Karnataka Assembly Election: ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಭರ್ಜರಿ ‘ಮತ ಸಂಕಲ್ಪ’

By Kannadaprabha NewsFirst Published Nov 24, 2022, 12:18 AM IST
Highlights
  • ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಭರ್ಜರಿ ‘ಮತ ಸಂಕಲ್ಪ’
  • ದಾವಣಗೆರೆಯ ಜಗಳೂರು, ಹರಿಹರದಲ್ಲಿ ಜನಸಂಕಲ್ಪ ಯಾತ್ರೆ
  • ಬರದ ನಾಡು ಹಸಿರು ನಾಡು ಮಾಡುವ ಘೋಷಣೆ
  • ಕೋಟೆ ನಾಡಿನ ನಂತರ ಬೆಣ್ಣೆ ನಗರಿಯಲ್ಲಿ ಬಿಜೆಪಿ ರಾರ‍ಯಲಿ
  • ನೀರಾವರಿ ಯೋಜನೆಗಳಿಗೆ ವೇಗ: ಬೊಮ್ಮಾಯಿ

ಜಗಳೂರು/ಹರಿಹರ (ನ.24) : ಭದ್ರಾ ಮೇಲ್ದಂಡೆ ಯೋಜನೆಗೆ 16 ಸಾವಿರ ಕೋಟಿ ರು. ಅನುದಾನ ನೀಡುವ ಮೂಲಕ ದಾವಣಗೆರೆ, ಚಿತ್ರದುರ್ಗ, ತುಮಕೂರು ಒಳಗೊಂಡ ಮಧ್ಯ ಕರ್ನಾಟಕವನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಮೂರೂ ಜಿಲ್ಲೆಗಳ ಭೂತಾಯಿಗೆ ಹಸಿರು ಸೀರೆ ಉಡಿಸಿ, ರೈತರು ಬಂಗಾರದ ಬೆಳೆ ಬೆಳೆಯುವಂತಹ ವಾತಾವರಣ ಕಲ್ಪಿಸಲು ಡಬಲ್‌ ಇಂಜಿನ್‌ ಸರ್ಕಾರಗಳು ಬದ್ಧವಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಬುಧವಾರ ಬಿಜೆಪಿಯ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಬರದ ನಾಡು ಮಧ್ಯ ಕರ್ನಾಟಕವನ್ನು ಹಸಿರು ನಾಡು ಮಾಡುವ ಸಂಕಲ್ಪ ತೊಟ್ಟರು.

ಮತ ಪಟ್ಟಿ ಪರಿಷ್ಕರಣೆ ಚಿಲುಮೆಗೆ ಸರ್ಕಾರ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ, ಮಧ್ಯ ಕರ್ನಾಟಕ ಭಾಗದಲ್ಲಿ ಮತಬೇಟೆ ಆರಂಭಿಸಿದ್ದು, ಬುಧವಾರ ಮಧ್ಯ ಕರ್ನಾಟಕದ ಆರ್ಥಿಕ ರಾಜಧಾನಿ ದಾವಣಗೆರೆ ಜಿಲ್ಲೆಯ ಜಗಳೂರು ಹಾಗೂ ಹರಿಹರದಲ್ಲಿ ಜನಸಂಕಲ್ಪ ಯಾತ್ರೆ ನಡೆಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಗೋವಿಂದ ಕಾರಜೋಳ, ಬೈರತಿ ಬಸವರಾಜು, ಶಾಸಕರಾದ ರೇಣುಕಾಚಾರ್ಯ ಮೊದಲಾದವರು ಸಮಾವೇಶದಲ್ಲಿ ಪಾಲ್ಗೊಂಡು, ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇದಕ್ಕೂ ಮೊದಲು, ಮಂಗಳವಾರ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆಗಳಲ್ಲಿ ಬಿಜೆಪಿ, ಜನಸಂಕಲ್ಪ ಯಾತ್ರೆ ನಡೆಸಿತ್ತು. ಅಲ್ಲದೆ, ಈ ಭಾಗದ ಪ್ರಮುಖ ಜಲಾಶಯ ವಾಣಿ ವಿಲಾಸ ಜಲಾಶಯಕ್ಕೆ ಸಿಎಂ ಅವರು ಬಾಗಿನ ಅರ್ಪಿಸಿ, ಈ ಭಾಗದ ಹಲವು ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸುವ ಭರವಸೆ ನೀಡಿದ್ದರು.

ಮಧ್ಯ ಕರುನಾಡು ಹಸಿರು ನಾಡಾಗಲಿದೆ:

ಇದೇ ವೇಳೆ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಸಿಎಂ, ಬರದ ನಾಡು ಮಧ್ಯ ಕರ್ನಾಟಕವನ್ನು ಹಸಿರು ನಾಡು ಮಾಡುವ ಸಂಕಲ್ಪ ನಮ್ಮದು. ಅಪ್ಪರ್‌ ಭದ್ರಾ ಯೋಜನೆ ಮಾಡಿ, ಅದನ್ನು ಪೂರ್ಣಗೊಳಿಸುವ ಯಾವುದಾದರೂ ಸರ್ಕಾರವಿದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. ಇದೇ ನಮ್ಮ ಪಕ್ಷ, ನಮ್ಮ ಸರ್ಕಾರದ ಬದ್ಧತೆ ಎಂದರು.

ಜಗಳೂರಿನ ಕೆರೆಗಳನ್ನು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಈ ಭಾಗದ ನೀರಾವರಿ ಹೋರಾಟಗಾರರು ನಡೆಸಿದ ಹೋರಾಟಕ್ಕೆ ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಸ್ಪಂದಿಸಲಿಲ್ಲ. ಆದರೆ, ಈ ಹೋರಾಟಗಳಿಗೆ ಸ್ಪಂದಿಸಿ 1.5 ಟಿಎಂಸಿ ನೀರನ್ನು ಬರದನಾಡು ಜಗಳೂರಿಗೆ ಕೊಟ್ಟಿದ್ದು ನಾನು. ಆಗ ಯಡಿಯೂರಪ್ಪ ಸಿಎಂ ಆಗಿದ್ದರು. ನಾನು ನೀರಾವರಿ ಸಚಿವನಾಗಿದ್ದೆ ಎಂದರು.

ಮಧ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಜನ ಸಂಕಲ್ಪ ಯಾತ್ರೆ ರಾಜ್ಯದಲ್ಲಿ ದೊಡ್ಡ ಪರಿವರ್ತನೆಗೆ ಕಾರಣವಾಗಲಿದೆ. ಈ ಡಬಲ್‌ ಇಂಜಿನ್‌ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಲುಮತಕ್ಕೂ ಸ್ಪಂದಿಸುವೆ:

ಪರಿಶಿಷ್ಟಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ನಿರ್ಣಯಕ್ಕೆ ಅಪಸ್ವರ ಎತ್ತಿದ ಕಾಂಗ್ರೆಸ್‌ ತಾನೂ ಏನನ್ನೂ ಮಾಡಲಿಲ್ಲ, ಮಾಡಿರುವುದನ್ನೂ ಸಹಿಸಿಕೊಳ್ಳುತ್ತಿಲ್ಲ. ಹಿಂದುಳಿದ ವರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲುಮತದವರಿದ್ದಾರೆ. ಕುರಿ ಮೇಯಿಸುತ್ತಾ ಜೀವನ ಸಾಗಿಸುತ್ತಾರೆ. ಅಂತಹ ಕುರಿಗಾಹಿಗಳ ಸಂಘಕ್ಕೆ 5 ಲಕ್ಷ ನೀಡಲು 354 ಕೋಟಿ ನೀಡಿದ್ದೇವೆ. ಕುರಿಗಾಹಿಗಳಿಗೆ ನೆರವು ಸಾಧ್ಯವಿಲ್ಲವೆಂದಿದ್ದ ಸಿದ್ದರಾಮಯ್ಯ ಮಾತನ್ನು ಸವಾಲಾಗಿ ಸ್ವೀಕರಿಸಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಬಡಿಗೇರ, ಕಮ್ಮಾರ, ಕುಂಬಾರ, ಮೇದಾರ ಸೇರಿ 23 ಹಿಂದುಳಿದ ವರ್ಗಗಳ ಜನರಿಗೆ ಆರ್ಥಿಕ ನೆರವು ನೀಡುವ ಯೋಜನೆ ಶೀಘ್ರವೇ ಜಾರಿಗೊಳ್ಳಲಿದೆ ಎಂದು ಬೊಮ್ಮಾಯಿ ಘೋಷಿಸಿದರು.

Chitradurga: ಮುರುಘಾ ಮಠ ಆಡಳಿತ ಡಿಸಿ ವರದಿ ಆಧರಿಸಿ ತೀರ್ಮಾನ: ಸಿಎಂ ಬೊಮ್ಮಾಯಿ

ಮೀಸಲಿಗೆ ವಿಪಕ್ಷ ಅಡ್ಡಿ: ಬೊಮ್ಮಾಯಿ

ಪರಿಶಿಷ್ಟಜಾತಿ, ಪಂಗಡಗಳ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ನಿರ್ಣಯಕ್ಕೆ ಕಾಂಗ್ರೆಸ್‌ ಅಪಸ್ವರ ಎತ್ತಿದೆ. ಆ ಪಕ್ಷದವರು ತಾವೂ ಮಾಡಿಲ್ಲ, ಮಾಡಿರುವುದನ್ನೂ ಸಹಿಸಿಕೊಳ್ಳುತ್ತಿಲ್ಲ. ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಿಸುವ ಮೂಲಕ ಸರಿಸಮಾನ ಮಾನ, ಸಮ್ಮಾನ ಕಲ್ಪಿಸಿದ್ದೇವೆ. ಮೀಸಲಾತಿ ಹೆಚ್ಚಳದಿಂದ ಶಿಕ್ಷಣ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ದೊರೆಯಲಿದೆ. ಇದನ್ನು ಕಾಂಗ್ರೆಸ್ಸಿಗೆ ಸಹಿಸಲಾಗುತ್ತಿಲ್ಲ.

ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ

click me!