Karnataka Budget 2023: ಸಿಎಂ ಬೊಮ್ಮಾಯಿ ಸರ್ಕಾರದ ಕಡೇ ಬಜೆಟ್‌ ಇಂದು ಬೆ.10.15ಕ್ಕೆ

Published : Feb 17, 2023, 07:04 AM IST
Karnataka Budget 2023: ಸಿಎಂ ಬೊಮ್ಮಾಯಿ ಸರ್ಕಾರದ ಕಡೇ ಬಜೆಟ್‌ ಇಂದು ಬೆ.10.15ಕ್ಕೆ

ಸಾರಾಂಶ

ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್‌ ಮಂಡನೆ ಆರಂಭವಾಗಲಿದೆ. ಬೊಮ್ಮಾಯಿ ಅವರು ಕಳೆದ 2022-23ನೇ ಸಾಲಿನಲ್ಲಿ 2.65 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಿದ್ದರು. ಈ ಬಾರಿ ಗಾತ್ರ ಸುಮಾರು ಮೂರು ಲಕ್ಷ ಕೋಟಿ ರು.ಗಳಿಗೆ ಹಿಗ್ಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೆಂಗಳೂರು (ಫೆ.17): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ತಮ್ಮ ಎರಡನೆಯ ಹಾಗೂ ಈ ಸರ್ಕಾರದ ಕೊನೆಯ ಬಜೆಟ್‌ ಮಂಡಿಸಲಿದ್ದಾರೆ. ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಸಾಕಷ್ಟು ಭರವಸೆಗಳನ್ನು ನೀಡುವಂಥ ಬೊಂಬಾಟ್‌ ಬಜೆಟ್‌ ಮಂಡಿಸುವುದು ಬಹುತೇಕ ಖಚಿತವಾಗಿದೆ. ರೈತರು, ಬಡವರು, ಮಹಿಳೆಯರು, ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪ್ರಿಯ ಯೋಜನೆಗಳನ್ನು ಘೋಷಿಸುವ ಬಜೆಟ್‌ ಇದಾಗಲಿದೆ ಎನ್ನಲಾಗುತ್ತಿದೆ.

ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್‌ ಮಂಡನೆ ಆರಂಭವಾಗಲಿದೆ. ಬೊಮ್ಮಾಯಿ ಅವರು ಕಳೆದ 2022-23ನೇ ಸಾಲಿನಲ್ಲಿ 2.65 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಿದ್ದರು. ಈ ಬಾರಿ ಗಾತ್ರ ಸುಮಾರು ಮೂರು ಲಕ್ಷ ಕೋಟಿ ರು.ಗಳಿಗೆ ಹಿಗ್ಗುವ ಸಾಧ್ಯತೆಯಿದೆ ಎನ್ನಲಾಗಿದೆ.

Karnataka Budget 2023 LIVE updates

ಕಾಂಗ್ರೆಸ್‌ ಘೋಷಿಸಿರುವ ಉಚಿತ ಘೋಷಣೆಗಳಿಗೆ ತಿರುಗೇಟು ನೀಡುವಂತಹ ಅಂಶಗಳು ಸಹ ಬಜೆಟ್‌ನಲ್ಲಿ ಇರುವ ನಿರೀಕ್ಷೆ ಇದೆ. ಮಹಿಳೆಯರಿಗೆ, ನೀರಾವರಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆಯು ಹೆಚ್ಚಿದೆ. ಈ ಬಾರಿ ಜಿಎಸ್‌ಟಿ ಸಂಗ್ರಹವು ಅತ್ಯುತ್ತಮವಾಗಿದೆ. ನಿಗದಿತ ಗುರಿಗಿಂತ ಹೆಚ್ಚು ಆದಾಯ ಕ್ರೋಢೀಕರಣವಾಗುತ್ತಿದೆ. ಜನವರಿ ತಿಂಗಳಲ್ಲಿ 11 ಸಾವಿರ ಕೋಟಿ ರು.ನಷ್ಟು ಜಿಎಸ್‌ಟಿ ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಲಕ್ಷ ಕೋಟಿ ರು. ಬಜೆಟ್‌ ಮಂಡನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರಿಗೆ ಬಜೆಟ್‌ನಲ್ಲಿ ವಿಶೇಷ ಆರ್ಥಿಕ ನೆರವು ನೀಡಬಹುದು. ಸ್ತ್ರೀಶಕ್ತಿ ಸಂಘಗಳಿಗೆ ಐದು ಲಕ್ಷ ರು.ವರೆಗೆ ಸಹಾಯಧನ ನೀಡುವ ಚಿಂತನೆ ಇದೆ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯತೆ ಇದೆ. ಇದರ ಜತೆಗೆ ಎಲ್ಲಾ ಸಮುದಾಯಗಳ ಬೇಡಿಕೆಗೂ ಸ್ಪಂದಿಸುವ ಕೆಲಸವನ್ನು ಬಜೆಟ್‌ನಲ್ಲಿ ಮುಖ್ಯಮಂತ್ರಿ ಕೈಗೊಳ್ಳುವ ನಿರೀಕ್ಷೆ ಇದೆ. ಹಲವು ಸಮುದಾಯಗಳು ಮೀಸಲಾತಿಗೆ ಒತ್ತಾಯಿಸಿ ಮನವಿ ಮಾಡಿವೆ. ಈ ಬಗ್ಗೆ ಬಜೆಟ್‌ನಲ್ಲಿ ತಿಳಿಸಿ ಸಮುದಾಯದ ಮನಗೆಲ್ಲುವ ಪ್ರಯತ್ನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಸಾಲವನ್ನು ಮೂರು ಲಕ್ಷ ರು.ನಿಂದ ಐದು ಲಕ್ಷ ರು.ಗೆ ಹೆಚ್ಚಿಸಬಹುದಾಗಿದೆ. ಕುಟಂಬ ನಿರ್ವಹಣೆ ಮಾಡುವ ಮಹಿಳೆಗೆ 1500 ರು. ಸಹಾಯಧನ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಇದು ಕಾಂಗ್ರೆಸ್‌ಗೆ ತಿರುಗೇಟು ನೀಡುವ ಯೋಜನೆಯಾಗಿರಲಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವ ಬಗ್ಗೆ ಆಶ್ವಾಸನೆ ನೀಡಬಹುದು. ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಗೌರವ ಧನ ಹೆಚ್ಚಿಸುವಂತೆ ಪ್ರತಿಭಟನೆ ನಡೆಸಿದ್ದರಿಂದ ಅವರ ಗೌರವ ಧನ ಹೆಚ್ಚಿಸಿ ಘೋಷಣೆ ಮಾಡಬಹುದು. ಕುಲಕಸುಬು ಆಧಾರಿತ ಸಾಂಪ್ರದಾಯಿಕ ವೃತ್ತಿ ಮಾಡಲು ಇಚ್ಛಿಸುವವರಿಗೆ 50 ಸಾವಿರ ರು. ಪ್ರೋತ್ಸಾಹ ಧನ ನೀಡುವ ಆಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ಏಕ ಉದ್ದೇಶ ಇರುವ ಯೋಜನೆಗಳನ್ನು ವಿಲೀನಗೊಳಿಸಬಹುದು. ಆರ್ಥಿಕ ಇಲಾಖೆಯು ಎಲ್ಲಾ ಇಲಾಖೆಗಳಿಗೂ ಪ್ರಸ್ತಾವನೆ ಕಳುಹಿಸುವ ವೇಳೆ ಏಕ ಉದ್ದೇಶ ಇರುವ ಯೋಜನೆಗಳನ್ನು ಪ್ರತ್ಯೇಕಿಸಿದರೆ ವಿಲೀನಗೊಳಿಸುವಂತೆ ತಿಳಿಸಿತ್ತು. ಅದರಂತೆ ಇಲಾಖೆಯು ಏಕ ಉದ್ದೇಶ ಇರುವ ಯೋಜನೆಗಳನ್ನು ವಿಲೀನಗೊಳಿಸಿ ಪ್ರಸ್ತಾವನೆ ಕಳುಹಿಸಿವೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ ಸಂಬಂಧ ವಿಶೇಷ ಯೋಜನೆಗಳನ್ನು ಪ್ರಕಟಿಸಬಹುದು.

ಕಾಂಗ್ರೆಸ್‌ ಅವಧಿಯಲ್ಲೇ ಹೆಚ್ಚು ಟೆಂಡರ್‌ ಹಗರಣ: ಸಿಎಂ ಬೊಮ್ಮಾಯಿ

ನಿರೀಕ್ಷೆಗಳು
- ರೈತರ ಶೂನ್ಯ ಬಡ್ಡಿದರ ಸಾಲ ಮಿತಿ 3 ಲಕ್ಷ ರು.ನಿಂದ 5 ಲಕ್ಷ ರು.ಗೆ ಹೆಚ್ಚಳ
- ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರಿಗೆ ಗೌರವ ಧನ ನೀಡುವ ಸ್ಕಿಂ
- ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಅನುಷ್ಠಾನದ ಭರವಸೆ
- ಬೆಂಗಳೂರಲ್ಲಿ ಮೆಟ್ರೋ ವಿಸ್ತರಣೆ, ಸಂಚಾರದ ದಟ್ಟಣೆ ನಿಯಂತ್ರಣಕ್ಕೆ ಕ್ರಮ
- ಕುಲಕಸುಬು ಆಧಾರಿತ ವೃತ್ತಿ ಮಾಡುವವರಿಗೆ ಪ್ರೋತ್ಸಾಹ ಧನ ಘೋಷಣೆ
- ವಿವಿಧ ಸಮುದಾಯಗಳಿಗೆ ಪ್ರತ್ಯೇಕ ನಿಗಮ, ಅಡಕೆ ಬೆಳೆಗಾರರಿಗೆ ನೆರವು
- ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲು ಕ್ರಮಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್