ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ಬಗ್ಗೆ ಮುಂದುವರಿದ ಗೊಂದಲ

By Kannadaprabha NewsFirst Published Mar 24, 2023, 2:00 AM IST
Highlights

ವರುಣ ಅಥವಾ ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಆಯ್ಕೆಯಾಗಬಹುದು ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟನೆಯನ್ನು ಹೈಕಮಾಂಡ್‌ಗೆ ನೀಡಲಾಗಿಲ್ಲ. 

ಬೆಂಗಳೂರು(ಮಾ.24): ಮುಂದಿನ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಯಾವುದು ಎಂಬ ಗೊಂದಲ ಇನ್ನೂ ಮುಂದುವರೆದಿದೆ. ವರುಣ ಅಥವಾ ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಆಯ್ಕೆಯಾಗಬಹುದು ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟನೆಯನ್ನು ಹೈಕಮಾಂಡ್‌ಗೆ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಹೈಕಮಾಂಡ್‌ ವಿಧಾನಸಭಾ ಚುನಾವಣೆಗೆ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಕ್ಷೇತ್ರವನ್ನು ಪ್ರಕಟಿಸುವ ಉದ್ದೇಶ ಹೊಂದಿದೆ. ಸಿದ್ದರಾಮಯ್ಯ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇರದಿದ್ದರೆ ಅದರಿಂದ ಗೊಂದಲ ಹೆಚ್ಚಾಗಬಹುದು. ನಾಲ್ಕೈದು ಮಂದಿ ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲರ ಹೆಸರು ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್‌ ಪ್ರಕಟಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಕ್ಷೇತ್ರದ ಹೆಸರು ಪ್ರಕಟವಾಗದಿದ್ದರೆ ಇದರಿಂದ ಗೊಂದಲ ಮಾತ್ರವಲ್ಲದೆ, ತಪ್ಪು ಸಂದೇಶವೂ ರವಾನೆಯಾಗಬಹುದು ಎಂಬ ಗುಮಾನಿ ಹೈಕಮಾಂಡ್‌ಗೆ.

ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಿ: ಸಿದ್ದರಾಮಯ್ಯ

ಹೀಗಾಗಿಯೇ ಸಿದ್ದರಾಮಯ್ಯ ಅವರು ತಮ್ಮ ಆಯ್ಕೆಯ ಕ್ಷೇತ್ರವನ್ನು ಅಂತಿಮಗೊಳಿಸಲು ಸಮಯಾವಕಾಶ ನೀಡುತ್ತಿದೆ ಎನ್ನುತ್ತವೆ ಮೂಲಗಳು. ಮತ್ತೊಂದು ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರ ಆಪ್ತ ಬಣಕ್ಕೆ ಕಳೆದ ಬಾರಿಯಂತೆ ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಲಿ ಎಂಬ ಬಯಕೆಯಿದೆ. ಕೋಲಾರ ಹಾಗೂ ವರುಣ ಎರಡು ಕ್ಷೇತ್ರಗಳಲ್ಲೂ ಸಿದ್ದರಾಮಯ್ಯ ಸ್ಪರ್ಧಿಸಲಿ ಎಂಬುದು ಆಪ್ತರ ಬಯಕೆ. ಈ ವಿಚಾರವನ್ನು ಹೈಕಮಾಂಡ್‌ ಮುಂದಿಡಲಾಗಿದ್ದು, ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ ಎನ್ನುತ್ತವೆ ಮೂಲಗಳು.

click me!