Breaking: ಕಾಂಗ್ರೆಸ್ ಅಭ್ಯರ್ಥಿ ಸೋತುಬಿಟ್ಟರೆ ಸಿಎಂ ಸಿದ್ದರಾಮಯ್ಯ ಸೀಟಿಗೆ ಕಂಟಕವಾಗುತ್ತೆ; ಸಚಿವ ಬೈರತಿ ಸುರೇಶ್

By Sathish Kumar KHFirst Published Apr 18, 2024, 4:17 PM IST
Highlights

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸೀಟಿಕೆ ಕಂಟಕವಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಕೋಲಾರ (ಏ.18): ಲೋಕಸಭಾ ಚುನಾವಣೆಯಲ್ಲಿ ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ. ಗೌತಮ್ ಒಂದು ವೇಳೆ ಸೋತರೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸೀಟಿಗೆ ಕಂಟಕವಾಗುತ್ತದೆ. ಇದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದರು.

ಕೋಲಾರ ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಕುರುಬ ಸಮುದಾಯದ ಮುಖಂಡ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಚಿವ ಬೈರತಿ ಸುರೇಶ್ ಅವರು, ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಅವರ ಸೀಟಿಗೆ ಕಂಟಕವಾಗುತ್ತದೆ. ನೀವು ಆ ಕೆಲಸ ಮಾಡಬೇಡಿ. ನಿಮಗೆ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನೀವೆಲ್ಲರೂ ಸೇರಿ ಕುರುಬ ಸಮುದಾಯದ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು. ನಿಮ್ಮ ಬೆಂಬಲ ಕಾಂಗ್ರೆಸ್ ಪಕ್ಷದ ಮೇಲಿರಲಿ, ಸಿದ್ದರಾಮಯ್ಯ ನವರ ಮೇಲಿರಲಿ, ಅಭ್ಯರ್ಥಿ ಗೌತಮ್​ ಮೇಲಿರಲಿ. ನೀವು ಬೇರೆ ಮನಸ್ಸು ಮಾಡಿ ಬೇರೆ ಅಭ್ಯರ್ಥಿ ಏನಾದ್ರು ಗೆದ್ದರೆ ಸಿದ್ದರಾಮಯ್ಯನವರ ಸೀಟಿಗೆ ಕಂಟಕವಾಗಲಿದೆ. ಅವರ ಸೀಟಿಕೆ ಕಂಟಕವಾದರೆ ನೀವೇ ನೇರವಾಗಿ ಹೊಣೆಗಾರರಾಗುತ್ತೀರಿ ಎಂದು ಹೇಳಿದರು.

ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ರಾಜ ವಂಶದ ಕುಡಿಯಲ್ಲ; ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಟೀಕೆ

ಕೋಲಾರದಲ್ಲಿ ನಡೆದ ಕುರುಬ ಸಮುದಾಯದ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸುರೇಶ್ ಅವರು, ಕುರುಬ ಸಮುದಾಯ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಸಿದ್ದರಾಮಯ್ಯ ನವರ ಕೈ ಬಲಪಡಿಸಲು ಬೆಂಬಲ ನೀಡಿದ್ದಾರೆ. ಕೋಲಾರದಲ್ಲಿ ಎಸ್ಸಿ ಎಡಗೈ, ಬಲಗೈ ಸಮುದಾಯ ಒಂದಾಗಿದೆ. ಬಲಗೈ ಸಮುದಾಯದವರು ನಮಗೆ ಬೆಂಬಲ ಕೊಡ್ತಾರೆ. ನಿನ್ನೆ ಡಿಕೆ ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ  ಸಿಎಂ ಎಂದು ಹೇಳಿದ್ದರ ಬಗ್ಗೆ ಮಾತನಾಡಿ, ಅದು ಬಾಯಿ ತಪ್ಪಿ ಹೇಳಿದ್ದಾರೆ ಅಷ್ಟೇ. ಬಹಳಷ್ಟು ನಾಯಕರು ಬಾಯ್ತಪ್ಪಿ ಮಾತಾಡಿದ್ದಾರೆ. ದೇವೇಗೌಡರು - ಯಡಿಯೂರಪ್ಪ ಮಾತನಾಡಿರುವುದನ್ನು ಕೇಳಿಸಿಕೊಳ್ಳಲಾಗದೆ ಕಿವಿ ಮುಚ್ಚಿಕೊಳ್ಳಬೇಕಾಗುತ್ತದೆ ಎಂದರು.

ರಾಜ್ಯದ ಯಾವುದೇ ಸಚಿವರಿಗೆ ತಮ್ಮ ಜಿಲ್ಲೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಕುರಿತು ನಮ್ಮ ಹೈಕಮಾಂಡ್ ಯಾರಿಗೂ ಟಾರ್ಗೆಟ್ ಕೊಟ್ಟಿಲ್ಲ. ಗೆಲ್ಲಿಸಿಕೊಂಡು ಬನ್ನಿ ಅಂತ ಅಷ್ಟೇ ಹೇಳಿದ್ದಾರೆ. ಸಿಎಂ ಹಾಗೂ ಮಂತ್ರಿಗಳನ್ನು ಬದಲಾವಣೆ ಮಾಡ್ತೀವಿ ಅಂತ ಹೇಳಿಲ್ಲ. ಕಾಂಗ್ರೆಸ್ ನಲ್ಲಿ ಹೆಚ್ಚಿಗೆ ಕುಟುಂಬಸ್ಥರಿಗೆ ಟಿಕೇಟ್ ನೀಡಿರುವ ಕುರಿತು ಮಾತನಾಡಿ, ಯಡಿಯೂರಪ್ಪ, ಸಿದ್ದೇಶ್ವರ್,ಜಗದೀಶ್ ಶೆಟ್ಟರ್ ಕುಟುಂಬಕ್ಕೆ ಟಿಕೇಟ್ ಕೊಟ್ಟಿಲ್ವಾ ? ಜನರ ಅಭಿಪ್ರಾಯ ಪಡೆದು ನಾವು ಟಿಕೇಟ್ ಕೊಟ್ಟಿದ್ದೇವೆ ಎಂದು ಹೇಳಿದರು.

ಕೋಲಾರ: ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ..!

ಕೋಲಾರ ಜಿಲ್ಲೆಯಲ್ಲಿ ಕೆ.ಎಚ್ ಮುನಿಯಪ್ಪ ಪ್ರಚಾರಕ್ಕೆ ಗೈರು ಕುರಿತು ಮಾತನಾಡಿ, ನಿನ್ನೆ ಎಲ್ಲರಿಗಿಂತ ಮುಂಚೆಯೇ ಕಾರ್ಯಕ್ರಮಕ್ಕೆ ಬಂದಿದ್ದರು. ಆ ರೀತಿ ಅವರನ್ನು ಬಿಂಬಿಸೋದು ತಪ್ಪು. ಅವರ ಪುತ್ರಿ ರೂಪಕಲಾ ಸಹ ನಿನ್ನೆ ಜನರನ್ನು ಕರೆದುಕೊಂಡು ಬಂದಿದ್ದರು. ಕೆ.ಎಚ್ ಮುನಿಯಪ್ಪ ನವರ ಸಹಾಯ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಇರಲಿದೆ. ಖರ್ಗೆ,ರಾಹುಲ್ ಗಾಂಧಿ,ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಆತ್ಮೀಯರಾಗಿದ್ದಾರೆ. ಅಳಿಯನಿಗೆ ಟಿಕೇಟ್ ಸಿಕ್ಕಿಲ್ಲ, ಈಗ ಅವರಿಗೆ ಸಮಾಧಾನ ಆಗಿದೆ. ನಮ್ಮ ಗೆಲುವಿಗೆ ಅವ್ರು ಸಹ ಶ್ರಮ ಹಾಕುತ್ತಾರೆ ಎಂದು ತಿಳಿಸಿದರು.

ಜೈ ಶ್ರೀರಾಮ್ ಘೋಷಣೆ ಮಾಡಿದವರ ಮೇಲೆ ಹಲ್ಲೆ ಸಣ್ಣ ಘಟನೆ: 
ಜೈ ಶ್ರೀರಾಮ್ ಘೋಷಣೆಗೆ ಕೂಗಿದಕ್ಕೆ ಹಲ್ಲೆ ಸಂಬಂಧದ ಕುರಿತು ಮಾತನಾಡಿ, ನಾವು ಸಹ ಶ್ರೀರಾಮ ಸೇನೆಯ ಭಕ್ತರು, ನನ್ನ ಮನೆ ದೇವರು ರಾಮೇಶ್ವರ. ಸಣ್ಣ ಸಣ್ಣ ಘಟನೆಗಳನ್ನು ದೊಡದ್ದಾಗಿ ಬಿಂಬಿಸೋದು ತಪ್ಪು. ನಾವೆಲ್ಲ ಶ್ರೀರಾಮ ಚಂದ್ರನ ಭಕ್ತರು, ಎಲ್ಲರನ್ನೂ ಒಗ್ಗಟ್ಟು ಮಾಡಬೇಕು. ನಿನ್ನೆಯ ರಾಹುಲ್ ಗಾಂಧಿ ಸಮಾವೇಶದಲ್ಲಿ 50 ಸಾವಿರ ಜನ ಸೇರಿದ್ದರು. ಅಲ್ಲಿಗೆ ಬಂದವರು ಶ್ರೀರಾಮನವಮಿ ಹಬ್ಬ ಮಾಡಿಕೊಂಡು ಬಂದಿರಲಿಲ್ವಾ ? ಹಾಗಾದ್ರೆ ಅಲ್ಲಿ ಏಕೆ ಈ ರೀತಿ ಘಟನೆ ನಡೆದಿಲ್ಲ.
- ಬೈರತಿ ಸುರೇಶ್​, ನಗರಾಭಿವೃದ್ಧಿ ಸಚಿವ

click me!