ವಿಜಯಪುರ (ಅ.25) : ಬಿಜೆಪಿ (BJP) ಮತ್ತು ಜೆಡಿಎಸ್ (JDS) ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಕಾಂಗ್ರೆಸ್ (congress) ಆರೋಪಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ತಿರುಗೇಟು ನೀಡಿದ್ದಾರೆ. ಹತಾಶೆ, ಸೋಲಿನ ಭೀತಿಯಿಂದ ಕಾಂಗ್ರೆಸ್ನವರು (Congress) ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಿಂದಗಿಯಲ್ಲಿ (Sindagi) ಭಾನುವಾರ ಪ್ರಚಾರದ ವೇಳೆ ಮಾತನಾಡಿ, ಜನ ಕಾಂಗ್ರೆಸ್ನವರನ್ನು ತಿರಸ್ಕಾರ ಮಾಡುತ್ತಿರುವುದರಿಂದ ಅವರು ಹತಾಶೆಗೊಳಗಾಗಿ ಅವರು ಈ ಆರೋಪ ಮಾಡುತ್ತಿದ್ದಾರೆ. ಸೋತ ನಂತರ ಹೇಳಲು ನೆಪ ಬೇಕಲ್ವಾ? ಅದಕ್ಕಾಗಿ ಈ ಆರೋಪ ಮಾಡುತ್ತಿದ್ದಾರೆ. ನಾವು ಮುಳುಗುತ್ತಿದ್ದೇವೆ, ಹೇಗಾದರೂ ಮಾಡಿ ನಮ್ಮನ್ನು ರಕ್ಷಿಸಿ ಎನ್ನುವ ರೀತಿ ಕನಿಕರ ಹುಟ್ಟಿಸಲು ಯತ್ನಿಸುತ್ತಿದ್ದಾರೆ ಎಂದರು. ಬಿಜೆಪಿಯದೇನಿದ್ದರೂ ಏಕಾಂಗಿ ಹೋರಾಟ. ದೇಶದಲ್ಲೇ ಆಗಲಿ, ರಾಜ್ಯದಲ್ಲೇ ಆಗಲಿ ಬಿಜೆಪಿಗೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಬಿಜೆಪಿ 20ರಿಂದ 25 ಸಾವಿರ ಮತಗಳ ಅಂತರದಿಂದ ಜಯ ಸಾಧಿಸುವುದು ನಿಶ್ಚಿತ
ಹಿಂದುಳಿದ ವರ್ಗಗಳ ಪರವಾಗಿ ಯಾರು ಏನು ಮಾಡಿದ್ದಾರೆ ಎಂಬ ಚರ್ಚೆಯ ಅಗತ್ಯವಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಪ್ರಧಾನಿ ಮೋದಿ (Narendra Modi) ವಿರುದ್ಧ ಮಾತನಾಡುತ್ತಾರೆ. ಅವರು ಮೋದಿ ಕ್ಷಮೆ ಕೋರಬೇಕು. ಯಾಕೆಂದರೆ 47 ಮಂದಿ ಹಿಂದುಳಿದವರು, ದಲಿತರಿಗೆ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಇದಕ್ಕಾಗಿ ಮೋದಿ ಅವರಿಗೆ ಸಿದ್ದರಾಮಯ್ಯ ಅಭಿನಂದಿಸಬೇಕು ಎಂದರು.
ಎರಡೂ ಕ್ಷೇತ್ರದಲ್ಲೂ ಗೆಲುವು-ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಜನ ಬಿಜೆಪಿ ಜತೆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.