
ವರದಿ- ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್
ಬೀದರ್ (ಮೇ 2): ಗಡಿಜಿಲ್ಲೆ ಬೀದರ್ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ರಹೀಂಖಾನ್ ಮತ್ತೊಮ್ಮೆ ಲಿಂಗಾಯತ ವಿರೋಧಿ ಹೇಳಿಕೆ ನೀಡಿ ಲಿಂಗಾಯತ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಆರಕ್ಕೆ ಆರೂ ಜನ ಲಿಂಗಾಯತರೇ ಇದಾರೆ. ಪಕ್ಷ ಯಾವುದೇ ಇರಲಿ, ಅಧಿಕಾರದಲ್ಲಿ ಅವರೇ ಇರಬೇಕು ಎಂದುಕೊಂಡಿರುತ್ತಾರೆ. ನನ್ನ ಹಿಂದೆ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ಮುಸ್ಲಿಂ ಬಾಂಧವರು ನನ್ನ ಕೈಬಿಡಬೇಡಿ. ನಾನು ಓಲ್ಡ್ ಸಿಟಿಯಲ್ಲಿ ನಿಮ್ಮ ಓಣಿಗೆ ಬರದೇ ಇದ್ದರೂ ನೀವೇ ನೋಡಿಕೊಳ್ಳಿ ಯಾಕೆಂದರೆ, ನಾನು ಬೇರೆ ಸಮುದಾಯದವರ ಮತ ತೆಗೆದುಕೊಳ್ಳಲು ಪ್ರತಿ ಮನೆ ಮನೆಗೆ ಹೋಗಬೇಕಾಗುತ್ತದೆ. ಕೆಲವರು ನಮ್ಮ ಸಮುದಾಯವರನ್ನ ಖರೀದಿ ಮಾಡಿಕೊಂಡು ನನಗೆ ಸೋಲಿಸಲು ರಣತಂತ್ರ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದ 24 ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಗೆ ಗೇಟ್ ಪಾಸ್: 6 ವರ್ಷ ಪಕ್ಷದಿಂದ ಉಚ್ಛಾಟನೆ
ಬಿಜೆಪಿ- ಜೆಡಿಎಸ್ ಮೈತ್ರಿಯಾಗಿವೆ: ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳ ಮೈತ್ರಿಯಾಗಿದೆ. ಒಬ್ಬ ವ್ಯಕ್ತಿ ಓಲ್ಡ್ ಸಿಟಿಯಲ್ಲಿ ನುಗ್ಗಿದ್ದಾರೆ. ಸಾವಿರ, ಎರಡೂ ಸಾವಿರ ಕೊಟ್ಟು ನಮ್ಮ ಜನರಿಗೆ ಖರೀದಿ ಮಾಡುತ್ತಿದ್ದಾನೆ. ನಮ್ಮ ಹೋರಾಟ ಆ ವ್ಯಕ್ತಿಗಳ ವಿರುದ್ಧ ಇದೆ ಎಂದು ಪರೋಕ್ಷವಾಗಿ ಲಿಂಗಾಯತ ಜೆಡಿಎಸ್ ಅಭ್ಯರ್ಥಿ ಸೂರ್ಯಕಾಂತ್ ನಾಗಮಾರಪಳ್ಳಿ ವಿರುದ್ಧ ರಹೀಂ ಖಾನ್ ವಾಗ್ದಾಳಿ ನಡೆಸಿದರು. ತಮ್ಮ ಭರದಲ್ಲಿ ಪಕ್ಷ ಯಾವುದೇ ಇರಲಿ ಎಲ್ಲಾ ಕ್ಷೇತ್ರದಲ್ಲೂ ಲಿಂಗಾಯತರೇ ಅಧಿಕಾರದಲ್ಲಿ ಇರಬೇಕಂದುಕೊಂಡಿದಾರೆ ಎಂದು ಲಿಂಗಾಯತ ವಿರೋಧಿ ಹೇಳಿಕೆ ನೀಡಿ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಸ್ಲಿಂ ಮತಗಳನ್ನು ಮಾತ್ರ ಪಡೆದು ಗೆದ್ದಿದ್ದೇನೆ: ಕಳೆದ ಬಾರಿ 2018ರ ವಿಧಾನಸಭಾ ಚುನಾವಣೆ ವೇಳೆಯೂ ಭಾಷಣ ಮಾಡುವಾಗ ನಿಮ್ಮ ಮತಗಳಿಂದ ಮಾತ್ರ ನಾನು ಗೆದ್ದಿದ್ದೇನೆಂದು, ಮುಸ್ಲಿಂ ಓಲೈಕೆಗೆ ಮುಂದಾಗಿ ಬೇರೆ ಬೇರೆ ಸಮುದಾಯದ ವಿರೋಧ ಕಟ್ಟುಕೊಂಡಿದ್ದರು. ಈಗ 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಕೂಡ ಶಾಸಕ ರಹೀಂ ಖಾನ್ ಈಗ ಮತ್ತೊಮ್ಮೆ ಮುಸ್ಲಿಂ ಸಮುದಾಯದ ಜನರಲ್ಲಿ ಇರುವ ಅವರ ವಿರೋಧಿ ಅಲೆ ದೂರ ಮಾಡಲು ಜಮೀರ್ ಅಹ್ಮದ್ ಅವರನ್ನ ಕರೆಸಿ ಪ್ರಚಾರ ನಡೆದರು. ಈ ವೇಳೆ ಲಿಂಗಾಯತ ನಾಯಕರ ವಿರುದ್ಧ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ.
ಕಲಬುರಗಿ ಹೆಲಿಪ್ಯಾಡ್ನಲ್ಲಿ ಸರಳತೆ ಮೆರೆದು, ಮೋಡಿ ಮಾಡಿದ ಪ್ರಧಾನಿ
ಶಾಸಕ ಜಮೀರ್ ಅಹಮದ್ ಕಾರ್ಯಕ್ರಮಕ್ಕೆ ರಾಷ್ಟ್ರಧ್ವಜ ಬಳಕೆ: ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದೆ. ಪ್ರಚಾರದ ಭರಾಟೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಎಡವಟ್ಟು ಮಾಡಲಾಗಿದೆ. ಶಾಸಕ ಜಮೀರ ಅಹ್ಮದ್ ಭಾಗಿಯಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ಪರ ನಡೆದ ಪ್ರಚಾರ ಸಭೆ ಮಾಡುತ್ತಿದ್ದರು. ಬೀದರ್ ನ ಹುಮನಾಬಾದ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಪಾಟೀಲ್ ಅವರ ಪರವಾಗಿ, ಚಿಟ್ಟಗುಪ್ಪಾದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದೆ. ಮೈಕ್ ಇಡುವ ಟೇಬಲ್ಗೆ ರಾಷ್ಟ್ರ ಧ್ವಜ ಕಟ್ಟಿದ್ದಾರೆ. ಕಾಂಗ್ರೆಸ್ ಧ್ವಜ ಕಟ್ಟಬೇಕಾದ ಜಾಗದಲ್ಲಿ ರಾಷ್ಟ್ರ ಧ್ವಜ ಕಟ್ಟಿ ಅವಮಾನ ಮಾಡಲಾಗಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.