ನನ್ನ ಹೆಸರು ಕೆಡಿಸಲು ವಿಪಕ್ಷಗಳ ಪ್ರಯತ್ನ: ಡಾ.ಯತೀಂದ್ರ ಕಿಡಿ

By Kannadaprabha NewsFirst Published Jul 3, 2024, 11:55 AM IST
Highlights

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ನನಗೂ ಏನು ಸಂಬಂಧ? ನಾನು ಪ್ರಾಧಿಕಾರದ ಸದಸ್ಯ ಕೂಡ ಅಲ್ಲ. ಆದರೂ ನನ್ನ ಹೆಸರು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು(ಜು.03):  ಸುಮ್ಮನೆ ಪ್ರತಿಪಕ್ಷದವರಿಗೆ ಆಧಾರವಿಲ್ಲದ ಆರೋಪ ಮಾಡೋದು ಚಾಳಿಯಾಗಿ ಬಿಟ್ಟಿದೆ. ಸುಮ್ಮನೆ ತೇಜೋವಧೆ ಮಾಡುತ್ತಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ನನಗೂ ಏನು ಸಂಬಂಧ? ನಾನು ಪ್ರಾಧಿಕಾರದ ಸದಸ್ಯ ಕೂಡ ಅಲ್ಲ. ಆದರೂ ನನ್ನ ಹೆಸರು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು ಹಗರಣದ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದೂ ಹೇಳಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಬದಲಾಯಿಸುತ್ತೇವೆ ಎಂದೂ ತಿಳಿಸಿದ್ದಾರೆ. ಈ ಸಂಬಂಧ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮಂತ್ರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಇಷ್ಟಾದರೂ ಬೇರೊಬ್ಬರ ಹೆಸರು ಹಾಳು ಮಾಡೋದು, ತೇಜೋವಧೆ ಮಾಡೋದು ನೀಚ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್ ಡೀಸೆಲ್ ದರ ಏರಿಕೆಗೆ ಬಿಜೆಪಿ ಕಾರಣ: ಕೇಂದ್ರದ ವಿರುದ್ಧ ಡಾ.ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ!

ಎಚ್.ವಿಶ್ವನಾಥ್ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ. ಅವರಿಗೆ ಏನು ಮಾಹಿತಿ ಬೇಕೋ ತೆಗೆದುಕೊಳ್ಳಲಿ. ಆವಾಗಿನಿಂದಲೂ ಮಾಹಿತಿ ಪಡೆಯದೆ ಏನೋ ಮಾಡುತ್ತಿದ್ದರು. ಈಗ ಮಾಹಿತಿ ಪಡೆದು ಎಲ್ಲರಿಗೂ ಬಹಿರಂಗ ಮಾಡಲಿ. ಬಿಜೆಪಿಯವರ ಕಾಲದಲ್ಲೇ ಹಗರಣ ಆಗಿರೋದು. ಅದೆಲ್ಲ ಹೊರ ಬರಲಿ. ಆಗ ಜನರೇ ನಿರ್ಧರಿಸುತ್ತಾರೆ ಎಂದರು.

ನನಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಸಂಬಂಧವಿಲ್ಲದಿದ್ದರೂ ನನ್ನ ಹೆಸರು ಎಳೆದು ತರುತ್ತಿದ್ದಾರೆ ಅಂದರೆ ಅದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಆರೋಪಿಸಿದರು.

click me!