
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ 2): ಭಯೋತ್ಪಾದನೆಗೆ ಉತ್ತೇಜನ ನೀಡುವ ಯಾವುದೇ ಸಂಘಟನೆಯಾದರೂ ಬ್ಯಾನ್ ಮಾಡುವುದರಲ್ಲಿ ತಪ್ಪೇನಿದೆ. ಹೀಗಾಗಿ ಬಜರಂಗದಳವನ್ನು ಬ್ಯಾನ್ ಮಾಡಲಾಗುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿರುವ ವಿಷಯವನ್ನು ಮಡಿಕೇರಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಅದು ಪಿಎಫ್ಐ ಆಗಿರಲಿ, ಇಲ್ಲವೇ ಬಜರಂಗದಳವೇ ಆಗಿರಲಿ, ಯಾರೇ ಆದರೂ ಶಾಂತಿ ಕದಡಿ ಭಯೋತ್ಪಾದನೆ ಮಾಡುವವರನ್ನು ಬ್ಯಾನ್ ಮಾಡುತ್ತೇವೆ ಎಂದು ನಮ್ಮ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಇದು ಸರ್ವ ಜನಾಂಗದ ಶಾಂತಿಯ ತೋಟ. ಅಮಿತ್ ಷಾ ಅವರೆಲ್ಲಾ ಬಂದು ಚುನಾವಣೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಮೂರು ರಾಜ್ಯದಲ್ಲಿ ಮಾತ್ರ ಅವರಿಗೆ ಸ್ಪಷ್ಟ ಬಹುಮತ ಬಂದಿದೆ ಅಷ್ಟೇ. ಉಳಿದೆಲ್ಲ ಕಡೆ ಕುದುರೆ ವ್ಯಾಪಾರದಂತೆ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡಿದ್ದಾರೆ. ಆದ್ದರಿಂದ ಧರ್ಮಾಧಾರಿತ ರಾಜಕಾರಣ ನಾವು ಮಾಡಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಏನಿದೆಯೋ ಅದನ್ನು ನಾವು ಮಾಡುತ್ತೇವೆ. ಕಳೆದ ನಾಲ್ಕು ವರ್ಷ ಅಧಿಕಾರ ಮಾಡಿದ ಬಿಜೆಪಿ, ಶಾಸಕರನ್ನು ಕಳ್ಳತನ ಮಾಡಿ ಸರ್ಕಾರ ರಚಿಸಿ ನಡೆಸಿತು. ಇದು ಡಬ್ಬಲ್ ಎಂಜಿನ್ ಸರ್ಕಾರ ಅಲ್ಲ ಡಬ್ಬಲ್ ದೋಖಾ ಸರ್ಕಾರ ಎಂದು ವಿಧಾನ ಪರಿಷತ್ತು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಪ್ರತಿಭಟಿಸಿದ ಬಜರಂಗದಳ ಕಾರ್ಯಕರ್ತರು
ಗುಜರಾತ್ಗಿಂತ ಕರ್ನಾಟಕ ಮುಂದಿದ್ದೇವೆ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಲ್ಲಿ 40 ಲಕ್ಷ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಉದ್ಯೋಗ ಖಾಲಿ ಉಳಿದಿವೆ. ಆದರೆ ಪ್ರತಿ ವರ್ಷ 2 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ವಿಶ್ವಗುರು ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ನಮ್ಮ ವಿವಿಧ ಯೋಜನೆಗಳನ್ನು ಕಾಪಿ ಮಾಡಿ ಬೇರೆ ಹೆಸರುಗಳಲ್ಲಿ ತಮ್ಮ ಯೋಜನೆಗಳೆಂದು ಘೋಷಿಸುತ್ತಿರುವುದನ್ನು ನೋಡಿದರೆ ಇವರ ಭೌದ್ಧಿಕ ದಿವಾಳಿತನ ಏನೆಂಬುದು ಗೊತ್ತಾಗುತ್ತದೆ. ಮಕ್ಕಳಿಗೆ ಕೊಡುತ್ತಿದ್ದ ಮೊಟ್ಟೆ ಕದ್ದರು, ಸೈಕಲ್, ಚಪ್ಪಲಿ ಕದ್ದರು. ಉತ್ತರ ಪ್ರದೇಶಕ್ಕಿಂತ ಕರ್ನಾಟಕ 200 ವರ್ಷ, ಹಾಗೆಯೇ ಗುಜರಾತಿಗಿಂತ 50 ವರ್ಷ ಕರ್ನಾಟಕದ ನಾವು ಮುಂದೆ ಇದ್ದೇವೆ ಎಂದರು.
ಕೋವಿಡ್ ವೇಳೆ ತಿರುಗಿ ನೋಡದ ಪ್ರಧಾನಿ: ನಮ್ಮ ರಾಜ್ಯಕ್ಕೆ ಗುಜರಾತ್ ಅಥವಾ ಮತ್ಯಾವುದೇ ರಾಜ್ಯಗಳ ಮಾಡೆಲ್ ಬೇಡ. ಕರ್ನಾಟಕದಲ್ಲಿ ಭೂ ಕುಸಿತ, ಪ್ರವಾಹಗಳಾಗಿ ಸಾವಿರಾರು ಜನ ಸತ್ತರು. ಕೋವಿಡ್ ಬಂದು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಸತ್ತರೂ ಪ್ರಧಾನಿ ಮೋದಿ ಅವರಾಗಲಿ, ಷಾ ಅವರಾಗಲಿ ಒಮ್ಮೆ ಇತ್ತ ತಿರುಗಿ ನೋಡಲಿಲ್ಲ. ಈಗ ಚುನಾವಣೆಗಾಗಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಇದನ್ನು ನೋಡಿದರೆ, ಇವರು ಚುನಾವಣೆಗಾಗಿ ಇದ್ದಾರೆ. ಕೊಡಗು ಕಾಫಿ, ಕಾಣು ಮೆಣಸಿನ ಬೆಳೆಗಳ ಮೇಲೆ ಅವಲಂಬಿತವಾಗಿದೆ. ಆದರೆ ಬಿಜೆಪಿ ಸರ್ಕಾರ ಕಾಫಿ ಮೆಣಸು ನಷ್ಟವಾದರೂ ಇದುವರೆಗೆ ಒಂದೇ ಒಂದು ಬಿಡಿಗಾಸು ವಿಶೇಷ ಪ್ಯಾಕೇಜ್ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.
ನಮ್ಮದು ಬಜರಂಗದಳ ಮನೆ: ಕಾಂಗ್ರೆಸ್ನವರು ಓಟ್ ಕೇಳೋಕೆ ಬಂದ್ರೆ 'ನಾಯಿ ಬಿಡ್ತೀವಿ'
ಕಾಂಗ್ರೆಸ್ಗೆ ರಾಜಿನಾಮೆ ಸಲ್ಲಿಸಿದ ಮಾಜಿ ಸಚಿವ ಬಿ.ಎ. ಜೀವಿಜಯ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ, ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಬಿ.ಎ ಜಿವಿಜಯ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಬರೆದು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದಾಗಿ ಹೇಳಿದ್ದಾರೆ. ಜೊತೆಗೆ ಈ ಚುನಾವಣೆ ಅಪ್ಪಚ್ಚು ರಂಜನ್ ಅವರಿಗೂ ಕೊನೆಯ ಚುನಾವಣೆ ಆಗಿದೆ. ಹಾಗಾಗಿ, ಅವರಿಗೆ ನಾನು ಬೆಂಬಲ ಕೊಟ್ಟರೆ ತಪ್ಪೇನು, ಎನ್ನುವ ಮೂಲಕ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದರು.
ನನಗೆ ಕವಡೆ ಕಾಸಿನ ಕಿಮತ್ತು ಕೊಡದ ಕಾಂಗ್ರೆಸ್: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮತ್ತು ಚಂದ್ರಮೌಳಿ ಹೆಸರನ್ನು ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೆಸರನ್ನು ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಶಿಫಾರಸ್ಸು ಮಾಡಿದ್ದರು. ಆದರೆ ಶಿಫಾರಸ್ಸಿನಲ್ಲಿ ಇಲ್ಲದ ಡಾ. ಮಂತರ್ ಗೌಡ ಅವರಿಗೆ ಟಿಕೆಟ್ ನೀಡಲಾಯಿತು. ಆಗಲೂ ನನ್ನನ್ನು ಕೆಪಿಸಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೊರ ಜಿಲ್ಲೆಯವರಿಗೆ ಟಿಕೆಟ್ ಕೊಡಬೇಡಿ ಎಂದು ಪತ್ರ ಬರೆದಿದ್ದೆ. ಆದರೆ ಆ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಜಿವಿಜಯ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.