ಕಾಂಗ್ರೆಸ್‌ ಮುಖಂಡರು ಶಾಶ್ವತವಾಗಿ ಮನೆ ಸೇರಲಿದ್ದಾರೆ; ಸಿಎಂ ಬಸವರಾಜ ಬೊಮ್ಮಾಯಿ

Published : Nov 09, 2022, 12:09 PM ISTUpdated : Nov 09, 2022, 12:15 PM IST
ಕಾಂಗ್ರೆಸ್‌ ಮುಖಂಡರು ಶಾಶ್ವತವಾಗಿ ಮನೆ ಸೇರಲಿದ್ದಾರೆ; ಸಿಎಂ ಬಸವರಾಜ ಬೊಮ್ಮಾಯಿ

ಸಾರಾಂಶ

ಕಾಂಗ್ರೆಸ್‌ ಮುಖಂಡರು ಶಾಶ್ವತವಾಗಿ ಮನೆ ಸೇರಲಿದ್ದಾರೆ ಜನ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ

ಬ್ಯಾಡಗಿ (ನ.9) : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ 10 ಕೋಟಿ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದೆ. ಇಂತಹದ್ದೊಂದು (ಜಲ ಜೀವನ ಮಿಷನ್‌) ಯೋಜನೆ ಕೊಡುವಂತಹ ತಾಕತ್ತು 6 ದಶಕಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ಸಿಗಿತ್ತಾ? ಬರುವ ದಿನದಲ್ಲಿ ಕಾಂಗ್ರೆಸ್‌ ಮುಖಂಡರು ಶಾಶ್ವತವಾಗಿ ಮನೆ ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

ಕಾಂಗ್ರೆಸ್ಸಿಗರ ಜಂಘಾಬಲವೇ ಉಡುಗಿ ಹೋಗಿದೆ- ಬಿಎಸ್‌ವೈ

ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಇದು ನಮ್ಮ ಪಕ್ಷದ ಘೋಷಣೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಯೋಜನೆಗಳು ಒಂದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ವೋಟ್‌ ಬ್ಯಾಂಕ್‌ ಗಳಿಸಿಕೊಳ್ಳಲು ನಾಲಿಗೆಗೆ ಕೆಲಸ ಕೊಡುತ್ತಿರುವ ಕಾಂಗ್ರೆಸ್‌ ನಾಯಕರು ತಾಕತ್ತಿದ್ದರೆ ಜಾರಕಿಹೊಳಿ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟು ಹೇಳಿಕೆಯನ್ನು ಕಾಂಗ್ರೆಸ್‌ ಸಮರ್ಥಿಸಿಕೊಳ್ಳುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಭಾಗ್ಯಲಕ್ಷ್ಮಿ ಯೋಜನೆಯಿಂದ ರಾಜ್ಯದ ತಾಯಂದಿರು ಗೌರವದಿಂದ ಬದುಕಬೇಕೆಂದು ಬಯಸಿದ್ದೆ ಅದು ನಿಜವಾಗಿದೆ. ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಹಣ ಹಂಚುವ ಮೂಲಕ ಜಾತಿಯ ವಿಷ ಬೀಜವನ್ನು ಬಿತ್ತುತ್ತಿರುವ ಕಾಂಗ್ರೆಸ್‌ನ ಜಂಘಾಬಲ ಉಡುಗಿದೆ, ರಾಜ್ಯದ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ ಮಾತನಾಡಿ, ಕಾಂಗ್ರೆಸ್‌ ಮುಖಂಡ ಸತೀಶ್‌ ಜಾರಕಿಹೊಳಿ ‘ಹಿಂದು’ ಎಂಬ ಪದ ಅಶ್ಲೀಲ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ದೇಶದ ಶೇ.70ರಷ್ಟುಹಿಂದೂಗಳ ಬಗ್ಗೆ ಅವರಿಗಿರುವ ಮಾನಸಿಕ ಸ್ಥಿತಿ ತಿಳಿಸಲಿದೆ. ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಸೋಲಿನ ರುಚಿ ತೋರಿಸಲಿದೆ. 2024ರಲ್ಲಿ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿಕರ ಮಕ್ಕಳಿಗೆ 40ರಿಂದ ಶೇ.50ರಷ್ಟುಹೆಚ್ಚಿಸಲಾಗಿದೆ, ರೈತರ ಮಕ್ಕಳಿಗೆ ವಿದ್ಯಾನಿಧಿ ಘೋಷಿಸುವ ಮೂಲಕ ಪ್ರತಿವರ್ಷ 2 ಸಾವಿರದಿಂದ 11 ಸಾವಿರದವರೆಗೆ ಹೆಚ್ಚಿಸಲಾಯಿತು. ರೈತಶಕ್ತಿ ಕಾರ್ಯಕ್ರಮದಡಿ . 1250 ಉಚಿತ ಡೀಸೆಲ್‌ ನೀಡಲಾಗುತ್ತಿದೆ, ಇಂತಹ ನೂರಾರು ಯೋಜನೆ ನೀಡುತ್ತಿರುವ ನಮ್ಮ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಶಿಕ್ಷಣ, ಕೃಷಿ, ಸಾರಿಗೆ, ರಸ್ತೆ, ನೀರಾವರಿ ಇನ್ನಿತರ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನ ಕ್ಷೇತ್ರಕ್ಕೆ ನೀಡಲಾಗಿದ್ದು, ಹಿಂದಿನ ಯಾವುದೇ ಸರ್ಕಾರ ಇಷ್ಟೊಂದು ಅನುದಾನ ನೀಡಿಲ್ಲ, ವೈದ್ಯಕೀಯ ಕಾಲೇಜು, ಮೆಗಾಡೈರಿ ಹತ್ತು ಹಲವು ಯೋಜನೆಗಳನ್ನು ನೀಡಲಾಗಿದೆ, ಕ್ಷೇತ್ರದ ರೈತರ ಅನುಕೂಲಕ್ಕೆ ಆಣೂರು ಹಾಗೂ ಬುಡಪನಹಳ್ಳಿ ಕೆರೆಗಳನ್ನು ತುಂಬಿಸುವ ಮೂಲಕ ನೀರಾವರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಶಾಸಕ ಅರುಣಕುಮಾರ ಪೂಜಾರ ಮಾತನಾಡಿದರು.

ವೇದಿಕೆಯಲ್ಲಿ ಸಚಿವರಾದ ಶಿವರಾಮ ಹೆಬ್ಬಾರ, ಗೋವಿಂದ ಕಾರಜೋಳ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯ್‌್ಕ, ಮಾಜಿ ಸದಸ್ಯ ಶಿವರಾಜ್‌ ಸಜ್ಜನ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲ್ಕೋಟಿ, ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ, ಸದಸ್ಯ ಬಸವರಾಜ ಛತ್ರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗೂ ಟಿಕೆಟ್‌ ಕೊಡಿ ಎಂದು ಸುರೇಶಗೌಡ

ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ, ಜನಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು ಖುಷಿ ತಂದಿದೆ. ರಾಜ್ಯದ ರೈತರಿಗೆ ಒಟ್ಟು 10 ಗಂಟೆಗಳ ಕಾಲ ತ್ರಿಫೇಸ್‌ ವಿದ್ಯುತ್‌ನ್ನು ನೀಡಬೇಕು. ನಾನೂ ಕೂಡ ಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿ. ಒಂದು ವೇಳೆ ಪಕ್ಷ ಸೂಚಿಸಿದಲ್ಲಿ ನಾನು ಅಧಿಕ ಮತಗಳ ಅಂತರದಲ್ಲಿ ಗೆದ್ದು ಬರುತ್ತೇನೆ ಎಂದು ಹೇಳಿದರು.

ಭವ್ಯ ಭಾರತದ ಭವಿಷ್ಯಕ್ಕೆ ಕಾಂಗ್ರೆಸ್‌ ಮಾರಕ-ಬಸವರಾಜ ಬೊಮ್ಮಾಯಿ

ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಹಿಂದೂ ಎಂದರೆ ‘ಹೊಲಸು’ ಎಂದು ಕಾಂಗ್ರೆಸ್‌ ನಾಯಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಿಮ್ಮ ವಿಚಾರ ಹೊಲಸಿನಿಂದ ಕೂಡಿದೆ. ನಿಮ್ಮ ಕ್ಷಮೆ ನಾವು ಕೇಳಲ್ಲ. ನಿಮ್ಮನ್ನು ಭಗವಂತ ಕೂಡ ಕ್ಷಮಿಸಲ್ಲ. ಭವ್ಯ ಭಾರತದ ಭವಿಷ್ಯಕ್ಕೆ ಕಾಂಗ್ರೆಸ್‌ ಮಾರಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಬ್ಯಾಡಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದು ಪದ ಹೊಲಸು ಎಂದು ಹೇಳುವ ಪಕ್ಷ ದೇಶಕ್ಕೆ ಮಾರಕ. ಸತೀಶ ಜಾರಕಿಗೊಳಿ ಪ್ರಕಾರ ಶೇ.90ರಷ್ಟಿರುವ ಜನರೂ ಹೊಲಸಾ? ಹಿಂದು ಅಂತ ಸರ್ಟಿಫಿಕೇಟ್‌ ತೆಗೆದುಕೊಂಡು, ಈಗ ಹಿಂದು ಪದದ ಅರ್ಥ ಹೊಲಸು ಅಂತಿದ್ದಾರೆ. ನಿಮ್ಮ ವಿಚಾರವೇ ಹೊಲಸಿನಿಂದ ಕೂಡಿದೆ. ಸಿದ್ದರಾಮಯ್ಯನವರೇ ಎಲ್ಲಿದ್ದೀರಾ? ಮಾತು ಮಾತಿಗೆ ಟಿವಿ ಮುಂದೆ ಬಂದು ಹೇಳಿಕೆ ಕೊಡುತ್ತೀರಲ್ಲ, ಸತೀಶ ಜಾರಕಿಹೊಳಿ ಅವರನ್ನು ಪಕ್ಷದಿಂದ ಹೊರಗೆ ಹಾಕುತ್ತೀರಾ? ನೀವು ಏನೂ ಹೇಳಲ್ಲ ಅಂದರೆ ನಿಮ್ಮ ಬೆಂಬಲ ಜಾರಕಿಹೊಳಿ ಅವರಿಗೆ ಎಂದೇ ತಿಳಿದುಕೊಳ್ಳಬೇಕಾಗುತ್ತದೆ ಎಂದರು.

ನಾನು ಕ್ಷಮೆ ಕೇಳಲ್ಲ ಅಂತ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಿಮ್ಮ ಕ್ಷಮೆ ಯಾರಿಗೆ ಬೇಕು? ಆ ಭಗವಂತ ಕೂಡಾ ನಿಮ್ಮನ್ನು ಕ್ಷಮಿಸಲ್ಲ. ಕೇವಲ ಕ್ಷುಲ್ಲಕ ರಾಜಕಾರಣಕ್ಕೆ ಈ ರೀತಿ ಹೇಳುತ್ತಿರುವ ನಿಮಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಹಿಂದು ಎಂದರೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವುದಾಗಿದೆ. ಇವರು ಭಾರತ್‌ ಜೋಡೋ ಯಾತ್ರೆ ಮೂಲಕ ಭಾರತ್‌ ತೋಡೋ ಮಾಡುತ್ತಿದ್ದಾರೆ. ಕ್ಷುಲ್ಲಕ ಭಾವನೆಯಿಂದ ದೇಶ ಒಡೆಯುವ ಕೆಲಸಕ್ಕೆ ಪೂರ್ಣ ವಿರಾಮ ಹಾಕಬೇಕು ಎಂದು ಅವರು ಹೇಳಿದರು.

ಬಿಜೆಪಿ ಸುನಾಮಿ:

ರಾಜ್ಯದಲ್ಲಿ ಬಿಜೆಪಿಯ ಸುನಾಮಿಯೇ ಎದ್ದಿದೆ. ಕಾಂಗ್ರೆಸ್‌ ಐದು ವರ್ಷ ಆಡಳಿತ ನಡೆಸಿ ರಾಜ್ಯವನ್ನು ಅಧೋಗತಿಗೆ ತಂದಿತ್ತು. ಅವರ ಭಾಗ್ಯಗಳೆಲ್ಲ ಯಾರಿಗೂ ತಲುಪದೇ ದೌರ್ಭಾಗ್ಯದ ಯೋಜನೆಯಾಗಿದ್ದವು. ಅದಕ್ಕಾಗಿಯೇ ಅವರನ್ನು ಕಿತ್ತು ಒಗೆದಿದ್ದಾರೆ. ಕಾಂಗ್ರೆಸ್‌ ಅನ್ನು ಶಾಶ್ವತವಾಗಿ ಮನೆಗೆ ಕಳುಹಿಸುವ ಕಾಲ ಬಂದಿದೆ. ರಾಹುಲ್‌ ಗಾಂಧಿ ಒಬ್ಬ ವಿಫಲ ನಾಯಕ. ಅವರು ಬಂದಲ್ಲೆಲ್ಲ ಕಾಂಗ್ರೆಸ್‌ ನೆಲಕಚ್ಚಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಹುಲ್ಲು ಕೂಡ ಹುಟ್ಟುವುದಿಲ್ಲ. ಭಾರತ ಜೋಡೋಗಿಂತ ಮೊದಲು ಡಿಕೆಶಿ, ಸಿದ್ದುರನ್ನು ಜೋಡೋ ಮಾಡಲಿ ಎಂದು ಅವರು ತಿರುಗೇಟು ನೀಡಿದರು.

ಸಾಮಾಜಿಕ 'ಅನ್ಯಾಯ', ಅಲ್ಪಸಂಖ್ಯಾತರಿಗೆ ಮೋಸ: ಜನಸಂಕಲ್ಪ ಸಮಾವೇಶದಲ್ಲಿ ಸಿದ್ದುಗೆ ಸಿಎಂ ಗುದ್ದು!

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಹಣ, ತೋಳ್ಬಲ, ಜಾತಿಯ ವಿಷ ಬೀಜವನ್ನು ಬಿತ್ತುತ್ತಿರುವ ಕಾಂಗ್ರೆಸ್ಸನ್ನು ಜನತೆ ದೂರ ಇಟ್ಟಿದ್ದಾರೆ. ಬಿಜೆಪಿಯ ಬಗ್ಗೆ ಜನಬೆಂಬಲ ನೋಡಿ ಕಾಂಗ್ರೆಸ್‌ನ ಜಂಘಾಬಲವೇ ಉಡುಗಿ ಹೋಗಿದೆ. ರಾಜ್ಯದ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರುವ ತೀರ್ಮಾನ ಮಾಡಿದ್ದಾರೆ. 140ರಿಂದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ