'ಬಿಜೆಪಿ ಮತ್ತು ಜೆಡಿಎಸ್‌ಗೆ ನಾನೇ ಟಾರ್ಗೆಟ್‌. ಅವರಿಗೆ ನನ್ನನ್ನು ಕಂಡರೆ ಭಯ'

By Kannadaprabha NewsFirst Published Oct 25, 2021, 7:14 AM IST
Highlights
  • ಕಂಬಳಿ ಹಾಕಿಕೊಳ್ಳಲೂ ಯೋಗ್ಯತೆ ಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ
  • ಕಂಬಳಿ ಸಂಸ್ಕೃತಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಕಂಬಳಿ ಹಾಕಿ​ಕೊ​ಳ್ಳುವ ಯೋಗ್ಯತೆಯೂ ನನಗಿದೆ ಎಂದ ಸಿದ್ದರಾಮಯ್ಯ

 ಸಿಂದಗಿ (ಅ.25):  ಕಂಬಳಿ ಹಾಕಿಕೊಳ್ಳಲೂ ಯೋಗ್ಯತೆ ಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai) ಅವರ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ಕಂಬಳಿ ಸಂಸ್ಕೃತಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಕಂಬಳಿ ಹಾಕಿ​ಕೊ​ಳ್ಳುವ ಯೋಗ್ಯತೆಯೂ ನನಗಿದೆ. ಅದನ್ನು ನಾನು ನಿಮ್ಮಿಂದ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸಿಂದಗಿ (Sindagi) ಪಟ್ಟಣದ ಕಾಂಗ್ರೆಸ್‌ (Congress) ಕಚೇರಿಯಲ್ಲಿ ಭಾನು​ವಾ​ರ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ ನಾನು ಹುಟ್ಟುಕುರುಬ, ಕುರಿ ಕೂಡ ಕಾದಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿಕೆಗೆ ಆಕ್ರೋಶ ಹೊರಹಾಕಿದರು.

ಕಂಬಳಿ ಹೊದ್ದುಕೊಳ್ಳಲೂ ಯೋಗ್ಯತೆ ಬೇಕು: ಸಿಎಂ

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್‌. ರಾಜಕಾರಣದಲ್ಲಿ ಮೀಸಲಾತಿ (Resarvation) ಜಾರಿ ಮಾಡಿದ್ದೂ ಕಾಂಗ್ರೆಸ್‌. ಇದನ್ನು ಬಿಜೆಪಿಯ ರಾಮಾಜೋಯಿಸ್‌ ತೀವ್ರವಾಗಿ ವಿರೋಧಿಸಿದ್ದರು. ಸಚಿವ ಈಶ್ವರಪ್ಪಗೆ (Eshwarappa) ಜಾತಿ ಬಗ್ಗೆ ಪ್ರೀತಿ ಇಲ್ಲ. ತಾನು ಕುರುಬ ಎಂದು ಹೇಳಿಕೊಳ್ಳಲು ಈಶ್ವರಪ್ಪ ಹಿಂದೇಟು ಹಾಕುತ್ತಾರೆ. ಈಶ್ವರಪ್ಪ ಅವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ (sangolli rayanna Brgade) ಸ್ವಾರ್ಥದ ಬ್ರಿಗೇಡ್‌ ಎಂದು ಕಿಡಿಕಾರಿದರು.

ಇದೇ ವೇಳೆ, ನನ್ನ ಅಧಿಕಾರಾವಧಿಯಲ್ಲಿ ವಿಶ್ವಕರ್ಮ, ಭಗೀರಥ, ಕಿತ್ತೂರ ಚನ್ನಮ್ಮ ಜಯಂತಿ ಹಾಗೂ ಅನೇಕ ಸಮಾಜದ ಅಭಿವೃದ್ಧಿ ನಿಗಮಗಳನ್ನು ಪ್ರಾರಂಭ ಮಾಡಿದ್ದೇನೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು (HD Devegowda) ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೆಂಪೇಗೌಡರ ಜಯಂತಿ ಆರಂಭಿಸಬೇಕಿತ್ತು. ಆದರೆ ಅದನ್ನು ಆರಂಭಿಸಿದ್ದು ನನ್ನ ಅಧಿಕಾರಾವಧಿಯಲ್ಲಿ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ (Basavanna) ಫೋಟೋ ಹಾಕಿಸಿದ್ದು ನಾನು ಎಂದು ಸಿದ್ದರಾಮಯ್ಯ ಹೇಳಿದರು.

ಅಹಿಂದ ಜನ ನನಗೆ ಶಕ್ತಿ ತುಂಬಿದ್ದಾರೆ. ನಾನು ಯಾವತ್ತೂ ಮೇಲ್ವರ್ಗದವರನ್ನು ನೋಡಿಲ್ಲ. ನನಗೆ ಬೇಕಾಗಿರುವುದು ಹಿಂದುಳಿದ ವರ್ಗಗಳ ಜನತೆ. ನಾನು ಹಿಂದುಳಿದ ವರ್ಗಗಳ ಜನತೆಯೊಂದಿಗೆ ಸದಾ ಇರುತ್ತೇನೆ. ಅಹಿಂದ ವರ್ಗಕ್ಕೆ ನೋವಾದರೆ ನಾನು ಬೀದಿಗಿಳಿದು ಹೋರಾಟ ಮಾಡುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನೀಡಿದ್ದೇನೆ, ಆದರೆ ಬಿಜೆಪಿ ಸರ್ಕಾರ ಇಲ್ಲಿವರೆಗೂ ಒಂದೇ ಒಂದು ಮನೆ ಬಡವರಿಗೆ ನೀಡಿಲ್ಲ ಎಂದರು.

ನಾನೇ ಟಾರ್ಗೆಟ್‌:  ಬಿಜೆಪಿ ಮತ್ತು ಜೆಡಿಎಸ್‌ಗೆ ನಾನೇ ಟಾರ್ಗೆಟ್‌. ಅವರಿಗೆ ನನ್ನನ್ನು ಕಂಡರೆ ಭಯ. ಸಿದ್ದರಾಮಯ್ಯನನ್ನು ಮುಗಿಸಿದರೆ ಕಾಂಗ್ರೆಸ್‌ ಮುಗಿಸಿದಂತೆ ಅಂತ ಅವರು ತಿಳಿದುಕೊಂಡಿದ್ದಾರೆ. ಜೆಡಿಎಸ್‌ ಬಿಜೆಪಿಯ ಬಿ ಟೀಂ ಆಗಿದೆ. ಜೆಡಿಎಸ್‌ನ ಅಪ್ಪ, ಮಕ್ಕಳು, ಮೊಮ್ಮಕ್ಕಳು ಇಲ್ಲೇ ಯಾಕೆ ಬೀಡು ಬಿಟ್ಟಿದ್ದಾರೆ? ಅದು ಜೆಡಿಎಸ್‌ ಪಕ್ಷವಲ್ಲ. ಜೆಡಿಎಫ್‌ ಪಕ್ಷ. ‘ಎಫ್‌’ ಅಂದರೆ ಫ್ಯಾಮಿಲಿ(ಕುಟುಂಬ) ಎಂದು ಸಿದ್ದರಾಮಯ್ಯ ಹೇಳಿದರು.

click me!