
ಹುಬ್ಬಳ್ಳಿ (ಏ.29): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ಹೊರಗಿಟ್ಟು ಅಧಿಕಾರ ಮಾಡಬೇಕೆನ್ನುವ ಷಡ್ಯಂತ್ರವನ್ನು ಅವರು ನಡೆಸಿದ್ದಾರೆ. ಮಾಜಿ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿಯರಿಗೆ ಟಿಕೆಟ್ ತಪ್ಪಿಸಿದ್ದು ಸಂತೋಷ್ ಎಂದು ಆರೋಪಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ ನನಗೆ ಟಿಕೆಟ್ ನೀಡಿದರೆ, ನಾನೇ ಲಿಂಗಾಯತ ಸಮುದಾಯದ ಹಿರಿಯನಾಗಿ ನಾಯಕತ್ವ ಸ್ಥಾನಕ್ಕೆ ಪೈಪೋಟಿ ನೀಡುತ್ತೇನೆ ಎಂದುಕೊಂಡು ಸಂತೋಷ ಟಿಕೆಟ್ ತಪ್ಪಿಸಿದ್ದಾರೆ.
ದೇಶದಲ್ಲಿ ಸಂತೋಷ್ ವಿರುದ್ಧ ಮಾತನಾಡುವ ಹಾಗಿಲ್ಲ. ಆದರೆ, ನಾನು ಮಾತನಾಡಿದ್ದರಿಂದ ಸಂತೋಷ ಅವರಿಂದ ಅನ್ಯಾಯಕ್ಕೆ ಒಳಗಾದ ಹಲವು ನಾಯಕರು ಪೋನ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಬಿಜೆಪಿಯವರಿಗೆ ನಾನು ಕಾಂಗ್ರೆಸ್ ಸೇರಿದ ಮೇಲೆ ತಳಮಳ ಶುರುವಾಗಿದೆ ಎಂದರು. ಅವರು ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವನ್ನು ಬಿಡಲಿ. ಸಂತೋಷ್ಗೆ ನೇರವಾಗಿ ಯುದ್ಧ ಮಾಡುವ ಜಾಯಮಾನ ಇಲ್ಲ, ಹಿಂಬಾಗಿಲ ರಾಜಕೀಯ ಮಾಡುತ್ತಿದ್ದಾರೆ. ಮತ್ತೊಬ್ಬರ ಮೂಲಕ ಮಾತನಾಡಿಸುವುದನ್ನು ಬಿಟ್ಟು ಅವರು ನನ್ನ ಜತೆಗೆ ನೇರ ಯುದ್ಧಕ್ಕೆ ಬರಲಿ ಎಂದರು.
ನನ್ನನ್ನು ಸೋಲಿಸಲು ಕಾಂಗ್ರೆಸ್-ಬಿಜೆಪಿ ಷಡ್ಯಂತ್ರ: ನಿಖಿಲ್ ಕುಮಾರಸ್ವಾಮಿ
ಬಿಜೆಪಿಯಿಂದ ಹೊರಬಂದ ಬಳಿಕ ನನ್ನ ಸಾಮರ್ಥ್ಯ ಏನೆಂದು ಅವರಿಗೆ ಗೊತ್ತಾಗಿದೆ. ಕ್ರಿಮಿನಲ್ಗಳಿಗೆ ಟಿಕೆಟ್ ಕೊಡುತ್ತಿರುವ ಬಿಜೆಪಿಯಲ್ಲಿ ಯಾವುದೇ ಐಡಿಯಾಲಜಿ ಇಲ್ಲ. ನನ್ನನ್ನು ಸೋಲಿಸಿ ರಾಜಕೀಯವಾಗಿ ಮುಗಿಸಬೇಕೆಂಬ ಒನ್ ಪಾಯಿಂಟ್ ಅಜೆಂಡಾ ಅವರಲ್ಲಿದೆ. ಹಾಗಾಗಿ ಬಿಜೆಪಿಯ ನಾಯಕರು ಶೆಟ್ಟರ್ ಸೋಲಿಸಿ ಎಂದು ಅಭಿಯಾನ ಆರಂಭಿಸಿದ್ದು, ಇದು ಕ್ಷೇತ್ರದಲ್ಲಿ ನನ್ನ ಬಗ್ಗೆ ಜನರಲ್ಲಿ ಪ್ರೀತಿ ಹೆಚ್ಚಾಗುವಂತೆ ಮಾಡಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಚುನಾವಣೆ ಶೆಟ್ಟರ್ ವರ್ಸಸ್ ಜೋಶಿ ಎಂಬಂತಾಗಿದೆ: ಇಡೀ ರಾಜ್ಯದ ಗಮನ ಸೆಳೆದಿರುವ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ವರ್ಸ್ಸ್ ಜೋಶಿ ಮಧ್ಯೆ ಹೋರಾಟ ನಡೆದಿದ್ದು, ಲೋಕಸಭೆ ಚುನಾವಣೆಯ ಸೆಮಿಫೈನಲ್ ಇದಾಗಿದೆ ಎಂದು ಮಾಜಿ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ವಿಶ್ಲೇಷಿಸಿದ್ದಾರೆ. ಮಾಧ್ಯಮದವರ ಜತೆ ಶುಕ್ರವಾರ ಮಾತನಾಡಿದ ಅವರು, ಬೆಂಬಲಿಗರು, ಪಾಲಿಕೆ ಸದಸ್ಯರು, ಕೆಲವು ಪದಾಧಿಕಾರಿಗಳು ಮಾನಸಿಕವಾಗಿ ನಮ್ಮ ಜತೆಗಿದ್ದಾರೆ. ಆದರೆ, ಕೇಂದ್ರ ಸಚಿವ ಪ್ರಹ್ಲಾದ ಜೊಶಿ ಅವರನ್ನು ದೈಹಿಕವಾಗಿ ಕಟ್ಟಿಹಾಕಿದ್ದಾರೆ. ಅವರಿಗೆ ಒತ್ತಡ, ಧಮಕಿ ಹಾಕುತ್ತಿದ್ದಾರೆ. ಗೂಢಚರ್ಯೆ ಬಿಟ್ಟು ಕಾರ್ಪೋರೇಟರ್ಗಳ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ. ಅದಕ್ಕಾಗಿ ಒಬ್ಬೊಬ್ಬ ಸದಸ್ಯರ ಮೇಲೆ ಮೂರ್ನಾಲ್ಕು ಉಸ್ತುವಾರಿ ವ್ಯಕ್ತಿಗಳನ್ನು ನೇಮಿಸಿದ್ದಾರೆ. ಅವರು ವೈಯಕ್ತಿಕ ಬದುಕನ್ನು ಅನುಭವಿಸಲು ಸಚಿವ ಜೋಶಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ಗೆ ನೀಡುವ ಮತ ಪಿಎಫ್ಐನಂತಹ ಉಗ್ರಗಾಮಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿದಂತೆ: ಜೆ.ಪಿ.ನಡ್ಡಾ
ಬಿಜೆಪಿ ಸದಸ್ಯರನ್ನು ಹಿಡಿದಿಡುವುದಲ್ಲದೇ ಬಿಜೆಪಿ ಸೇರುವಂತೆ ಕಾಂಗ್ರೆಸ್ ಕಾರ್ಫೋರೇಟರ್ಗಳಿಗೂ ಬೆದರಿಕೆವೊಡ್ಡಿ ಒತ್ತಡ ಹೇರುತ್ತಿದ್ದಾರೆ. ನಮ್ಮ ಮನೆ ಸುತ್ತ ಗುಪ್ತಚರ ಸಿಬ್ಬಂದಿ ನೇಮಿಸಿದ್ದಾರೆ. ಇಲ್ಲಿ ಕಂಡು ಬರುವ ವ್ಯಕ್ತಿಗಳಿಗೆ ಪೋನ್ ಮಾಡಿ ಅಲ್ಲಿ ಯಾಕೆ ಇದ್ದೀರಿ, ಅಲ್ಲಿಗೇಕೆ ಹೋಗಿದ್ದೀರಿ ಎಂದು ಬೆದರಿಕೆ ಹಾಕುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಜೋಶಿ ಮತ್ತು ಬಿಜೆಪಿಯವರು ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ. ಗೂಂಡಾಯಿಸಂ, ಧಮಕಿ, ಹಣ, ಅಧಿಕಾರದ ಬಗ್ಗೆ ಬೇರೆ ಪಾರ್ಟಿ ಬಗ್ಗೆ ಮಾತನಾಡುತ್ತಿದ್ದವರು ಇದೀಗ ಇವರೇ ಆ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದಾರೆ. ಇದು ಅಧಿಕಾರದ ಮದ ಹಾಗೂ ಹಣದ ಬೆಂಬಲ ಅವರನ್ನು ಈ ರೀತಿ ಮಾಡಿಸುತ್ತಿದೆ. ಇದಕ್ಕೆಲ್ಲ ಮೇ 10 ಅಂತ್ಯ ಹಾಡಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.