ಬಪ್ಪರೇ..! ಅಪ್ಪನ ಸರ್ಕಾರ ಉಳಿವಿಗೆ ಹೆಗಲು ಕೊಟ್ಟ ಮಕ್ಕಳು, ತಂದೆಗೆ ಗೆಲುವಿನ ಉಡುಗೊರೆ

By Suvarna NewsFirst Published Dec 9, 2019, 6:18 PM IST
Highlights

ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವಿನ ನಿರ್ಣಾಯ ಉಪ ಕದನದಲ್ಲಿ ಕಮಲ ಕಲಿಗಳು ವಿಜಯಪತಾಕೆ ಹಾರಿಸಿದ್ದಾರೆ. ಬೈ ಎಲೆಕ್ಷನ್ ಬ್ಯಾಟೆಲ್​ನಲ್ಲಿ ಬಿಜೆಪಿ ಸರ್ಕಾರ ಸೇಫಾಗಲು ಬಿಎಸ್​ವೈ ಪುತ್ರ ರತ್ನರು ಸಹ ನಿರ್ಣಾಯಕ ಪಾತ್ರ ವಹಿಸಿದ್ದು, ತಂದೆಗೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲ ಯಡಿಯೂರಪ್ಪನವರ ಬಹುಕಾಲದ  ಕನವರಿಕೆಗೆ ಮುಕ್ತಿ ನೀಡಿ ಸಹಿ ಹಂಚಿ ಸಂಭ್ರಮಿಸಿದ್ದಾರೆ.

ಬೆಂಗಳೂರು, (ಡಿ.09): ಹಸಿರು ಶಾಲು ಹಾಕಿ ದಕ್ಷಿಣ ಭಾರತದಲ್ಲಿ ಕೇಸರಿ ಸರ್ಕಾರ ಸ್ಥಾಪಿಸಿದ ಕಮಲ ಕಲಿ ಯಡಿಯೂರಪ್ಪಗೆ ಇಂದು (ಸೋಮವಾರ) ಹೊರಬಿದ್ದ ಉಪ ಚುನಾವಣಾ ಫಲಿತಾಂಶ ಡಬಲ್​ ಧಮಾಕ ಸಿಕ್ಕಿದೆ.

ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಸೇಫ್ ಆದ ಖುಷಿ ಒಂದ್ಕಡೆಯಾದರೆ, ತವರಿನಲ್ಲಿ  ಮೊದಲ ಬಾರಿಗೆ ಕಮಲ ಅರಳಿಸಿದ ಖಷಿ ಇನ್ನೊಂದ್ಕಡೆ. ಕೆಆರ್. ಪೇಟೆಯಲ್ಲಿನ ಬಿಜೆಪಿ ಗೆಲುವು. ಯಡಿಯೂರಪ್ಪ ಪಾಲಿಗೆ ಉಳಿದೆಲ್ಲಾ ಗೆಲುವಿಗಿಂತಲೂ ದೊಡ್ಡದಾಗಿದೆ.

ಸೊಲ್ಲೇ ಇಲ್ಲದ ಕೆಆರ್ ಪೇಟೆಯಲ್ಲಿ ಕಮಲ ಅರಳಿದ್ದೇಗೆ? ಹೊಸ ರಾಜಕೀಯ ಚಾಣಕ್ಯ ಮಾಡಿದ ಆ ಒಂದು ಕೆಲಸ! 

ಮೂಲತಃ ಕೆ.ಆರ್​.ಪೇಟೆ ತಾಲೂಕು ಬೂಕನಕೆರೆಯವರಾದ ಯಡಿಯೂರಪ್ಪಗೆ  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ನನ್ನ ಹುಟ್ಟೂರಲ್ಲಿ ಒಂದು ಸ್ಥಾನವನ್ನೂ ಬಿಜೆಪಿ ಗೆದ್ದಿಲ್ಲ ಅನ್ನೋ ಕೊರಗಿತ್ತು.  ನಾರಾಯಣ ಗೌಡ ಪರ ಪ್ರಚಾರದಲ್ಲಿ ಸಿಎಂ ಇದನ್ನ ಹೇಳೀಕೊಂಡಿದ್ದರು ಕೂಡ. ಆದ್ರೆ, ಇದೀಗ ಬಿಎಸ್‌ವೈ ಕೊರಗು ಈಗ ಮುಕ್ತಿ ಕಂಡಿದೆ.

ಯಡಿಯೂರಪ್ಪರ ಇಚ್ಛೆಯಂತೆ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿದೆ.  ಅಷ್ಟಕ್ಕೂ ಕೆ.ಆರ್.ಪೇಟೆ ಸುಲಭವಾಗಿ ಬಿಜೆಪಿಗೆ ದಕ್ಕಲಿಲ್ಲ. ಮತ ಎಣಿಕೆ ವೇಳೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ನೆಕ್ ಟು ನೆಕ್ ಫೈಟ್ ನೀಡಿದರು. ಅಂತಿಮವಾಗಿ ಬಿಜೆಪಿ ಗೆದ್ದು ಬೀಗಿತು. ಇನ್ನೂ ಈ ಗೆಲುವಿನ ಹಿಂದೆ ಸಾಕಷ್ಟು ಪರಿಶ್ರಮವಿದ. ಹಲವು ತಂತ್ರಗಾರಿಕೆ ಇದೆ.  ಇದರ ನಡುವೆ ಯಡಿಯೂರಪ್ಪ  ಕೊರಗಿಗೂ ಕೂಡ ಮತದಾರ ಮನ ಕರಗಿದೆ. 

12 ಅನರ್ಹರು ಪಾಸ್, ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪಾಲಿಟಿಕ್ಸ್; ಡಿ.9ರ ಟಾಪ್ 10 ಸುದ್ದಿ!

ಅಪ್ಪನ ಕೊರಗಿಗೆ ಮುಕ್ತಿಕೊಟ್ಟ ವಿಜಯೇಂದ್ರ..!
ತಮ್ಮ ಹುಟ್ಟೂರಲ್ಲೇ ಬಿಜೆಪಿ ಗೆದ್ದಿಲ್ಲ ಎಂಬ ಯಡಿಯೂರಪ್ಪನವರ ಕೊರಗು ಕೆ.ಆರ್​. ಪೇಟೆಯಲ್ಲಿ ಅನುಕಂಪದ ಅಲೆ ಸೃಷ್ಠಿಸಿತ್ತು. ಅದಕ್ಕೆ ಪೂರಕವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿ, ಸಿಎಂ ಭರಪೂರ ಅನುದಾನ ಘೋಷಿಸಿರುವುದು ಬಿಜೆಪಿಗೆ ವರದಾನವಾಯಿತು. ಅದೆಲ್ಲಕ್ಕಿಂತ ಮುಖ್ಯವಾಗಿ ಬಿಎಸ್ವೈ ಪುತ್ರ ವಿಜಯೇಂದ್ರ ಕ್ಷೇತ್ರದಲ್ಲೇ ಠೀಕಾಣಿ ಹೂಡಿ ಪ್ರಚಾರ ನಡೆಸಿ, ಮತದಾರ ಮನಗೆಲ್ಲುವಲ್ಲಿ ಯಶಸ್ವಿಯಾದರು. 

ರಾಣೇಬೆನ್ನೂರು ಮತ್ತು ಹಿರೇಕೆರೂರಿನಲ್ಲಿ ರಾಘವೇಂದ್ರ ಕೈಚಳಕ
ಯಡಿಯೂರಪ್ಪ ಕಿರಿಯ ಪುತ್ರ ವಿಜಯೇಂದ್ರ ಕೆ.ಆರ್​. ಪೇಟೆ ಕಾವಲು ಕಾಯುತ್ತಿದ್ರೆ, ಅತ್ತ ಹಿರಿಯ ಮಗ ರಾಘವೇಂದ್ರ ಸೈಲೆಂಟಾಗೆ ಅಖಾಡಕ್ಕಿಳಿದಿದ್ರು. ಹಾವೇರಿಯ ರಾಣೇಬೆನ್ನೂರು ಮತ್ತು ಹಿರೇಕೆರೂರು ಕ್ಷೇತ್ರಗಳ ಹೊಣೆ ಹೊತ್ತಿದ್ದ  ಶಿವಮೊಗ್ಗ ಸಂಸದ, ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಶಿವಲಿಂಗ ಶಿವಾಚಾರ್ಯ ಶ್ರೀಗಳ ನಾಮಪತ್ರ ವಾಪಸ್​ ತೆಗೆಸುವಲ್ಲಿ  ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಹಿರೇಕೆರೂರಲ್ಲಿ ಲಿಂಗಾಯತ ಮತಗಳು ಚದುರರಂತೆ ಕಾಯ್ದು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾದರು.

ಒಟ್ಟಾರೆ ಸರ್ಕಾರ ಉಳಿಸಿಕೊಳ್ಳುವ ಅಪ್ಪನ ಜವಾಬ್ದಾರಿ ಕಾರ್ಯಕ್ಕೆ ಹೆಗಲು ಕೊಟ್ಟ ಮಕ್ಕಳು, ಸರ್ಕಾರ ಉಳಿಸೋ ಜತೆಗೆ  ತಂದೆ ಕನಸನ್ನೂ ಸಾಕಾರಗೊಳಿಸಿದ್ದಾರೆ. 

click me!