ಬಿಹಾರ ಸರ್ಕಸ್‌ ಬಳಿಕ ರಾಜ್ಯ ಸಂಪುಟ ಕಸರತ್ತು: ಬಿಎಸ್‌ವೈ

By Kannadaprabha NewsFirst Published Nov 14, 2020, 11:30 AM IST
Highlights

ವರಿಷ್ಠರು ಈಗ ಬಿಹಾರದಲ್ಲಿ ಬ್ಯುಸಿ, ಅವರು ಸಮಯ ಕೊಟ್ಟ ನಂತರ ದಿಲ್ಲಿಗೆ| ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡುವ ವಿಚಾರ ಸಂಬಂಧ ಹೈಕಮಾಂಡ್‌ ಹೇಗೆ ಹೇಳುತ್ತದೆಯೋ ಹಾಗೆಯೇ ಮಾಡುತ್ತೇನೆ: ಯಡಿಯೂರಪ್ಪ| 

ಬೆಂಗಳೂರು(ನ.14): ಉಪಚುನಾವಣೆ ಫಲಿತಾಂಶ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾಗಲಿದೆ ಎಂಬ ನಿರೀಕ್ಷೆ ಸದ್ಯಕ್ಕೆ ಈಡೇರುವಂತೆ ಕಾಣುತ್ತಿಲ್ಲ. ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ಇಂತಹದೊಂದು ಬೆಳವಣಿಗೆ ನಡೆಯುವ ಸಾಧ್ಯತೆ ಹೆಚ್ಚು.

ಇಂತಹದೊಂದು ಸುಳಿವನ್ನು ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ನೀಡಿದೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶುಕ್ರವಾರ ಅಥವಾ ಶನಿವಾರ ದೆಹಲಿಗೆ ಹೋಗಬೇಕಾಗಿತ್ತು. ಆದರೆ, ಪಕ್ಷದ ವರಿಷ್ಠ ನಾಯಕರು ಬಿಹಾರದಲ್ಲಿ ಸರ್ಕಾರ ರಚನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರು ಸಮಯ ಕೊಟ್ಟ ಕೂಡಲೇ ದೆಹಲಿಗೆ ಹೋಗಿ ಬರುತ್ತೇನೆ. ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡುವ ವಿಚಾರ ಸಂಬಂಧ ಹೈಕಮಾಂಡ್‌ ಹೇಗೆ ಹೇಳುತ್ತದೆಯೋ ಹಾಗೆಯೇ ಮಾಡುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಶಾಸಕರ ರಹಸ್ಯ ಸಭೆ: ಇದರ ಸೂತ್ರಧಾರಿ ಹೆಸ್ರು ಬಹಿರಂಗ ಪಡಿಸಿದ ಸಿಎಂ

ಸಚಿವ ಸ್ಥಾನ ಆಕಾಂಕ್ಷಿಗಳು ಸಚಿವ ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ಮಾಡದೆ, ಮತ್ತೆ ಯಾವಾಗ ಮಾಡುತ್ತಾರೆ ಎಂದು ಮರು ಪ್ರಶ್ನೆ ಹಾಕಿ ಸಭೆಯನ್ನು ಸಚಿವ ಈಶ್ವರಪ್ಪ ಅವರೇ ಮಾಡಿಸಿದ್ದು ಎಂದು ಚಟಾಕಿ ಹಾರಿಸಿದರು.

ಸಿಎಂ ಮೇಲೆ ಒತ್ತಡ:

ಬಿಹಾರದಲ್ಲಿ ಸರ್ಕಾರ ರಚನೆ ಬಳಿಕ ರಾಜ್ಯದ ರಾಜ್ಯದ ಸಂಪುಟ ಕಸರತ್ತು ಎಂಬುದು ಮುಖ್ಯಮಂತ್ರಿ ಹೇಳಿಕೆಯಿಂದ ಸ್ಪಷ್ಟವಾಗಿದೆ. ಆದರೆ, ಸಚಿವ ಸ್ಥಾನಕ್ಕಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿರುವವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದಲ್ಲಿನ ಹಿರಿಯ ನಾಯಕರು ಸಹ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಜಾರಕಿಹೊಳಿ ನಿವಾಸದಲ್ಲಿ ಈಗಾಗಲೇ ಕೆಲ ಶಾಸಕರು ಚರ್ಚೆ ನಡೆಸಿದ್ದಾರೆ. ಅಲ್ಲದೇ, ಕೆಲವು ಸ್ವತಃ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಾವು ಸಹ ಸಚಿವ ಸ್ಥಾನದ ಆಕಾಂಕ್ಷಿಗಳು ಎಂದು ಮನವಿ ಮಾಡಿದ್ದಾರೆ.

ಸಂಪುಟ ವಿಸ್ತರಣೆ ವಿಚಾರದಲ್ಲಿ ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ಹೇಳುತ್ತಿಲ್ಲವಾದರಿಂದ ಮುಖ್ಯಮಂತ್ರಿಗಳ ಕೈ ಕಟ್ಟಿಹಾಕಿದಂತಾಗಿದೆ. ಕಳೆದ ಬಾರಿಯೂ ಸಂಪುಟ ವಿಸ್ತರಣೆಗೆ ಕೇಂದ್ರ ನಾಯಕರು ಒಪ್ಪಿಗೆ ನೀಡಿರಲಿಲ್ಲ.
 

click me!