ ಕೊಡಗು ಜಿಲ್ಲಾಧ್ಯಕ್ಷ ಧರ್ಮಜಉತ್ತಪ್ಪ ಮಾತನಾಡಿ ಇದು ಅಗ್ನಿ ಪರೀಕ್ಷೆಯಂತಿದ್ದು ಎಲ್ಲಾ ಸಮುದಾಯಗಳು ಒಗ್ಗೂಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ದುಡಿಯುತ್ತಿದ್ದೀರಿ ಇದು ನಿಜಕ್ಕೂ ಶ್ಲಾಘನೀಯ ವಿಷಯ. ಈಗಾಗಲೇ ಹೈಕಮಾಂಡ್ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಪೊನ್ನಣ್ಣ ಎನ್ನುವ ಸುಳಿವು ನೀಡಿದೆ. ಹೀಗಾಗಿ ಎಲ್ಲರೂ ಯಾವುದೇ ಸಣ್ಣ ಪುಟ್ಟ ವೈಮಸ್ಸುಗಳಿದ್ದರೂ ಅದನ್ನು ಮರೆತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡಬೇಕು ಎಂದರು. ಕೆಪಿಸಿಸಿ ಮುಖಂಡ ಅರುಣ್ ಮಾಚಯ್ಯ ಮಾತನಾಡಿ ಹಾಡಿಗಳಿಗೆ ಬೇಕಾಗಿರುವ ಸೌಲಭ್ಯ ಇದ್ದರೂ ಅದನ್ನು ದೊರೆಕಿಸಿಕೊಡಲು ಈ ಶಾಸಕರು ಆಸಕ್ತಿ ತೋರಿಸುತ್ತಿಲ್ಲ. 

ಉತ್ತರ ಕನ್ನಡ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ಸಚಿವ ಮುರುಗೇಶ್‌ ನಿರಾಣಿ

ಅರಣ್ಯ ಹಕ್ಕು ಕಾಯ್ದೆ ಇದ್ದರೂ ಅದನ್ನು ಜಾರಿ ಮಾಡುವಲ್ಲಿ ಈ ಸರ್ಕಾರ ವಿಫಲವಾಗಿದ್ದು ಕಣ್ಮುಚ್ಚಿ ಕುಳಿತಿದೆ. ಬುಡಕಟ್ಟು ಜನರಿಗಾಗಿ ವಿಶೇಷ ಪ್ರಣಾಳಿಕೆಯನ್ನು ನಮ್ಮ ಅಭ್ಯರ್ಥಿ ಪೊನ್ನಣ್ಣ ಸಿದ್ದ ಮಾಡಿದ್ದಾರೆ. ಐತಿಹಾಸಿಕ ಈ ಸಮಾವೇಶಗಳು ಕೊಡಗಿನ ಶಾಸಕರನ್ನು ಬದಲಾಯಿಸಿ, ಬುಡಕಟ್ಟು ಜನರ ಕಣ್ಣೀರು ಒರೆಸುವ ಕೆಲಸ ಆಗಲಿದೆ ಎಂದರು. ಇದೇ ಸಂದರ್ಭ ಬುಡಕಟ್ಟು ಜನರಿಗಾಗಿ 24 ಭರವಸೆಗಳ ಮೂಲಕ ವಿಶೇಷ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

click me!