Assembly election: ಕಾಂಗ್ರೆಸ್‌ನದ್ದು ಸೌಂಡ್ ಜಾಸ್ತಿ, ಆದರೆ ಗ್ರೌಂಡ್‌ನಲ್ಲಿ ಬಿಜೆಪಿ ಅಲೆಯಿದೆ: ಸಿ.ಟಿ. ರವಿ

By Sathish Kumar KHFirst Published Jan 21, 2023, 9:37 PM IST
Highlights

ಬಿಜೆಪಿ ಬೂತ್ ವಿಜಯ ಅಭಿಯಾನ ಮಾಡುತ್ತಿದೆ, ಬೂತ್ ಗೆದ್ರೆ ಬಿಜೆಪಿ ಗೆದ್ದಂತೆ
ಕಾಂಗ್ರೆಸ್‌ ಪಕ್ಷದ್ದು ಸೌಂಡು, ಬಿಜೆಪಿಯದ್ದು ಗ್ರೌಂಡು
ಫೀಲ್ಡ್ ನಲ್ಲಿ ಗೆಲ್ಲುವುದು ಗ್ರೌಂಡು ಹೊರತಾಗಿ ಸೌಂಡ್ ಅಲ್ಲ
 

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.21): ಕರ್ನಾಟಕದಲ್ಲಿ ನಮ್ಮದು (ಬಿಜೆಪಿ) ಬೇರುಮಟ್ಟ ಸಂಘಟನಾ ಕಾರ್ಯ, ಅವರದ್ದು (ಕಾಂಗ್ರೆಸ್) ದೊಡ್ಡ ಮೈಕ್ ಹಾಕಿಕೊಂಡು ನಮ್ಮನ್ನು ಟೀಕಿಸುವ ಕೆಲಸವಷ್ಟೇ. ಅವರದ್ದು ಸೌಂಡ್, ನಮ್ಮದು ಗ್ರೌಂಡು. ಕಾಂಗ್ರೆಸ್ ಸೌಂಡ್ ಜಾಸ್ತಿ ಇದೆ. ಆದರೆ ಗ್ರೌಂಡ್‌ನಲ್ಲಿ ಬಿಜೆಪಿ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಬಗ್ಗೆ ಚಿಕ್ಕಮಗಳೂರು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನಾವು ಬೂತ್ ವಿಜಯ ಅಭಿಯಾನ ಮಾಡುತ್ತಿದ್ದೇವೆ. ಬೂತ್ ಗೆದ್ದರೆ ಸಹಜವಾಗಿ ಕ್ಷೇತ್ರವನ್ನು ಸ್ವಾಭಾವಿಕವಾಗಿ ಗೆಲ್ಲುತ್ತದೆ. ನಮ್ಮದು ಬೇರುಮಟ್ಟ ಸಂಘಟನಾ ಕಾರ್ಯ, ಅವರದ್ದು ದೊಡ್ಡ ಮೈಕ್ ಹಾಕಿಕೊಂಡು ನಮ್ಮನ್ನು ಟೀಕಿಸುವ ಕೆಲಸವಷ್ಟೇ. ಅವರದ್ದು ಸೌಂಡ್, ನಮ್ಮದು ಗ್ರೌಂಡು. ಮೈದಾನದಲ್ಲಿ ಗೆಲ್ಲುವುದು ಗ್ರೌಂಡ್ ಮಾತ್ರ. ಸೌಂಡ್ ಅಲ್ಲ ಎಂದರು. 

29ಕ್ಕೂ ಹೆಚ್ಚು ತಳಿಯ ಶ್ವಾನ ಪ್ರದರ್ಶನ; ಚಾರ್ಲಿ 777 ಶ್ವಾನದೊಂದಿಗೆ ಸಿ..ಟಿ ರವಿ ರೌಂಡ್ಸ್

ಇಟಲಿ ರಾಣಿಯ ಹೆಸರೇಳಿ ಮತ ಕೇಳುತ್ತಾರೆ : ಬಿಜೆಪಿ ಮೋದಿ ಹೆಸರೇಳಿ ಮತ ಕೇಳುತ್ತದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಗತಿ ಇಲ್ಲ ಇಟಲಿ ರಾಣಿಯ ಹೆಸರೇಳಿ ಮತ ಕೇಳುತ್ತಾರೆ. ಮೋದಿ ಈ ನಾಡಿನ ಮಣ್ಣಿನ ಮಗ. ಸಾಮಾನ್ಯ ಬಡ ಕುಟುಂಬದಿಂದ ಬಂದವರು. ಕಳೆದ 20 ವರ್ಷದಿಂದ ಸಣ್ಣ ಭ್ರಷ್ಟಾಚಾರಕ್ಕೂ ಅವಕಾಶವಿಲ್ಲ. ದಲಿತರು, ಬಡವರ ಗೌರವದ ಬಗ್ಗೆ ಚಿಂತಿಸುವ ಹಾಗೂ ಅಂಬೇಡ್ಕರ್ ಲೆಗೆಸಿ ಬಗ್ಗೆ ಚಿಂತನೆ ಮಾಡಿದವರು ಅಂತಹವರನ್ನು ಬಂಡವಾಳ ಮಾಡಿಕೊಳ್ಳಬಾರದೇ? ಕಾಂಗ್ರೆಸಿಗರೂ ಮೋದಿ ಅವರನ್ನು ಬಂಡವಾಳ ಮಾಡಿಕೊಳ್ಳಲಿ ಕನಿಷ್ಠ ಠೇವಣಿ ಕಳೆದುಕೊಳ್ಳುವುದನ್ನಾದರೂ ತಪ್ಪಿಸಿಕೊಳ್ಳಬಹುದು ಎಂದು ವ್ಯಂಗ್ಯವಾಡಿದರು.

ರೀಡೂ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ: ಪ್ರಜಾಧ್ವನಿಯನ್ನು ಕಾಂಗ್ರೆಸ್‌ನವರು ಕೇಳಬೇಕು. ಅದನ್ನು ಬಿಟ್ಟು ಅವರ ಧ್ವನಿಯನ್ನು ಪ್ರಜೆಗಳಿಗೆ ಕೇಳಿಸುತ್ತಿದ್ದಾರೆ. ಇವರ ಸಂದರ್ಭದಲ್ಲಿ ಪಿಎಫ್ಐ, ಎಡಿಪಿಐ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದ್ದು, ಅಮಾಯಕರ ಹತ್ಯೆಯಾಗಿದ್ದು, ರೀಡೂ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಲೂಟಿ ಹೊಡೆದದ್ದನ್ನೆಲ್ಲಾ ಪ್ರಜೆಗಳು ಬಿಚ್ಚಿ ಹೇಳುತ್ತಿದ್ದಾರೆ. ಕಾಂಗ್ರೆಸಿಗರು ಅದನ್ನು ಕೇಳಬೇಕು. ಅದನ್ನು ಬಿಟ್ಟು ಇವರು ಮೈಕ್ ಹಿಡಿದುಕೊಂಡು ಕೂಗುವುದೇ ಪ್ರಜೆಗಳ ಧ್ವನಿ ಎಂದು ತಿಳಿದುಕೊಂಡಿದ್ದಾರೆ. 

ಕಾಂಗ್ರೆಸ್‌ನವರು ಜನರನ್ನು ಸೇರಿಸುತ್ತಾರೆ: ಕಾಂಗ್ರೆಸ್‌ನವರು ಜನ ಸೇರಿಸುವುದು, ಮೋದಿ ಅವರಿಗೆ ಜನ ಸೇರುವುದು. ಇವೆರಡಕ್ಕೂ ವ್ಯತ್ಯಾಸವಿದೆ. ಹಲವು ಕಾರಣಕ್ಕೆ ಜನರನ್ನು ಸೇರಿಸಬಹುದು. ಆದರೆ ಸೇರುವುದು ಪ್ರೀತಿಯಿಂದ ಮಾತ್ರ. ಪ್ರಜೆಗಳ ಬಲ ಮೋದಿ ಅವರ ಜೊತೆಗಿದೆ. ಕಾಂಗ್ರೆಸ್ ಪಕ್ಷ ಉಚಿತ ವಿದ್ಯುತ್, ಮಹಿಳೆಯರಿಗೆ 2000 ರೂ. ಹಣ ನೀಡುವ ಮಾತನ್ನ ಉತ್ತರ ಪ್ರದೇಶದಲ್ಲೂ ಹೇಳಿದ್ದರು. ಮೈ ಲಡ್ಕಿ ಹೂಂ, ಲಡ್ಸಕ್ತಿ ಹೂಂ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು. 399 ಸ್ಥಾನಗಳಲ್ಲಿ ಸ್ಪರ್ಧಿಸಿದರು. ಆದರೆ, 387ರಲ್ಲಿ ಠೇವಣಿ ಹೋಯಿತು. ಇದು ಅವರ ಪರಿಸ್ಥಿತಿ. ಗೋವಾದಲ್ಲಿ ಬಿಜೆಪಿ 3ನೇ ಬಾರಿಗೆ ಅಧಿಕಾರಕ್ಕೆ ಬಂತು. ಗೆದ್ದ ಕಾಂಗ್ರೆಸ್ ಶಾಸಕರ ಪೈಕಿ ಇಬ್ಬರು ಹೊರತುಪಡಿಸಿ ಎಲ್ಲರೂ ಬಂದು ಬಿಜೆಪಿ ಸೇರಿದರು. ಗುಜರಾತ್‌ನಲ್ಲೂ ಅದೇ ಫಲಿತಾಂಶ ಬಂತು ಎಂದು ಟೀಕಿಸಿದರು.

ನ್ಯಾಯ ಕೇಳುವವರಿಗೆ ನೈತಿಕತೆ ಇರಬೇಕು: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿ.ಟಿ. ರವಿ

ಪಿಎಫ್ಐ ಮನಸ್ಥಿತಿ ಬೇರು ಸಹಿತ ಕಿತ್ತುಹಾಕಬೇಕು : ಗಜ್ವಾ ಹಿಂದ್ ಹಾಗೂ ಪಿಎಫ್ಐ ಮನಸ್ಥಿತಿಯನ್ನು ಬೇರು ಸಹಿತ ಕಿತ್ತುಹಾಕಬೇಕು. ಇಲ್ಲವಾದಲ್ಲಿ ಜಗತ್ತಿಗೆ ನೆಮ್ಮದಿ ಇರುವುದಿಲ್ಲ , 2045ಕ್ಕೆ ದೇಶವನ್ನು ಇಸ್ಲಾಮಿಕರಣ ಮಾಡಬೇಕು ಎನ್ನುವ ಉದ್ದೇಶ ಪಿಎಫ್ಐನದ್ದು ಆಗಿತ್ತು. ಅದು ಕೇವಲ ಪಿಎಫ್‌ಐ ಅಜೆಂಡಾ ಅಷ್ಟೇ ಅಲ್ಲ. ಗಜ್ವಾಹಿ ಹಿಂದ್ ಎನ್ನುವ ಅಜೆಂಡ 7ನೇ ಶತಮಾನದಲ್ಲೇ ಪ್ರಾರಂಭವಾಗಿತ್ತು. ಹಿಂದೂಸ್ಥಾನದ ಮೇಲೆ ಆಕ್ರಮಣ ಮಾಡಿ, ಇಸ್ಲಾಮಿಕರಣ ಮಾಡಬೇಕೆನ್ನುವುದು ಅದರ ಉದ್ದೇಶವಾಗಿತ್ತು. ಇದಲ್ಲದೆ ನಮ್ಮ ಮೇಲೆ ನಡೆದ ಸಾಲು ಸಾಲು ದಾಳಿಗಳ ತತ್ವ ಗಜ್ವಾ ಹಿಂದ್ ಆಗಿತ್ತು ಎಂದರು.

ಗುರುಗೋವಿಂದ ಸಿಂಹನ ಮಕ್ಕಳನ್ನು ಕೊಂದರು: ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ಹಿಂದೂಗಳಿಗೆ ಭಯ ಹುಟ್ಟಿಸುವ ಸಂಚಿತ್ತು ಎಂದು ಸಹ ಎನ್ಐಎ ತನಿಖಾ ವರದಿ ಹೇಳಿದೆ. ಗುರುಗೋವಿಂದ ಸಿಂಹನಿಗೆ ಇಬ್ಬರು ಮಕ್ಕಳಿದ್ದರು. 7 ಮತ್ತು 9 ವರ್ಷದ ಆ ಇಬ್ಬರು ಮಕ್ಕಳನ್ನೂ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಅದರ ಹಿಂದೆ ಇದ್ದದ್ದೂ ಸಹ ಇದೇ ತತ್ವ. ನಮ್ಮ ಮತ ಸ್ವೀಕರಿಸಬೇಕು. ಇಲ್ಲವಾದಲ್ಲಿ ನಾಶವಾಗಬೇಕು ಎನ್ನುವುದು ಅವರ ಉದ್ದೇಶ. ಅದೇ ತತ್ವವನ್ನು ಇಟ್ಟುಕೊಂಡಿರುವುದು ಪಿಎಫ್ಐ ಎಂದು ಆರೋಪಿಸಿದರು.

click me!