ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ವರಿಷ್ಠರಿಗೆ ಗೊತ್ತು: ಯೋಗೇಶ್ವರ್‌

By Kannadaprabha NewsFirst Published Nov 28, 2020, 10:14 AM IST
Highlights

ದಿಲ್ಲಿಯಲ್ಲಿ ಸಂತೋಷ್‌ ಜತೆ ಯೋಗೇಶ್ವರ್‌ ಭೇಟಿ| ನನ್ನನ್ನು ವಿರೋಧಿಸುವ ರೇಣುಕಾ ಕೂಡ ನನ್ನ ಗೆಳೆಯ| ನನಗೆ ಸಚಿವ ಸ್ಥಾನ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿರುವವರನ್ನು ಗಮನಿಸಿದ್ದೇನೆ, ಅದು ಅವರ ವೈಯಕ್ತಿಕ ಅಭಿಪ್ರಾಯ:ಯೋಗೇಶ್ವರ್‌|

ಬೆಂಗಳೂರು(ನ.28): ಸರ್ಕಾರ ರಚನೆ ವೇಳೆ ನನ್ನ ಪಾತ್ರ ಏನೆಂಬುದು ಹೈಕಮಾಂಡ್‌ ನಾಯಕರಿಗೆ ತಿಳಿದಿರುವುದರಿಂದ ಸಂಪುಟ ವಿಸ್ತರಣೆ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ. 

"

ದೆಹಲಿಯಲ್ಲಿ ಶುಕ್ರವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ನನಗೆ ಸಚಿವ ಸ್ಥಾನ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿರುವವರನ್ನು ಗಮನಿಸಿದ್ದೇನೆ. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ, ಸಂತೋಷ್‌ ಅವರನ್ನು ಭೇಟಿ ಮಾಡಿದ ವೇಳೆ ರಾಜಕೀಯವಾಗಿ ಯಾವುದೇ ಚರ್ಚೆ ಮಾಡಿಲ್ಲ. ಕೆಲವರು ನನಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಬೇಡ ಎಂದು ಹೇಳುತ್ತಿದ್ದಾರೆ. ವಿರೋಧ ಮಾಡುವವರ ಬಗ್ಗೆ ಪ್ರಮುಖವಾಗಿರುವ ರೇಣುಕಾಚಾರ್ಯ ಕೂಡ ನನ್ನ ಸ್ನೇಹಿತರು. ವಿರೋಧ ವ್ಯಕ್ತಪಡಿಸಲು ನನ್ನ ಮತ್ತು ಅವರ ನಡುವೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಹೇಳಿದರು.

ಯೋಗೇಶ್ವರ್‌ ಸಚಿವರಾಗುವುದು ನಮ್ಮೆಲ್ಲರ ಆಸೆ: ಡಿಸಿಎಂ ಅ​ಶ್ವತ್ಥ ನಾರಾ​ಯಣ

‘ಸರ್ಕಾರ ಬರಲು ನಾನು ಕಾರಣನಾಗಿದ್ದೇನೆ, ಪ್ರಯತ್ನ ಮಾಡಿದ್ದೇನೆ, ಹೋರಾಟ ಮಾಡಿದ್ದೇನೆ ಎಂದು ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ, ಪಕ್ಷದ ಕಾರ್ಯಕರ್ತನಾಗಿ ನನಗೆ ನೀಡಿರುವ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದಿದ್ದೇನೆ. ಸರ್ಕಾರ ರಚನೆ ವೇಳೆ ನನ್ನ ಪಾತ್ರ ಏನೆಂಬುದು ಹೈಕಮಾಂಡ್‌ ನಾಯಕರಿಗೆ ಗೊತ್ತಿದೆ’ ಎಂದರು.

‘ಇನ್ನು ರಮೇಶ್‌ ಜಾರಕಿಹೊಳಿ ಮತ್ತು ನಾನು 20 ವರ್ಷದ ಸ್ನೇಹಿತರಾಗಿದ್ದೇವೆ. ಈ ಕಾರಣಕ್ಕಾಗಿ ಅವರು ನನ್ನ ಪರವಾಗಿ ಹೈಕಮಾಂಡ್‌ ನಾಯಕರ ಬಳಿ ಮಾತನಾಡಿದ್ದಾರೆ’ ಎಂದು ಯೋಗೇಶ್ವರ್‌ ಸ್ಪಷ್ಟನೆ ನೀಡಿದರು.
 

click me!