ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ: ರೇಣುಕಾಚಾರ್ಯ ವಿರುದ್ಧ ರಾಜ್ಯ ಸಮಿತಿಗೆ ದೂರು

By Kannadaprabha NewsFirst Published Sep 12, 2023, 11:37 AM IST
Highlights

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಕ್ಷ ವಿರೋಧಿ ಚಟುವಟಿಕೆ ಕುರಿತು ಜಿಲ್ಲಾ ಬಿಜೆಪಿ ರಾಜ್ಯ ಸಮಿತಿಗೆ ದೂರು ಸಲ್ಲಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು.

ದಾವಣಗೆರೆ (ಸೆ.12):  ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಕ್ಷ ವಿರೋಧಿ ಚಟುವಟಿಕೆ ಕುರಿತು ಜಿಲ್ಲಾ ಬಿಜೆಪಿ ರಾಜ್ಯ ಸಮಿತಿಗೆ ದೂರು ಸಲ್ಲಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೇಣುಕಾಚಾರ್ಯ ಪಕ್ಷದಲ್ಲಿ ತಾವೊಬ್ಬರೇ ಪ್ರಾಮಾಣಿಕರು ಉಳಿದವರೆಲ್ಲಾ ಅಪ್ರಾಮಾಣಿಕರು ಎಂಬಂತೆ ಬಿಂಬಿಸುತ್ತಿದ್ದಾರೆ. ಪಕ್ಷದ ನಾಯಕರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ವಿರುದ್ಧ ಹಾದಿ ಬೀದಿಯಲ್ಲಿ ಮಾತನಾಡಿ ಪಕ್ಷಕ್ಕೆ ಮುಜುಗರ ತಂದೊಡ್ಡುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಪಕ್ಷದ ರಾಜ್ಯ ಸಮಿತಿಗೆ ದೂರು ಸಲ್ಲಿಸಿದ್ದು, ಮುಂದಿನ ಕ್ರಮವನ್ನು ಪಕ್ಷದ ನಾಯಕರು ಕೈಗೊಳ್ಳುತ್ತಾರೆ ಎಂದರು.

ರಾಜ್ಯದಲ್ಲಿ ಇನ್ನೊಬ್ಬ ಯಡಿಯೂರಪ್ಪ ಹುಟ್ಟಲು ಸಾಧ್ಯವಿಲ್ಲ: ಎಂ.ಪಿ.ರೇಣುಕಾಚಾರ್ಯ

ಬಿಎಸ್‌ವೈ ಕೆಳಗಿಳಿಸಿದಾಗ ರಾಜೀನಾಮೆ ಕೊಟ್ಟಿಲ್ಲವೇಕೆ? :

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಬ್ಬ ಸೂರ್ಯ ಇದ್ದಂತೆ. ಅವರಿಗೆ ರೇಣುಕಾಚಾರ್ಯ ಟಾರ್ಚ್ ಹಿಡಿಯಲು ಹೋಗುತ್ತಾರೆ. ಅವರ ನೆರಳಲ್ಲಿಯೇ ನಾವೆಲ್ಲಾ ಬದುಕುತ್ತಿದ್ದೇವೆ ಎನ್ನುವುದು ತಿಳಿದಿರುವ ವಿಷಯ. ಆದರೆ, ಅಂದು ಸಿಎಂ ಕುರ್ಚಿಯಿಂದ ಬಿಎಸ್‌ವೈಯವರ ಕೆಳಗಿಳಿಸಿದಾಗ ವಿರೋಧಿಸದೆ, ಪ್ರತಿಭಟಿಸದೇ ಅಥವಾ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡದ ರೇಣುಕಾಚಾರ್ಯ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾರ್ಯಕರ್ತರಲ್ಲಿ ಗೊಂದಲ ಮೂಡುವುದಿಲ್ಲವೇ?:

ಈಗಾಗಲೇ ಅಧಿಕಾರ ಅನುಭವಿಸಿದ್ದೀರಿ, ಬಾಯಿ ಚಪಲಕ್ಕೆ ಪಕ್ಷದ ತೇಜೋವಧೆ ಮಾಡುವುದು ಸರಿಯಲ್ಲ. ಹೊನ್ನಾಳಿಯಲ್ಲಿ ಶಾಂತರಾಜ್ ಪಾಟೀಲ್, ಎ.ಪಿ. ಹನುಮಂತಪ್ಪ, ಗದ್ದುಗೇಶ್, ಅರಬಗಟ್ಟೆ ರಮೇಶಪ್ಪ ಸೇರಿ ಹಲವರ ಮೂಲೆಗುಂಪು ಮಾಡಿದ್ದೀರಿ. ಈಗ ಅಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಿದ್ದೀರಲ್ಲ ನಿಮ್ಮ ಬಗ್ಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದರು.

ಗ್ರಾಪಂ ಗೆಲ್ಲೋಕೆ ಆಗದವರು ಪಕ್ಷದ ಹೊಣೆ ಹೊತ್ತಿದ್ದಾರೆ ಎಂದು ಪಕ್ಷದ ವಿರುದ್ಧ ಹೇಳಿದ್ದೀರಿ. ನೀವು ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದ್ದೀರಿ ನಿಮ್ಮ ನಿಲುವೇನು? ಹೀಗೆ ಅನ್ಯ ಪಕ್ಷದವರನ್ನು ಭೇಟಿ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡರೆ ಪಕ್ಷದ ಬಗ್ಗೆ ಕಾರ್ಯಕರ್ತರಲ್ಲಿ, ಜನರಲ್ಲಿ ಗೊಂದಲ ಮೂಡುವುದಿಲ್ಲವೇ ಎಂದು ಪ್ರಶ್ನಿಸಿದರು.

ಸಾಕ್ಷಿ ಇರುವುದರಿಂದ ಗುರುಸಿದ್ದನಗೌಡ ಉಚ್ಚಾಟನೆ:

ಗುರುಸಿದ್ದನಗೌಡ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದರ ಬಗ್ಗೆ ಸಾಕ್ಷಿಗಳಿವೆ. ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್ ಆದಿಯಾಗಿ ಎಲ್ಲರೂ ಇದ್ದರು. ಆಗ ಗುರುಸಿದ್ದನಗೌಡರ ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಪಕ್ಷದ ನಾಯಕರು ಅವರನ್ನು ಉಚ್ಚಾಟಿಸಲು ತೀರ್ಮಾನ ಕೈಗೊಂಡರು. ಪಕ್ಷದ ತೀರ್ಮಾನವೇ ಅಂತಿಮ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಜಗದೀಶ್, ಮಂಜಪ್ಪ, ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಶಾಂತಕುಮಾರ ಇತರರಿದ್ದರು.

ದೂರು ನೀಡಿದ್ದೇವೆ, ತೀರ್ಮಾನ ರಾಜ್ಯಘಟಕದ್ದು..

ಲೋಕಸಭಾ ಟಿಕೆಟ್ ಆಕಾಂಕ್ಷಿ ಎನ್ನುತ್ತೀರಿ. ಟಿಕೆಟ್ ಸಿಗದಿದ್ದರೆ ಮುಂದಿನ ತೀರ್ಮಾನ ಎನ್ನುತ್ತೀರಿ ಇದೆ ನಿಮ್ಮ ಪ್ರಾಮಾಣಿಕತೆಯಾ ಎಂದು ವೀರೇಶ್ ಹನಗವಾಡಿ ಪ್ರಶ್ನೆ ಹಾಕಿದರು, ಸಂಸದ ಜಿ.ಎಂ.ಸಿದ್ದೇಶ್ವರ್ ಯಾರಿಗೆ ಟಿಕೆಟ್ ಸಿಕ್ಕರೂ ನಾವು ಅವರಿಗೆ ಬೆಂಬಲಿಸುತ್ತೇವೆ ಎಂದಿದ್ದಾರೆ. ಹಾಗಿದ್ದರೂ ನೀವು ಅವರನ್ನೇ ದೂರುತ್ತೀರಿ. ನಿಮ್ಮ ನಡೆಯನ್ನು ರಾಜ್ಯ ಘಟಕ ಗಮನಿಸುತ್ತಿದೆ. ನಾವು ದೂರು ನೀಡುತ್ತೇವೆ ಮುಂದೆ ಅವರೆ ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಸಿದ್ದನಗೌಡ ಹಾಗೂ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ: ಯಾಕೆ ಗೊತ್ತಾ?

ರೇಣುಕಾಚಾರ್ಯ ಎರಡು ಬಾರಿ ಮಂತ್ರಿಯಾಗಿದ್ದಾರೆ, ನಿಗಮ ಮಂಡಳಿಗೂ ನೇಮಕ ಆಗಿದ್ದರು, ಆಗ ಪಕ್ಷದವರು ಅಪ್ರಾಮಾಣಿಕರಂತೆ ಕಾಣಲಿಲ್ಲ. ಆಗ ಕಾಣದ ಅಪ್ರಾಮಾಣಿಕತೆ ಈಗ ಇವರಿಗೆ ಕಾಣಿಸುತ್ತಿರುವ ಹಿಂದಿನ ಮರ್ಮವೇನು? ಇದೇ ಇವರ ಪಕ್ಷ ನಿಷ್ಠೆಯಾ.

ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾಧ್ಯಕ್ಷ

ಜಗಳೂರು ಸೇರಿ ಜಿಲ್ಲೆಯ ಆರು ಕ್ಷೇತ್ರಗಳು ಕೈತಪ್ಪಲು ಪಕ್ಷದ ಕಾರ್ಯಕರ್ತರಾಗಲೀ ಅಥವಾ ಮತದಾರರಾಗಲೀ ಕಾರಣರಲ್ಲ. ನಮ್ಮ ಪಕ್ಷದವರೇ ಸೋಲಿಗೆ ಕಾರಣ. ಜಗಳೂರಲ್ಲಿ ಮಾಜಿ ಶಾಸಕ, ಜಿಲ್ಲಾ ಮಾಜಿ ಅಧ್ಯಕ್ಷ ಟಿ. ಗುರುಸಿದ್ದನಗೌಡ ಅವರು ನಮ್ಮ ವಿರೋಧಿ ಅಭ್ಯರ್ಥಿ ಪರ ಪ್ರಚಾರ ಮಾಡಿರುವ ದಾಖಲೆಗಳು ನಮ್ಮಲ್ಲಿವೆ.

-ಎಸ್.ವಿ. ರಾಮಚಂದ್ರಪ್ಪ, ಮಾಜಿ ಶಾಸಕ

click me!