ರಾಮಮಂದಿರಕ್ಕೆ ಹೋಗಲು ಅನುಮತಿ ನೀಡದ್ದಕ್ಕೆ ಆಕ್ರೋಶ, ಕಾಂಗ್ರೆಸ್‌ಗೆ ವಕ್ತಾರೆ ರಾಧಿಕಾ ಖೇರಾ ರಾಜೀನಾಮೆ

By Kannadaprabha NewsFirst Published May 6, 2024, 12:20 PM IST
Highlights

ಕಾಂಗ್ರೆಸ್ ನಾಯಕಿ ರಾಧಿಕಾ ರಾಜೀನಾಮೆ ಪಕ್ಷದಲ್ಲಿ ಪುರುಷ ಮನಸ್ಥಿತಿ ಇದೆ, ಇದನ್ನು ಬಯಲಿಗೆ ಎಳೆಯುವೆ. ಅಯೋಧ್ಯೆಗೆ ಹೋಗಲು ಪಕ್ಷ ಅನುಮತಿ ನೀಡದ್ದಕ್ಕೆ ಆಕ್ರೋಶ

ರಾಯ್‌ಪುರ (ಮೇ.6): ಲೋಕಸಭೆ ಚುನಾವಣೆ ನಡುವೆಯೇ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಛತ್ತೀಸ್‌ಗಢದ ಕಾಂಗ್ರೆಸ್ ನಾಯಕಿ ಹಾಗೂ ಪಕ್ಷದ ವಕ್ತಾರೆ ರಾಧಿಕಾ ಖೇರಾ, ‘ಪಕ್ಷದಲ್ಲಿ ಪುರುಷ ಮನಸ್ಥಿತಿ ಇದೆ. ನನಗೆ ಅವಮಾನವಾಗಿದೆ’ ಎಂದು ಆರೋಪಿಸಿ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಛತ್ತೀಸಗಢ ಕಾಂಗ್ರೆಸ್‌ ಘಟಕದಲ್ಲಿ ರಾಧಿಕಾ ಖೇರಾಗೂ ಪಕ್ಷದ ನಾಯಕರೊಬ್ಬರಿಗೂ ಜಟಾಪಟಿ ನಡೆದಿತ್ತು ಎನ್ನಲಾಗಿದೆ ಹಾಗೂ ಇದರಿಂದ ನೊಂದು ಖೇರಾ ಅತ್ತಿದ್ದರು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ.

ಚುನಾವಣೆ ಮುಗಿಯುವವರೆಗೂ ಅಮೇಠಿ, ರಾಯ್‌ಬರೇಲಿ ಪ್ರಿಯಾಂಕಾ ಠಿಕಾಣಿ, ಸಹೋದರನನ್ನು ಗೆಲ್ಲಿಸಲು ಪಣ

ಇತ್ತೀಚೆಗೆ ಪಕ್ಷಕ್ಕೆ ವಕ್ತಾರ ಗೌರವ ವಲ್ಲಭ್‌, ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಖೇರಾ ಅವರ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ.

ಕಾಂಗ್ರೆಸ್‌ಗೆ ರಾಧಿಕಾ ಚಾಟಿ: ಭಾನುವಾರ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಇಂದು ತೀವ್ರ ನೋವಿನಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಛತ್ತೀಸಗಢ ಕಾಂಗ್ರೆಸ್‌ ಘಟಕದಲ್ಲಿ ಅಗೌರವ ತೋರಲಾಗಿದೆ ಮತ್ತು ಪಕ್ಷದೊಳಗಿನ ‘ಪುರುಷವಾದಿ ಮನಸ್ಥಿತಿ’ ಇದೆ. ಇಂಥ ಮನಸ್ಥಿತಿಯಲ್ಲಿ ಇರುವ ಜನರನ್ನು ಬಯಲಿಗೆ ಎಳೆಯುವೆ ಎಂದು ಶಪಥ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಮುಂಬೈ ದಾಳಿಯಲ್ಲಿ ಅಧಿಕಾರಿ ಕರ್ಕರೆ ಕೊಂದಿದ್ದು ಉಗ್ರನಲ್ಲ ಆರ್‌ಎಸ್‌ಎಸ್‌ ಪೊಲೀಸ್‌, ವಿವಾದವೆಬ್ಬಿಸಿದ ಕಾಂಗ್ರೆಸಿಗ

ಅಲ್ಲದೆ, ‘ನಾನು ಅಯೋಧ್ಯೆಗೆ ರಾಮ ಪ್ರತಿಷ್ಠಾಪನೆಗೆ ಹೋಗಬೇಕು ಎಂದುಕೊಂಡಿದ್ದೆ. ಅದಕ್ಕೆ ಪಕ್ಷ ಬಿಡಲಿಲ್ಲ. ಅಂದು ಧರ್ಮ ಸ್ಥಾಪನೆಗೆ ಕಂಸ, ರಾವಣ ಅಡ್ಡಿಪಡಿಸುತ್ತಿದ್ದರು. ಇಂದು ರಾಮನ ಹೆಸರು ಹೇಳಿದವರಿಗೆ ಅಂಥ ಅಡ್ಡಿಖಳು ಉಂಟಾಗುತ್ತಿವೆ’ ಎಂದು ಆರೋಪಿಸಿದ್ದಾರೆ.

‘ನಾನು ಒಬ್ಬ ಹುಡುಗಿ ಮತ್ತು ನಾನು ಹೋರಾಡಬಲ್ಲೆ. ನಾನು ಈಗ ಅದೇ ರೀತಿ ಮಾಡುತ್ತಿದ್ದೇನೆ. ನನಗೆ ನನ್ನ ದೇಶದ ಜನರಿಗೆ ನ್ಯಾಯಕ್ಕಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ’ ಎಂದು ರಾಧಿಕಾ ಹೇಳಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್‌ಗೆ ಮತ್ತೆ ಶಾಕ್‌: ಶಾಸಕಿ ಸಪ್ರೆ ಬಿಜೆಪಿಗೆ
ಭೋಪಾಲ್‌: ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕಿ ನಿರ್ಮಲಾ ಸಪ್ರೇ ಅವರು ಭಾನುವಾರ ಮುಖ್ಯಮಂತ್ರಿ ಮೋಹನ್‌ ಯಾದವ್‌ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ನಿರ್ಮಲಾ, ಲೋಕಸಭೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿ ಬಳಿಕ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಮೂರನೇ ಶಾಸಕರಾಗಿದ್ದಾರೆ. ಕಾಂಗ್ರೆಸ್‌ ತತ್ವಹೀನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಬಿಜೆಪಿ ಸೇರಿದ್ದಾಗಿ ಅವರು ಹೇಳಿದ್ದಾರೆ.

click me!