ಚಿತ್ರದುರ್ಗದಲ್ಲಿ ಇಂದು ಕಾಂಗ್ರೆಸ್‌ ಐಕ್ಯತಾ ಸಮಾವೇಶ

By Kannadaprabha NewsFirst Published Jan 8, 2023, 3:41 AM IST
Highlights

ಚಿತ್ರದುರ್ಗದಲ್ಲಿ ಬೃಹತ್‌ ಸಮ್ಮೇಳನ, ಮಧ್ಯಕರ್ನಾಟಕದಲ್ಲಿ ಎಸ್ಸಿ, ಎಸ್ಟಿಶಕ್ತಿ ಪ್ರದರ್ಶನ, 5 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ, ದಲಿತ ಸಮುದಾಯದ ಮತಗಳ ಮೇಲೆ ಕಾಂಗ್ರೆಸ್‌ ಕಣ್ಣು. 

ಚಿತ್ರದುರ್ಗ(ಜ.08): ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೋಟೆ ನಾಡು ಚಿತ್ರದುರ್ಗದಲ್ಲಿ ಭಾನುವಾರ ಕಾಂಗ್ರೆಸ್‌ನಿಂದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಬೃಹತ್‌ ಐಕ್ಯತಾ ಸಮಾವೇಶ ಆಯೋಜಿಸಲಾಗಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸಮಾವೇಶಕ್ಕಾಗಿ ವಿಶಾಲವಾದ ವೇದಿಕೆ ಹಾಕಲಾಗಿದ್ದು, ನೂರಕ್ಕೂ ಹೆಚ್ಚು ನಾಯಕರು ಕೂರಲು ವ್ಯವಸ್ಥೆ ಇದೆ. ಇದಲ್ಲದೆ ವೇದಿಕೆ ಮುಂಭಾಗ ಒಂದು ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖ ನಾಯಕರಿಗೆಂದೇ ಸಾವಿರಕ್ಕೂ ಅಧಿಕ ವಿಐಪಿ ಸೋಪಾಗಳನ್ನು ಅಳವಡಿಸಲಾಗಿದೆ.

ಸಮಾವೇಶಕ್ಕೆ ಆಗಮಿಸುವ ಲಕ್ಷಾಂತರ ಮಂದಿ ಕಾರ್ಯಕರ್ತರಿಗೆಲ್ಲ ವಿಶೇಷ ಊಟದ ವ್ಯವಸ್ಥೆಯೂ ಇದ್ದು ಹೋಳಿಗೆ, ಜಹಂಗೀರ್‌, ಮೈಸೂರು ಪಾಕ್‌ ತಯಾರು ಮಾಡುವಲ್ಲಿ ಶನಿವಾರದಿಂದಲೇ ಬಾಣಸಿಗರಿಂದ ಸಿದ್ಧತೆ ಶುರುವಾಗಿದೆ. ಸಮಾವೇಶದ ಉಸ್ತುವಾರಿ ವಹಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಕಳೆದ ಮೂರು ದಿನಗಳಿಂದ ಚಿತ್ರದುರ್ಗದಲ್ಲೇ ಬೀಡು ಬಿಟ್ಟಿದ್ದು, ಪ್ರತಿ ಹಂತದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಸಂದೇಶ ರವಾನಿಸಿದ ಯಡಿಯೂರಪ್ಪ

ರಾಹುಲ್‌, ಪ್ರಿಯಾಂಕಾಗೆ ಆಹ್ವಾನ: ಸಮಾವೇಶಕ್ಕೆ ರಾಷ್ಟ್ರೀಯ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಅವರ ಆಗಮನ ಸಾಧ್ಯತೆ ಕಮ್ಮಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಸೇರಿ ಹಲವು ನಾಯಕರು ಭಾಗವಹಿಸಲಿದ್ದಾರೆ. ‘ಹಿಂದೆ ಬ್ರಿಟಿಷರು ಒಡೆದಾಳುವ ನೀತಿ ಅನುಸರಿಸುತ್ತಿದ್ದು ಅದೇ ಮಾದರಿ ಅನುಸರಿಸಿ ಬಿಜೆಪಿ ಪರಿಶಿಷ್ಟರ ವಿಘಟನೆಯಲ್ಲಿ ತೊಡಗಿದೆ. ಐಕ್ಯತಾ ಸಮಾವೇಶದ ಮೂಲಕ ಬಿಜೆಪಿಯ ಈ ಬಣ್ಣ ಬಯಲು ಮಾಡಲಾಗುವುದು’ ಎಂದು ಕೆಪಿಸಿಸಿ ಈಗಾಗಲೇ ಪ್ರಚಾರ ನಡೆಸಿದೆ. ರಾಜ್ಯದ ವಿವಿಧೆಡೆ ಸುದ್ದಿಗೋಷ್ಠಿ ನಡೆಸಿ ಸಮಾವೇಶದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದೆ.

ಕುಮಾರಸ್ವಾಮಿ ಬುಟ್ಟಿಯಲ್ಲಿ ಏನೂ ಇಲ್ಲ: ಮುನಿರತ್ನ

ದಲಿತರ ಮತಗಳ ಮೇಲೆ ಕಣ್ಣು: ರಾಜ್ಯದ 224 ಕ್ಷೇತ್ರಗಳ ಪೈಕಿ 173 ಕ್ಷೇತ್ರಗಳಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಸಮುದಾಯಗಳು ಹೆಚ್ಚಿದ್ದು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ದಲಿತಮತ ಬುಟ್ಟಿಗೆ ಕೈಹಾಕಲು ಈ ಸಮಾವೇಶದ ಮೂಲಕ ಐಕ್ಯತೆ ಸಂದೇಶ ಸಾರುವ ಯತ್ನವನ್ನು ಕಾಂಗ್ರೆಸ್‌ ನಡೆಸುತ್ತಿದೆ. ಇನ್ನು ಮಧ್ಯ ಕರ್ನಾಟಕದಲ್ಲಿ ಎಸ್ಸಿ, ಎಸ್ಟಿಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವರನ್ನು ಗುರಿಯಾಗಿಸಿಕೊಂಡೇ ಈ ಸಮಾವೇಶ ಸಂಘಟಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಪರಿಶಿಷ್ಟಜಾತಿ ವಿಧಾನಸಭೆ ಕ್ಷೇತ್ರ ಹಾಗೂ ಪರಿಶಿಷ್ಟಪಂಗಡದ ಎರಡು ಕ್ಷೇತ್ರಗಳಿವೆ. ಲೋಕಸಭೆ ಕೂಡಾ ಪರಿಶಿಷ್ಟಜಾತಿಗೆ ಮೀಸಲಾಗಿದೆ. ನೆರೆಯ ಬಳ್ಳಾರಿ, ದಾವಣಗೆರೆ ಜಿಲ್ಲೆಯಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಮೀಸಲು ಕ್ಷೇತ್ರಗಳು ಹೆಚ್ಚಿಗೆ ಇವೆ. ಆ ಜಿಲ್ಲೆಗಳಿಂದ ಸುಲಭವಾಗಿ ಕಾರ್ಯಕರ್ತರನ್ನು ಕರೆತರಬಹುದು ಎಂಬ ಯೋಜನೆ ಇಟ್ಟುಕೊಂಡೇ ಚಿತ್ರದುರ್ಗವನ್ನು ಈ ಸಮಾವೇಶಕ್ಕಾಗಿ ಆಯ್ಕೆ ಮಾಡಲಾಗಿದೆ.

ಸಾವಿರಕ್ಕೂ ಅಧಿಕ ಬಸ್ಸು: ಸಮಾವೇಶಕ್ಕೆ ಚಿತ್ರದುರ್ಗ ಆಸುಪಾಸಿನ ಜಿಲ್ಲೆ ಸೇರಿ ರಾಜ್ಯದ ಇತರೆ ಜಿಲ್ಲೆಗಳಿಂದಲೂ ಸಾಕಷ್ಟುಜನರನ್ನು ಕರೆತರಲಾಗುತ್ತಿದ್ದು, ಇದಕ್ಕೆಂದೇ ಒಂದು ಸಾವಿರಕ್ಕೂ ಅಧಿಕ ಬಸ್ಸುಗಳನ್ನು ನಿಯೋಜಿಸಲಾಗಿದೆ.

click me!