* ಡಿಕೆ ಶಿವಕುಮಾರ್ ಆರೋಪಕ್ಕೆ ಸಿಎಂ ಬೊಮ್ಮಾಮಿ ತಿರುಗೇಟು
* ದೇಗುಲಗಳನ್ನು ಸ್ವತಂತ್ರಗೊಳಿಸಿ ಬಿಜೆಪಿ ಕಾರ್ಯಕರ್ತರಿಗೆ ಹಸ್ತಾಂತರಿಸಲು ಮುಂದಾಗಿದೆ ಎಂದಿದ್ದ ಡಿಕೆಶಿ
* ಡಿ.ಕೆ.ಶಿವಕುಮಾರ್ ಯಾವಾಗಲೂ ಹಿಂದುತ್ವದ ವಿರುದ್ಧವೇ ಚಿಂತಿ ಎಂದ ಸಿಎಂ
ಬೆಂಗಳೂರು, (ಡಿ.31) : ಬೆಕ್ಕಿನ ಕನಸಲ್ಲಿ ಸದಾ ಇಲಿ ಎಂಬಂತೆ ಡಿ.ಕೆ.ಶಿವಕುಮಾರ್(DK Shivakumar) ಯಾವಾಗಲೂ ಹಿಂದುತ್ವದ(Hindutva) ವಿರುದ್ಧವೇ ಚಿಂತಿಸುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟಾಂಗ್ ನೀಡಿದ್ದಾರೆ.
ಇಂದು ಬೆಂಗಳೂರಿನ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದು ದೇಗುಲಗಳನ್ನು(Temples) ಸ್ವತಂತ್ರಗೊಳಿಸಿ ಬಿಜೆಪಿ ಕಾರ್ಯಕರ್ತರಿಗೆ ಹಸ್ತಾಂತರಿಸಲು ಸರಕಾರ ಹೊರಟಿದೆ ಎಂದು ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು.
CM Hindutva: ಬಿಜೆಪಿ ಕಾರ್ಯಕಾರಣಿಯಲ್ಲಿ ಸಿಎಂ ಹಿಂದುತ್ವದ ಅಸ್ತ್ರ, ದೇಗುಲಗಳಿಗೆ ಮುಕ್ತಿ
ಶಿವಕುಮಾರ್ ಹಾಗೂ ಕಾಂಗ್ರೆಸ್ ಸದಾ ಹಿಂದುತ್ವದ ವಿರುದ್ಧವೇ ಚಿಂತನೆ ನಡೆಸುತ್ತಾರೆ. ಬೆಕ್ಕಿನ ಕನಸಲ್ಲಿ ಸದಾ ಇಲಿ ಎಂಬ ಮಾತಿನಂತೆ, ಇವರು ಕನಸು ಮನಸಿನಲ್ಲೂ ಹಿಂದು ಧಾರ್ಮಿಕ ಭಾವನೆಯ ವಿರುದ್ಧ ಚಿಂತನೆ ನಡೆಸುತ್ತಾರೆ. ದೇಗುಲಗಳನ್ನು ಸರಕಾರದ ಹಿಡಿತದಿಂದ ಸ್ವತಂತ್ರಗೊಳಿಸುವುದು ಎಂದರೆ ಅದನ್ನು ಖಾಸಗಿ ಪರಭಾರೆ ಮಾಡುವುದಲ್ಲ. ಎಲ್ಲದಕ್ಕೂ ಒಂದು ವ್ಯವಸ್ಥೆ ಇರುತ್ತದೆ. ಇಂಥ ಹೇಳಿಕೆ ನೀಡುವ ಮೂಲಕ ಶಿವಕುಮಾರ್ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಇದೇ ವೇಖೆ ಕೋವಿಡ್ ಹಾಗೂ ಒಮಿಕ್ರಾನ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದಲ್ಲಿ ಹಾಗೂ ದೇಶದಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ಪ್ರಕರಣಗಳು ಹೆಚ್ಚಿರುವ ಎಂಟು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂದು ಕೇಂದ್ರ ಸರಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುತ್ತೇವೆ ಎಂದರು.
ಹೊಸ ವರ್ಷದಲ್ಲಿ ಹೊಸ ಚೈತನ್ಯದೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಅದೇ ರೀತಿ ಜಿಲ್ಲಾಧಿಕಾರಿಗಳು ದಿಕ್ಸೂಚಿ ಕಾರ್ಯಕ್ರಮದೊಂದಿಗೆ ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಿ ಗುರಿ ನಿರ್ಧರಿತ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.
ದೇವಸ್ಥಾನ ಕಾನೂನು ಕಟ್ಟಳೆಗಳಿಂದ ಸ್ವತಂತ್ರ
ರಾಜ್ಯದ ಹಿಂದೂ ದೇವಾಲಯಗಳನ್ನು ಬರುವ ಬಜೆಟ್ ಅವೇಶನದೊಳಗೆ ಕಾನೂನು ಕಟ್ಟಳೆಗಳಿಂದ ಸ್ವತಂತ್ರಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಾರೋಪದಲ್ಲಿ ಘೋಷಿಸಿದ್ದರು. ರಾಜ್ಯದ ಅನ್ಯ ಧರ್ಮಗಳ ಪ್ರಾರ್ಥನಾ ಮಂದಿರಗಳಿಗೆ ಬೇರೆ ಬೇರೆ ಕಾನೂನಿನಡಿ ರಕ್ಷಣೆ ನೀಡಲಾಗಿದೆ. ಧಾರ್ಮಿಕ ಆಚರಣೆಗೆ ಅವರಿಗೆ ಸ್ವಾತಂತ್ರ್ಯ ಇದೆ. ಆದರೆ ಹಿಂದೂ ದೇವಾಲಯಗಳ ನಿಯಂತ್ರಣಕ್ಕೆ ಕಾನೂನು ಕಟ್ಟುಪಾಡು ವಿಧಿಸಿದ್ದರಿಂದ ಬಂದ ಆದಾಯವನ್ನೂ ಅಧಿಕಾರಿಗಳ ಅನುಮತಿ ಇಲ್ಲದೆ ಆ ದೇಗುಲದ ಅಭಿವೃದ್ಧಿಗೆ ಬಳಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಪ್ಪಳ ಜಿಲ್ಲೆ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ. ಶ್ರೀರಾಮ ಮಂದಿರ ನಿರ್ಮಿಸಿ ಆ ಸ್ಥಳವನ್ನು ಶ್ರೇಷ್ಠ ಮಟ್ಟಕ್ಕೆ ಏರಿಸಲಾಗುವುದು. ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದ್ದರು.