Mandya: ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ ನಿರ್ಧಾರವಲ್ಲ: ಚಲುವರಾಯಸ್ವಾಮಿ

By Govindaraj SFirst Published Nov 23, 2022, 9:15 AM IST
Highlights

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಬೇಕು ಎನ್ನುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಧರಿಸುತ್ತಾರೆಯೇ ಹೊರತು ಹೈಕಮಾಂಡ್‌ ಅಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಹೇಳಿದರು. 

ಮದ್ದೂರು (ನ.23): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಬೇಕು ಎನ್ನುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಧರಿಸುತ್ತಾರೆಯೇ ಹೊರತು ಹೈಕಮಾಂಡ್‌ ಅಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಮಂಗಳವಾರ ಹೇಳಿದರು. ತಾಲೂಕಿನ ಬೆಸಗರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ದಿ.ಎಸ್‌.ಎಂ. ಶಂಕರ್‌ ಚಾರಿಟಬಲ್‌ ಟ್ರಸ್ಟ್‌ನಿಂದ ಹೈನುಗಾರರಿಗೆ ಉಚಿತವಾಗಿ ಹಾಲಿನ ಕ್ಯಾನ್‌ಗಳನ್ನು ವಿತರಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಎಐಸಿಸಿ ಮತ್ತು ಕೆಪಿಸಿಸಿ ನಡುವೆ ಸಮಿತಿಯಿದೆ. ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳು ಯಾರಾಗಾಬೇಕು ಎಂಬುವುದನ್ನು ಪಟ್ಟಿತಯಾರಿಸಿ ಕೆಪಿಸಿಸಿ ವತಿಯಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಶಿಫಾರಸ್ಸು ಮಾಡಿ ಎಐಸಿಸಿಗೆ ಕಳಹಿಸುತ್ತಾರೆ. ಆ ನಂತರ ಅಭ್ಯರ್ಥಿಗಳ ಪಟ್ಟಿಅಂತಿಮವಾಗುತ್ತದೆ ಎಂದರು. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಂದ ಅಭ್ಯರ್ಥಿಗಳ ತೀರ್ಮಾನ ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್‌ ಪಕ್ಷದಲ್ಲಿ ನಾನೇ ಎಲ್ಲ ಎಂದು ಹೇಳಿಕೊಳ್ಳುವ ಬದಲು ತಮ್ಮ ಪಕ್ಷದ ಹೈಕಮಾಂಡ್‌ ಕಡೆ ಬೆರಳು ತೋರಿಸುತ್ತಿದ್ದಾರೆ ಅಷ್ಟೇ. ಇದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಬೊಮ್ಮಾಯಿ ವಿರುದ್ಧವೇ ದೂರು ಕೊಟ್ಟಿದ್ದೇವೆ, ಯಾರ ವಿರುದ್ಧ ಸಿಎಂ ತನಿಖೆ ಮಾಡಿಸ್ತಾರೆ?: ಸಿದ್ದು

ಎಚ್‌ಡಿಕೆ ಹೇಳಿಕೆಗಳು ಗೊಂದಲಮಯ: ರಾಜ್ಯದಲ್ಲಿ ಚುನಾವಣಾ ನಂತರ ಜೆಡಿಎಸ್‌ಗೆ ಬಹುಮತ ಸಿಕ್ಕಿದರೆ ದಲಿತರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಈ ಹಿಂದೆ ನೀಡಿದ್ದ ಹೇಳಿಕೆಗಳು ಯಾವುವೂ ಅನುಷ್ಠಾನಕ್ಕೆ ಬಂದಿಲ್ಲ. ಚುನಾವಣಾ ನಂತರ ಜೆಡಿಎಸ್‌ಗೆ ಬಹುಮತ ಬಂದರೆ ತಾನೇ ದಲಿತರನ್ನು ಉಪ ಮುಖ್ಯಮಂತ್ರಿ ಮಾಡುವುದು. ಕುಮಾರಸ್ವಾಮಿ ಅವರು ಈ ರೀತಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಒಂದು ವೇಳೆ ಬಿಜೆಪಿ ಅಥವಾ ಮತ್ಯಾವುದೇ ಪಕ್ಷದ ಜತೆ ಜೆಡಿಎಸ್‌ ಹೊಂದಾಣಿಕೆಯಾದರೆ ಕುಮಾರಸ್ವಾಮಿ ಯಾವ ರೀತಿ ದಲಿತರನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ ಚಲುವರಾಯಸ್ವಾಮಿ, ಕಳೆದ ವಿಧಾನಸಭಾ ಚುನಾವಣಾ ನಂತರ ನಮ್ಮ ಕಾಂಗ್ರೆಸ್‌ ಪಕ್ಷದವರು ಕುಮಾರಸ್ವಾಮಿ ಬಳಿಗೆ ಹೋಗಿ ನೀವೆ ಮುಖ್ಯಮಂತ್ರಿಯಾಗಿ ಎಂದು ಹೇಳಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರು. ಆದರೆ, ಅವಕಾಶ ಸಿಕ್ಕಿದರೆ ನಾನು ದಲಿತರನ್ನು ಉಪ ಮುಖ್ಯಮಂತ್ರಿ ಮಾಡುತ್ತೇನೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಜೆಡಿಎಸ್‌ನದು ಹಗಲುಗನಸು: ಮುಂದಿನ ವಿಧಾನಸಭಾ ಚುನಾವಣಾ ನಂತರ ಜೆಡಿಎಸ್‌ ಬಿಟ್ಟು ಯಾವುದೇ ರಾಷ್ಟ್ರೀಯ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಈ ಪಕ್ಷಗಳಿಗೆ ಜೆಡಿಎಸ್‌ ಆಶ್ರಯ ಅಗತ್ಯವಾಗುತ್ತದೆ ಎಂದು ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ರಾಜ್ಯದಲ್ಲಿ ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಾನು ಮಂತ್ರಿಯಾಗುತ್ತೇನೆ ಎಂದು ಡಿ.ಸಿ.ತಮ್ಮಣ್ಣ ಅವರು ಹಗಲು ಕನಸು ಕಾಣುತ್ತಿದ್ದಾರೆ ಇವರ ಕನಸು ನನಸಾಗುವುದಿಲ್ಲ. ನೂರಕ್ಕೆ ನೂರಷ್ಟುರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನೂಡಿದರು.

ಕಾಂಗ್ರೆಸ್‌ ಶಕ್ತಿಶಾಲಿ: ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ಕೆಪಿಸಿಸಿ ಸದಸ್ಯ ಗುರುಚರಣ್‌, ಮಾಜಿ ವಿಧಾನ ಪರಿಷತ್‌ ಸದಸ್ಯ ಬಿ.ರಾಮಕೃಷ್ಣ ಹಾಗೂ ಕಾಂಗ್ರೆಸ್‌ ಮುಖಂಡ ಬಿ.ವಿ.ಶಂಕರೇಗೌಡ ಸೇರಿದಂತೆ ಮಂಡ್ಯ ಕ್ಷೇತ್ರದಿಂದಲೂ 16 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ಶಕ್ತಿಯಾಗಿ ಬೆಳೆಯುತ್ತಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಮಟ್ಟದಲ್ಲಿ ಚರ್ಚೆ ನಡೆಸಿ ಅಭ್ಯರ್ಥಿ ಆಯ್ಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಂಡ್ಯದಲ್ಲಿ ಲವ್ ಜಿಹಾದ್, ಮತಾಂತರವಾದ್ರೆ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಅಂಗವಿಕಲೆಯ ಅತ್ಯಾಚಾರ!

ವಿಧಾನ ಪರಿಷತ್‌ ಸದಸ್ಯ ದಿನೇಶ್‌ಗೂಳಿಗೌಡ, ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಅರ್ಭರ್ಥಿ ಎಸ್‌.ಗುರುಚರಣ್‌, ಮನ್‌ಮುಲ್‌ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ನಾಗೇಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ಸಂದರ್ಶ, ಮುಖಂಡರಾದ ವಿನಯ್‌ ರಾಮಕೃಷ್ಣ, ಪಿ.ರಾಘವ, ಎಂ.ಪಿ.ಅಮರ್‌ಬಾಬು, ಸಿದ್ದು, ಮಧು, ಗೋಪಿ ಇದ್ದರು.

click me!