
ಬೆಳಗಾವಿ (ಮಾ.02): ಗೋಕಾಕದಲ್ಲಿ ಪೊಲೀಸ್ ಠಾಣೆ, ತಹಸೀಲ್ದಾರ್ ಕಚೇರಿ, ಸಬ್ರಿಜಿಸ್ಟ್ರಾರ್ ಕಚೇರಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಒಂದು ಎಕರೆ ಜಮೀನು ಖರೀದಿ, ಮಾರಾಟಕ್ಕೂ 10 ಲಕ್ಷ ಕೊಡಬೇಕು. ಇದು ಗೋಕಾಕ ರಿಪಬ್ಲಿಕ್ ಕ್ಷೇತ್ರದ ನಿಯಮಾವಳಿ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಬುಧವಾರ ಮಾತನಾಡಿ, ಗೋಕಾಕ ಶಾಸಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ತಮ್ಮನ್ನು ತಾವೇ ನೂರಾರು ಕೋಟಿಗೆ ಮಾರಿಕೊಂಡು ಬಿಜೆಪಿ ಸರ್ಕಾರ ಮಾಡಿ ನನಗೆ ಪಾಠ ಮಾಡಲು ಬರುತ್ತಾರೆ. ನನ್ನ ವೈರಿಗಳು ಎಷ್ಟೇ ಕಷ್ಟಕೊಟ್ಟರೂ ನಾನು ಸಿದ್ಧಳಿದ್ದೇನೆ. ಗೋಕಾಕ ಶಾಸಕರೇ ಭ್ರಷ್ಟಾಚಾರ ಒಂದು ಕಡೆ ಇರಲಿ, ನನ್ನ ಕ್ಷೇತ್ರದ ಜನರ ಕಬ್ಬಿನ ಬಿಲ್ ಕೊಟ್ಟು ನೀವು ಮಾತನಾಡಿ ಎಂದು ಸವಾಲು ಹಾಕಿದರು.
ಯಾರಾರಯರು ರಮೇಶ್ ಜಾರಕಿಹೊಳಿ ಬೆನ್ನು ಹತ್ತಿದ್ದಾರೆ ಅವರೆಲ್ಲರೂ ಮನೆ ಸೇರಿದ್ದಾರೆ. ನನಗೆ ಸತೀಶ್ ಜಾರಕಿಹೊಳಿ ಹೇಳುತ್ತಿದ್ದರು. ವೀರಕುಮಾರ್ ಪಾಟೀಲ, ವಿವೇಕರಾವ್ ಪಾಟೀಲ್, ಎಸ್.ಬಿ.ಘಾಟಗೆ, ಮಹಾಂತೇಶ ಕವಟಗಿಮಠ ಅವರನ್ನು ಮನೆಗೆ ಕಳುಹಿಸಿದರು. ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸಿದ್ದು ನಾನು. ಆದರೆ, ಮುಖ್ಯಮಂತ್ರಿಗಳಿಂದ ಶಿವಾಜಿ ಪ್ರತಿಮೆ ಉದ್ಘಾಟಿಸಲಾಗುತ್ತಿದೆ. ನಿಮಗೆ ನಾಚಿಕೆಯಾಗಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ವಿರುದ್ಧವೂ ಹೆಬ್ಬಾಳ್ಕರ್ ಹರಿಹಾಯ್ದರು.
ಸರ್ಕಾರ ನಡೆಸುವ ಬಗ್ಗೆ ಸಿದ್ದು ಕಡೆ ಬೊಮ್ಮಾಯಿ ಪಾಠ ಕೇಳಲಿ: ಜಮೀರ್ ಅಹ್ಮದ್
ಶಿವಾಜಿ ಪ್ರತಿಮೆ ಜಟಾಪಟಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭ ಗುರುವಾರ ಬೆಳಗ್ಗೆ 10 ಗಂಟೆಗೆ ರಾಜಹಂಸಗಡದ ಕೋಟೆ ಆವರಣದಲ್ಲಿ ನಡೆಯಲಿದೆ. ಈ ಪ್ರತಿಮೆ ಅನಾವರಣ ಕಾರ್ಯಕ್ರಮ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನಡುವಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಲಕ್ಷ್ಮಿ ಹೆಬ್ಬಾಳಕರ ಅವರು ಮಾ.5ರಂದು ಮತ್ತೊಮ್ಮೆ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಮೆ ಅನಾವರಣಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ ಕುಮಾರ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಮೇಶ ಜಾರಕಿಹೊಳಿ ಸೇರಿ ಜಿಲ್ಲೆಯ ಎಲ್ಲ ಸಂಸದರು, ಎಲ್ಲ ಶಾಸಕರು ಉಪಸ್ಥಿತರಿರುತ್ತಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ಸಿದ್ದರಾಮಯ್ಯ
5ರಂದು ಮತ್ತೊಮ್ಮೆ ಲೋಕಾರ್ಪಣೆ: ಈ ಮಧ್ಯೆ, ಗ್ರಾಮೀಣ ಕ್ಷೇತ್ರದ ಪಂತಬಾಳೇಕುಂದಿಯಲ್ಲಿ ಬುಧವಾರ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಲಕ್ಷ್ಮೇ ಹೆಬ್ಬಾಳಕರ, ಕ್ಷೇತ್ರದ ಜನತೆಯ ನಿರ್ಧಾರದಂತೆ ಮಾ.5 ರಂದು ಅನಾವರಣ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಹಾಗೂ ನೆರೆಯ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಲಾಗಿದೆ. ಶತಮಾನಗಳಷ್ಟುಹಳೆಯದಾದ ರಾಜಹಂಸಗಡ ಕೋಟೆಯನ್ನು ಅಭಿವೃದ್ಧಿಪಡಿಸಿದ್ದು ಕಾಂಗ್ರೆಸ್, ಅದೂ ನಾನು ಈ ಕ್ಷೇತ್ರದ ಶಾಸಕರಾದ ನಂತರ. ಮಾ.3 ರಂದು ಮಹಾರಾಷ್ಟ್ರದ ರಾಯಗಢದಿಂದ ಶಿವಾಜಿ ಮಹಾರಾಜರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಮಾ.4ರಂದು ರಾಜಹಂಸಗಢಕ್ಕೆ ಆಗಮಿಸಿದ ನಂತರ, ಮಾ.5ರಂದು ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಮಾಡಿ, ನಂತರ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡೋಣ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.