ಕಾಂಗ್ರೆಸ್‌ ಬಿಟ್ಟು ಮತ್ತೆ ಬಿಜೆಪಿಗೆ ವಾಪಸ್‌?: ಜಗದೀಶ್‌ ಶೆಟ್ಟರ್‌ ಹೇಳಿದ್ದಿಷ್ಟು

By Kannadaprabha NewsFirst Published Dec 2, 2023, 12:00 AM IST
Highlights

ಬೇರೆಯವರು ಕಾಂಗ್ರೆಸ್‌ಗೆ ಬರಬಾರದು ಎಂದು ನಾನು ಬಿಜೆಪಿಗೆ ವಾಪಸ್‌ ಬರುತ್ತಿದ್ದೇನೆ ಎಂದು ಬಿಂಬಿಸಲಾಗುತ್ತಿದೆ. ನಾನು ಮರಳಿ ಬಿಜೆಪಿಗೆ ಹೋಗುವ ಮಾತೇ ಇಲ್ಲ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ 

ವಿಜಯಪುರ(ಡಿ.02): ನಾನು ಭಾರತೀಯ ಜನತಾ ಪಕ್ಷಕ್ಕೆ ವಾಪಸ್‌ ಹೋಗುವೆ ಎನ್ನುವ ಕೆ.ಎಸ್.ಈಶ್ವರಪ್ಪ ಹೇಳಿಕೆ ಹಸಿಯಾದ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

ಶೆಟ್ಟರ್‌ ಬಿಜೆಪಿಗೆ ಬರುತ್ತಾರೆ, ಬರಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರ ಹೇಳಿಕೆಗೆ ವಿಜಯಪುರದಲ್ಲಿ ಶುಕ್ರವಾರ ಸ್ಪಷ್ಟನೆ ನೀಡಿದ ಅವರು, ಬೇರೆಯವರು ಕಾಂಗ್ರೆಸ್‌ಗೆ ಬರಬಾರದು ಎಂದು ನಾನು ಬಿಜೆಪಿಗೆ ವಾಪಸ್‌ ಬರುತ್ತಿದ್ದೇನೆ ಎಂದು ಬಿಂಬಿಸಲಾಗುತ್ತಿದೆ. ನಾನು ಮರಳಿ ಬಿಜೆಪಿಗೆ ಹೋಗುವ ಮಾತೇ ಇಲ್ಲ. ನನಗೆ ಮತ್ತು ಲಕ್ಷ್ಮಣ ಸವದಿಯವರಿಗೆ ಟಿಕೆಟ್ ತಪ್ಪಿಸಿದ ಪರಿಣಾಮವನ್ನು ಜನ ತೋರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಇದು ಮುಂದುವರಿಯಲಿದೆ. ಬಿಜೆಪಿಯವರು ಕಾಂಗ್ರೆಸ್‌ಗೆ ಹೋಗದಂತೆ ತಡೆಯಲು ನನ್ನ ಹೆಸರು ಬಳಕೆ ಮಾಡ್ತಿದ್ದಾರೆ. ಶೆಟ್ಟರ್ ಅವರೇ ಬಿಜೆಪಿಗೆ ಬಂದು ಬಿಡ್ತಾರೆ ನೀವು ಕಾಂಗ್ರೆಸ್‌ಗೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ ಎಂದರು.

ಖಂಡಿತ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಬರುತ್ತಾರೆ: ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್

ಜನಸಂಘ ಸಮಯದಿಂದ ನಮ್ಮ ತಂದೆ, ಚಿಕ್ಕಪ್ಪನವರು ಸಂಘಟನೆ ಮಾಡಿಕೊಂಡು ಬಂದಿದ್ದರು. ಅವರ ಕಡೆಯ ವ್ಯಕ್ತಿಗೆ ಸಣ್ಣ ಎಂಎಲ್ಎ ಟಿಕೆಟ್ ಕೊಡೋಕೆ ಆಗಲಿಲ್ಲ. ಜನಸಂಘದಿಂದ ಬಂದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ, ಬಿಜೆಪಿ ಯಾರನ್ನು ಕಡೆಗಣಿಸುತ್ತಿದೆ ಅನ್ನೋದಕ್ಕೆ ಇದು ತಾಜಾ ಉದಾಹರಣೆ. ಹಿಂದುತ್ವವನ್ನು ರಾಜಕಾರಣಕ್ಕೆ ಬಳಸಬಾರದು. ಎಲ್ಲರ ಸೌಹಾರ್ದತೆ ಕಾಪಾಡುವುದು ಮುಖ್ಯ ಎಂದು ಶೆಟ್ಟರ್ ಹೇಳಿದರು.

click me!