Council Election Karnataka: ನಿರೀ​ಕ್ಷೆ​ಗಿಂತ ಹೆಚ್ಚಿನ ಸೀಟು ಗೆಲ್ಲು​ವ ವಿಶ್ವಾಸದಲ್ಲಿದೆ ಕಾಂಗ್ರೆಸ್ ಪಾಳಯ

Kannadaprabha News   | Asianet News
Published : Dec 11, 2021, 03:07 PM IST
Council Election Karnataka:  ನಿರೀ​ಕ್ಷೆ​ಗಿಂತ ಹೆಚ್ಚಿನ ಸೀಟು ಗೆಲ್ಲು​ವ ವಿಶ್ವಾಸದಲ್ಲಿದೆ ಕಾಂಗ್ರೆಸ್ ಪಾಳಯ

ಸಾರಾಂಶ

ನಿರೀ​ಕ್ಷೆ​ಗಿಂತ ಹೆಚ್ಚಿನ ಸೀಟು ಗೆಲ್ಲು​ವ ವಿಶ್ವಾದಲ್ಲಿದೆ ಕಾಂಗ್ರೆಸ್ ಪಾಳಯ  ಬಿಎಸ್‌ವೈ ಹತಾಶರಾಗಿ ಜೆಡಿಎಸ್‌ ಬೆಂಬಲ ಯಾಚಿಸುತ್ತಿದ್ದಾರೆ ಬಿಜೆಪಿ ರಾಜ್ಯದಲ್ಲಿ ತನ್ನ ಶಕ್ತಿ ಕಳೆದುಕೊಂಡಿದೆ

  ಕನ​ಕ​ಪುರ /ರಾಮ​ನ​ಗ​ರ(ಡಿ.11):ವಿಧಾನ ಪರಿ​ಷತ್‌ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಒಗ್ಗಟ್ಟು ಪ್ರದರ್ಶಿಸಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂಥ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಸೀಟುಗಳನ್ನೂ ಗೆಲ್ಲುವ ಸೂಚನೆ, ಸಾಧ್ಯತೆಗಳಿವೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ತಿಳಿ​ಸಿ​ದರು.  ಕನ​ಕ​ಪುರ ನಗ​ರ​ಸ​ಭೆ​ಯಲ್ಲಿ ಮತ ​ಚ​ಲಾ​ಯಿ​ಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕಾಂಗ್ರೆಸ್‌ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಸರ್ಕಾದ ಯಂತ್ರ ದುರುಪಯೋಗ ಆಗಿರುವು​ದ​ರಿಂದ ಒಂದೆರಡು ಕಡೆ ಹೆಚ್ಚು-ಕಡಿಮೆ ಆಗಬಹುದು. ಆದರೂ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನಗಳು ಬರಲಿವೆ ಎಂದ​ರು.

ಮಾಜಿ ಸಿಎಂ ಯಡಿಯೂರಪ್ಪನವರು (BS Yediyurappa) ಹತಾಶರಾಗಿ ಜೆಡಿಎಸ್‌ (JDS) ಬೆಂಬಲ ಯಾಚಿಸುತ್ತಿದ್ದಾರೆ. ಬಿಜೆಪಿ (BJP) ರಾಜ್ಯದಲ್ಲಿ ತನ್ನ ಶಕ್ತಿ ಕಳೆದುಕೊಂಡಿರುವುದಕ್ಕೆ ಇದು ಸಾಕ್ಷಿ. ಅವರು ಬೆಂಬಲ ಕೇಳಬಾರದು ಅಂತ ಅಲ್ಲ. ಅದು ಅವರ ಹಕ್ಕು. ನಾವೂ ಪಕ್ಷಾತೀತವಾಗಿ ಬೆಂಬಲ ಕೇಳಿದ್ದೇವೆ. ಬಿಜೆಪಿ (BJP), ಜೆಡಿಎಸ್‌ (JDS), ಪಕ್ಷೇತರರು ಎಲ್ಲರೂ ಕಾಂಗ್ರೆಸ್‌ (Congress) ಬೆಂಬಲಿಸಿ ಎಂದಿದ್ದೇವೆ. ಆದರೆ, ಯಡಿಯೂರಪ್ಪನವರು ಕಾಂಗ್ರೆಸ್‌ ಪಕ್ಷವನ್ನು ಧೂಳಿಪಟ ಮಾಡುತ್ತೇವೆ. 15 ವರ್ಷ ವಿರೋಧ ಪಕ್ಷದಲ್ಲೇ ಕೂರಿಸುತ್ತೇವೆ ಎಂದೆಲ್ಲ ಹೇಳಿದ್ದಾರೆ. ಹಾಗೆ ಹೇಳಿದವರು ಹೋಗಿ ಜೆಡಿಎಸ್‌ ಬೆಂಬಲ ಕೇಳಿದ್ದಾರೆ. ಇದು ಬಿಜೆಪಿ ದುಸ್ಥಿತಿ ಮತ್ತು ಶಕ್ತಿ ಕುಂದಿರುವುದನ್ನು ತೋರಿಸುತ್ತದೆ ಎಂದು ಶಿವ​ಕು​ಮಾರ್‌ (Shivakumar) ಲೇವಡಿ ಮಾಡಿ​ದ​ರು.

ಡಿ. 13ರಂದು ಮೇಕೆ​ದಾಟು ಹೋರಾಟ ಸಭೆ:  ಮೇಕೆದಾಟು ಅಣೆಕಟ್ಟೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ವಿಚಾರ ಸಂಬಂಧ ಕಾವೇರಿ (Cauvery) ಜಲಾನಯನ ಪ್ರದೇಶ ಹಾಗೂ ಬೆಂಗಳೂರಿನ ಕಾಂಗ್ರೆಸ್‌ ಮುಖಂಡರ ಸಭೆಯನ್ನು ಡಿ. 13 ರಂದು ಸಂಜೆ ಬೆಂಗಳೂರಿನಲ್ಲಿ (Bengaluru) ಕರೆಯಲಾಗಿದೆ. ಶಾಸಕರನ್ನು ಹೊರತುಪಡಿಸಿ ಪಕ್ಷದ ಮುಖಂಡರು ಸಭೆಯಲ್ಲಿ ಪಾಲ್ಗೊ​ಳ್ಳು​ವ​ರು. ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಮನ್ವಯಕಾರರು, ಬ್ಲಾಕ್‌ ಕಾಂಗ್ರೆಸ… ಅಧ್ಯಕ್ಷರು ಸೇರಿದಂತೆ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿ​ದ​ರು.

ಪಾದಯಾತ್ರೆ ಯಲ್ಲಿ ಭಾಗವಹಿಸುವವರು ಆನ್‌ ಲೈನ್‌ ನಲ್ಲಿ ತಮ್ಮ ಫೋಟೋ ಸಮೇತ ಹೆಸರು ನೋಂದಣಿ ಮಾಡಿಸಬೇಕು. ಒಂದು ದಿನ, ಎರಡು ದಿನ, ಮೂರು ದಿನದಿಂದ ಪಾದಯಾತ್ರೆ ಮುಗಿಯುವವರೆಗೂ ಎಷ್ಟುದಿನ ಬೇಕಾದರೂ ಅವರು ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಒಂದು ದಿನ ನಡೆಯುವವರಿಗೆ ಒಂದು, ಎರಡು ದಿನ ನಡೆಯುವವರಿಗೆ ಬೇರೆ, ಹತ್ತು ದಿನ ನಡೆಯುವವರಿಗೆ ಬೇರೆ - ಹೀಗೆ ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಪಕ್ಷದಿಂದ ಸರ್ಟಿಫಿಕೇಚ್‌ ನೀಡಲಾಗುವುದು. ಕಾವೇರಿ ಜಲಾನಯನ ಪ್ರದೇಶ ರೈತರು (Farmers) ಹಾಗೂ ಬೆಂಗಳೂರು ಜನರ ಹಿತದೃಷ್ಟಿಯಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಿವ​ಕು​ಮಾರ್‌ ತಿಳಿ​ಸಿ​ದ​ರು.

  ಜೆಡಿ​ಎಸ್‌, ಬಿಜೆ​ಪಿಗರಿಂದಲೂ ಕಾಂಗ್ರೆಸ್ ಅಭ್ಯರ್ಥಿಗೆ ಸಪೋರ್ಟ್ 

 ಜಿಲ್ಲೆಯ ಭವಿ​ಷ್ಯದ ದೃಷ್ಟಿ​ಯಿಂದ ಜೆಡಿ​ಎಸ್‌ (JDS) ಹಾಗೂ ಬಿಜೆಪಿ (BJP) ಬೆಂಬ​ಲಿತ ಸದ​ಸ್ಯರು ಸಹ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.​ರ​ವಿ​ ಅವ​ರನ್ನೇ ಗೆಲ್ಲಿ​ಸಿ​ಕೊ​ಳ್ಳುವ ವಿಶ್ವಾ​ಸ​ವಿದೆ ಎಂದು ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ಕ್ರಿ​ಯಿ​ಸಿ​ದ​ರು.  ಜಿಲ್ಲಾ ಕೇಂದ್ರ ರಾಮ​ನ​ಗ​ರದ ನಗ​ರ​ಸ​ಭೆ​ಯಲ್ಲಿ  ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವ​ರು, ಮುಂದೆ ರಾಜ್ಯ​ದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿ​ಕಾ​ರಕ್ಕೆ ಬರ​ಬೇಕು ಎಂಬ ಉದ್ದೇಶದಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಿದ್ದ​ರಾ​ಮಯ್ಯ ಅವರ ಕೈ ಬಲ​ಪ​ಡಿ​ಸಲು ಅನ್ಯ ಪಕ್ಷ​ಗಳ ಬೆಂಬ​ಲಿತ ಸದ​ಸ್ಯರು ಸಹ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.​ರ​ವಿ​ ಅ​ವ​ರನ್ನೇ ಬೆಂಬ​ಲಿ​ಸು​ವು​ದಾಗಿ ತಮ್ಮ ಬಳಿ ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದ್ದರು. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವ ವಿಶ್ವಾ​ಸ​ವಿದೆ ಎಂದರು.

ಅ​ಲ್ಲದೆ ಸ್ಥಳೀಯ ಸಂಸ್ಥೆ​ಗ​ಳ​ಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆ​ಯಲ್ಲಿ ಕಾಂಗ್ರೆಸ್‌ ಸದ​ಸ್ಯರು ಮತ್ತು ಕಾಂಗ್ರೆಸ್‌ ಬೆಂಬ​ಲಿತ ಸದ​ಸ್ಯರು ಹೆಚ್ಚಿನ ಸಂಖ್ಯೆ​ಯಲ್ಲಿ ಆಯ್ಕೆ​ಯಾ​ಗಿ​ದ್ದಾರೆ. ಇದು ಕೂಡ ರವಿ ಅವರ ಗೆಲು​ವಿಗೆ ಸಹ​ಕಾ​ರಿ​ಯಾ​ಗ​ಲಿದೆ ಎಂದು ಹೇಳಿ​ದ​ರು.

ಎಲ್ಲಾ ಪಕ್ಷ​ಗಳು ತಮ್ಮ ಅಭ್ಯ​ರ್ಥಿ​ಯನ್ನು ಗೆಲ್ಲಿ​ಸಿ​ಕೊ​ಳ್ಳಲು ಪ್ರಯತ್ನ ಪಡು​ವುದು ತಪ್ಪೇನು ಅಲ್ಲ. ಅವ​ರೆಲ್ಲ ಅವರ ಪ್ರಯತ್ನ ಮಾಡಿ​ದ್ದಾರೆ. ನಾವು ಸಹ ಮತ​ದಾ​ರರ ವಿಶ್ವಾ​ಸ​ಗ​ಳಿ​ಸಲು ಪ್ರಯತ್ನ ಮಾಡಿ​ದ್ದೇವೆ. ಯಾರನ್ನೇ ಮತ ಕೇಳಿ​ದರು ರಾಜ್ಯ, ಜಿಲ್ಲೆಯ ಭವಿ​ಷ್ಯದ ದೃಷ್ಠಿ​ಯಿ​ಂದ ಕಾಂಗ್ರೆಸ್‌ (Congress) ಬೆಂಬ​ಲಿ​ಸು​ವು​ದಾಗಿ ತಿಳಿ​ಸಿ​ದ್ದರು. ರಾಜ್ಯಕ್ಕೆ ಇದೊಂದು ಬದ​ಲಾ​ವ​ಣೆಯ ಕಾಲ ಎಂದರು.

ನಗ​ರ​ಸ​ಭೆ ಕಾಂಗ್ರೆಸ್‌ ಸದ​ಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರು ಹಾಜ​ರಿ​ದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌