
ಚಿಕ್ಕಬಳ್ಳಾಪುರ (ಮಾ.15): ಚಿಕ್ಕಬಳ್ಳಾಪುರದ ಶಾಸಕರು ಎಷ್ಟು ಜನಾನುರಾಗಿಯಾಗಿದ್ದಾರೆ ಎನ್ನುವುದು ಲೋಕಸಭಾ ಚುನಾವಣೆಯಲ್ಲಿ ಪಡೆಯುವ ಮತಗಳಿಂದ ತಿಳಿದು ಬರಲಿದೆ. ಬಿಜೆಪಿ ಕಾರ್ಯಕರ್ತರು ಇದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕು. ಈ ಭಾಗದಲ್ಲಿ ಬಿಜೆಪಿಯ ಭದ್ರಕೋಟೆ ನಿರ್ಮಿಸಬೇಕು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಂಚೇನಹಳ್ಳಿ ಹಾಗೂ ತಿಪ್ಪೇನಹಳ್ಳಿಯಲ್ಲಿ ನಡೆದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಉಚಿತ ಬಸ್ ನೀಡಿದ್ದರೂ ಹೊಸ ಬಸ್ಗಳನ್ನು ನೀಡಿಲ್ಲ. ಅಧಿಕಾರಿಗಳಿಗೆ ಸಂಬಳ ಬಂದಿಲ್ಲ. ಈಗಾಗಲೇ 1 ಲಕ್ಷ ಕೋಟಿ ರು. ಸಾಲ ಮಾಡಲಾಗಿದೆ. ಬಜೆಟ್ನಲ್ಲಿ ಚಿಕ್ಕಬಳ್ಳಾಪುರಕ್ಕೆ ಏನೂ ಸಿಕ್ಕಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಪ್ರತ್ಯೇಕ ಹಾಲು ಒಕ್ಕೂಟ ರಚಿಸಿದ್ದರೆ, ಅದನ್ನು ಸಹ ಕಿತ್ತುಕೊಂಡಿದ್ದಾರೆ. ಬೇರೆ ಜಿಲ್ಲೆಯಾಗಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು ಎಂದರು.
ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಚಕ್ರವರ್ತಿಯಿಂದ ಅಚ್ಚರಿಯ ಹೇಳಿಕೆ: ಏನಂದ್ರು ಸೂಲಿಬೆಲೆ
ಬದುಕು ಕಟ್ಟಿಕೊಡುವ ಯೋಜನೆ ಬೇಕು: ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶ ಬಲಿಷ್ಠವಾಗಿದೆ. ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸಲು ಶ್ರಮಿಸಬೇಕಿದೆ. ಸದ್ಯಕ್ಕೆ ಯಾವ ಯೋಜನೆ ಸಿಗುತ್ತದೆ ಎನ್ನುವುದಕ್ಕಿಂತ ಬದುಕನ್ನು ಕಟ್ಟಿಕೊಡುವ ಯೋಜನೆ ಸಿಗುತ್ತಿದೆಯೇ ಎನ್ನುವುದು ಮುಖ್ಯ. ಕೋವಿಡ್ ಸಮಯದಲ್ಲಿ ಜನರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡಿದೆ. ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಆದರೆ ಅದನ್ನು ಹೆಚ್ಚಾಗಿ ಹೇಳಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ತಾವೇ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ದೌರ್ಭಾಗ್ಯಕ್ಕೆ ಒಳಗಾಗಿದ್ದಾರೆ ಎಂದರು.
ಅಲ್ಪಸಂಖ್ಯಾತರ ವಿರೋಧಿಯಲ್ಲ: ಬಿಜೆಪಿ ಎಂದಿಗೂ ಅಲ್ಪಸಂಖ್ಯಾತರ ವಿರೋಧಿಯಾಗಿಲ್ಲ. ಎಲ್ಲರಿಗೂ ಸಮಾನತೆ ತಂದುಕೊಡಲು ಪಕ್ಷ ಶ್ರಮಿಸುತ್ತಿದೆ. ಮುದ್ರಾ ಯೋಜನೆಯಡಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಜನರಿಗೆ ಹೆಚ್ಚು ಪ್ರಯೋಜನವಾಗಿದೆ. ತ್ರಿವಳಿ ತಲಾಖ್ ನಿಷೇಧ ಮೂಲಕ ಪ್ರಧಾನಿ ಮೋದಿ ಮುಸಲ್ಮಾನ ಹೆಣ್ಣುಮಕ್ಕಳಿಗೆ ನ್ಯಾಯ ನೀಡಿದ್ದಾರೆ. ಹೀಗೆ ನ್ಯಾಯ ತಂದುಕೊಟ್ಟಿದ್ದಕ್ಕೆ ಪ್ರಧಾನಿ ಮೋದಿ ಅಲ್ಪಸಂಖ್ಯಾತರ ವಿರೋಧಿ ಎನಿಸಿಕೊಂಡಿದ್ದಾರೆ. ಈ ಸತ್ಯವನ್ನು ಜನರಿಗೆ ತಿಳಿಸಬೇಕಿದೆ ಎಂದರು.
ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು, ಸಂವಿಧಾನ, ಧ್ವಜವಿತ್ತು. ಡಾ.ಅಂಬೇಡ್ಕರ್ ಅವರೇ ಇದನ್ನು ವಿರೋಧಿಸಿದ್ದರು. ಆ ವಿಶೇಷ ಸ್ಥಾನಮಾನವನ್ನು ಕೇಂದ್ರ ಬಿಜೆಪಿ ಸರ್ಕಾರ ರದ್ದು ಮಾಡಿದೆ. ಆದರೆ ಈಗ ಕಾಂಗ್ರೆಸ್ನಲ್ಲಿ ಅಂಬೇಡ್ಕರ್ ಅವರನ್ನು ಹಿಡಿದುಕೊಳ್ಳಲಾಗಿದೆ. ಆದರೆ ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ಸಿಗರು ಚುನಾವಣೆಯಲ್ಲಿ ಸೋಲಿಸಿದರು. 70 ರ ದಶಕದವರೆಗೂ ಅಂಬೇಡ್ಕರ್ ಹೆಸರನ್ನು ಕಾಂಗ್ರೆಸ್ ನಾಯಕರು ಹೇಳುತ್ತಿರಲಿಲ್ಲ. ಅವರ ಪಾರ್ಥಿವ ಶರೀರ ಹೂಳಲು ಜಾಗವನ್ನೂ ನೀಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಜೀವನದ ಐದು ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು. ಕಾಂಗ್ರೆಸ್ನವರು ಸುಳ್ಳು ಹೇಳಿ ಮತ ಹಾಕಿಸಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಸತ್ಯ ಹೇಳಿ ಮತ ಪಡೆಯಲು ಆಗಿಲ್ಲ. ಈ ಬಾರಿ ಜನರು ಹಾಕುವ ಮತ ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪುತ್ತದೆ ಎನ್ನುವುದನ್ನು ಜನರಿಗೆ ತಿಳಿಸಬೇಕು ಎಂದರು.
ಬಿಜೆಪಿ, ಜೆಡಿಎಸ್ನ್ನು ಮರೆತು ಬಿಡಿ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಜಿಲ್ಲೆಗೆ ಮೆಡಿಕಲ್ ಕಾಲೇಜು, ನೀರು: ಎಚ್.ಎನ್.ವ್ಯಾಲಿ ಯೋಜನೆಯಡಿ 65 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಚಿಕ್ಕಬಳ್ಳಾಪುರ ಬರದ ಜಿಲ್ಲೆ ಎನ್ನುತ್ತಿದ್ದರೂ ಈಗ ಅಂತಹ ಸಮಸ್ಯೆಯಿಲ್ಲ. ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿ ನಿರ್ಮಿಸಲಾಗಿದೆ. ಮೂರು ಬಾರಿ ಸಚಿವರಾದವರು ಕೂಡ ಇಲ್ಲಿಗೆ ಮೆಡಿಕಲ್ ಕಾಲೇಜು ತರಲಿಲ್ಲ. ಈಗಿನ ವೈದ್ಯಕೀಯ ಶಿಕ್ಷಣ ಸಚಿವರು ಇದನ್ನು ಬಂದು ನೋಡಲಿ ಎಂದರು. ಈ ವೇಳೆ ಖಾದಿಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್,ಮಖಂಡರಾದ ರಾಜಶೇಖರ್, ಕೃಷ್ಣಾರೆಡ್ಡಿ,ಮರಳ ಕುಂಟೆ ಕೃಷ್ಣಮೂರ್ತಿ,ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.