
ದೇವರಹಿಪ್ಪರಗಿ(ಫೆ.29): ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಜನರ ಕಲ್ಯಾಣಕ್ಕಾಗಿ ಅನುಷ್ಠಾನಗೊಂಡಿವೆ. ಸರ್ಕಾರಕ್ಕೆ ಎಷ್ಟೆ ಆರ್ಥಿಕ ಹೊರೆಯಾದರು ಬಡವರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರದ ಬಿಜೆಪಿ ಸರ್ಕಾರ ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿ ಇಂದು ಕಾಪಿ ಮಾಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಮನೆಗೂ ಸರ್ಕಾರದ ಸಹಾಯ ದೊರಕಿದಂತಾಗಿದೆ. ಗೃಹಲಕ್ಷ್ಮೀ ರಾಜ್ಯದ 1.5 ಕೋಟಿ ಜನರಲ್ಲಿ ಜಿಲ್ಲೆಯ 4.70 ಲಕ್ಷ ಜನ ಮಹಿಳೆಯರು ಇದರ ಲಾಭ ಪಡೆದುಕೊಂಡಿದ್ದಾರೆ. ಗೃಹ ಜ್ಯೋತಿ ರಾಜ್ಯದ ಪ್ರತಿ ಕುಟುಂಬಕ್ಕೂ ಉಚಿತ ವಿದ್ಯುತ್ ನೀಡುತ್ತಿದ್ದು, ಜಿಲ್ಲೆಯಲ್ಲಿ 4.64 ಲಕ್ಷ ಕುಟುಂಬಕ್ಕೆ ಉಚಿತ ವಿದ್ಯುತ್ ಕಲ್ಪಿಸಲಾಗಿದೆ. ಸುಮಾರು 2-3 ಕೋಟಿ ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ, 5 ಕೆಜಿ ಅಕ್ಕಿಯ ಬದಲಾಗಿ ₹170 ಜಿಲ್ಲೆಯ 6.70 ಲಕ್ಷ ಕುಟುಂಬಗಳಿಗೆ ನೀಡುವ ಮೂಲಕ ಜನಪರವಾಗಿರುವ ಸರ್ಕಾರವಾಗಿದೆ. ಪ್ರತಿಯೊಬ್ಬರು ಯೋಜನೆಗಳ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ಅಲ್ಲದೇ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಬಿಜೆಪಿ ಸೋಲಿಸಬೇಕು ಎಂದು ಹೇಳಿದರು.
Loksabha Elections 2024: ಶೋಭಕ್ಕ ಟಿಕೆಟ್ ಪತನ ಆಗುತ್ತೆ: ಸಚಿವ ಎಂ.ಬಿ.ಪಾಟೀಲ್ ಭವಿಷ್ಯ
ಮಾಜಿ ಶಾಸಕ ಶರಣಪ್ಪ ಸುಣಗಾರ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸರಿತಾ ನಾಯಕ, ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ, ಮಾಜಿ ತಾಪಂ ಸದಸ್ಯ ಮಡಿವಾಳಪ್ಪ ಬ್ಯಾಲಾಳ ಹಾಗೂ ಯುವ ಮುಖಂಡ ಜಹಾಂಗೀರ್ ಸಿರಸಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಾಗೃತಿ ಕುರಿತು ಮಾತನಾಡಿದರು.
ಕಾಂಗ್ರೆಸ್ ರಾಜ್ಯ ಯುವ ಜಂಟಿ ಕಾರ್ಯದರ್ಶಿ ಸಂತೋಷ ದೊಡಮನಿ, ಮುಖಂಡರಾದ ಸಿ.ಎಸ್.ನ್ಯಾಮಣ್ಣನವರ, ಹುಯೋಗಿ ತಳ್ಳೂಳ್ಳಿ, ಸುನಂದಾ ಸೊನಹಳ್ಳಿ, ಪಪಂ ನಾಮ ನಿರ್ದೇಶಿತ ಸದಸ್ಯರಾದ ರಾಜು ಮೇಟಗಾರ, ಹುಸೇನ ಕೊಕಟನೂರ ಹಾಗೂ ಸುನೀಲ ಕನಮಡಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
ವಿಜಯಪುರ ಬಿಜೆಪಿ ಅಭ್ಯರ್ಥಿ ನಾನೇ, ನನ್ನ ಆಸ್ತಿ ಇನ್ನೂ ಜಾಸ್ತಿ ಇದೆ: ಸಂಸದ ರಮೇಶ ಜಿಗಜಿಣಗಿ
ಯುವ ಮುಖಂಡ ಪರಶುರಾಮ ದಿಂಡವಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಪ್ರಕಾಶ ಗುಡಿಮನಿ ಸ್ವಾಗತಿಸಿ, ನಿರೂಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪದಾಧಿಕಾರಿಗಳಿಗೆ ಆಹ್ವಾನವಿಲ್ಲ
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಾಗೃತಿ ಕಾರ್ಯಕ್ರಮಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಆಹ್ವಾನವೇ ಇಲ್ಲ. ಹೀಗಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗೈರಾಗುವ ಮೂಲಕ ಕಾಂಗ್ರೆಸ್ ನಲ್ಲಿ ಎರಡು ಬಣಗಳಾದಂತಾಗಿದ್ದು, ಇದಕ್ಕೆ ಜಿಲ್ಲಾಧ್ಯಕ್ಷರು ಮದ್ದು ನೀಡಬೇಕು. ಜಿಲ್ಲಾಧ್ಯಕ್ಷರು ಕಾರ್ಯಕ್ರಮಕ್ಕೆ ಬಂದರು ಬಣ ರಾಜಕೀಯಕ್ಕೆ ದೇವರಹಿಪ್ಪರಗಿ ಕಾಂಗ್ರೆಸ್ ಪಡೆ ಸಾಕ್ಷಿಯಾಯಿತು. ಮತಕ್ಷೇತ್ರದ ಮುಂಚೂಣಿ ನಾಯಕರು, ದೇವರ ಹಿಪ್ಪರಗಿ ಹಾಗೂ ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಪಂ ಸದಸ್ಯರು ಸೇರಿದಂತೆ ಹಲವಾರು ಮುಖಂಡರಿಗೆ ಕಾರ್ಯಕ್ರಮದ ಕುರಿತು ಅಹ್ವಾನ ನೀಡಿರಲಿಲ್ಲ. ಹೀಗಾಗಿ ಹೋಗಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸೀರ ಅಹ್ಮದ್ ಬೇಪಾರಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.