
ಮುದಗಲ್/ಮಸ್ಕಿ (ಏ.10): ಉಪಚುನಾವಣೆಯಲ್ಲಿ ಮತಕ್ಕಾಗಿ ಬಿಜೆಪಿಯವರು ಹಣ ಹಂಚಿಕೆ ಮಾಡುತ್ತಿದ್ದಾರೆಂಬ ಪ್ರತಿಪಕ್ಷ ಕಾಂಗ್ರೆಸ್ ಟೀಕೆಯನ್ನು ಅಲ್ಲಗೆಳೆದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಲಾಗದವರು ಮೈಪರಚಿಕೊಂಡಂತೆ ಕಾಂಗ್ರೆಸ್ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸ್ಕಿ ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿರುವ ಅವರು ಮುದುಗಲ್ ಮತ್ತು ಮಸ್ಕಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ಕೆಲಸವನ್ನೂ ಮಾಡಲಿಲ್ಲ. ಇದೀಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟುಒಳ್ಳೆಯ ಕೆಲಸ ಮಾಡುತ್ತಿದ್ದು, ಅದನ್ನು ಸಹಿಸಲಾಗದ ಕಾಂಗ್ರೆಸ್ಸಿಗರು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನವರು ಏನೇ ಮಾಡಿದರೂ ಬಿಜೆಪಿ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳಿದರು. ಹೆಲಿಕಾಪ್ಟರ್ನಿಂದ ಇಳಿಯುದ್ದಂತೆ ಮಳೆ ಹನಿ ಬಿದ್ದಿರುವುದು ಶುಭಸೂಚನೆಯಾಗಿದ್ದು, ಪ್ರತಾಪಗೌಡ ಪಾಟೀಲ್ ಸುಮಾರು 20 ಸಾವಿರಕ್ಕು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎನ್ನುವ ಸಾಕ್ಷಿ ಸಿಕ್ಕಿತು ಎಂದು ನುಡಿದರು.
ಆಗ ಬಿಜೆಪಿಗೆ, ಈಗ ಕೈಗೆ JDS ಶಾಕ್ : ಕಾಂಗ್ರೆಸ್ ನಾಯಕರ ಬೆವರಿಳಿಸಿದ ದಳಪತಿ .
ದಲಿತರ ಮನೆಯಲ್ಲಿ ಸಿಎಂ ಉಪಾಹಾರ ಸ್ವೀಕಾರ : ಮಸ್ಕಿ: ಉಪಚುನಾವಣೆ ನಿಮಿತ್ತ ಎರಡು ದಿನಗಳ ಕಾಲ ಪ್ರಚಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಸ್ಕಿಯ ಅಂಬೇಡ್ಕರ್ ನಗರದ ಪರಿಶಿಷ್ಟಜಾತಿಯ ಖಾಸಿಂ ಮುರಾರಿ ಅವರ ಮನೆಯಲ್ಲಿ ಉಪಾಹಾರ ಸೇವಿಸಿ ಕೆಲಹೊತ್ತು ಸಮಯ ಕಳೆದರು. ನೀರಾವರಿ ಇಲಾಖೆಯಲ್ಲಿ ದಿನಗೂಲಿಯಾಗಿರುವ ಖಾಸಿಂ ಮುರಾರಿ ಚಿಕ್ಕ ಮನೆಯನ್ನು ಹೊಂದಿದ್ದು, ಸಿಎಂ ಅನ್ನು ಬಾಜಾ ಭಜಂತ್ರಿ ಸಮೇತ ಬರಮಾಡಿಕೊಂಡರು.
ನಂತರ ಅವರನ್ನು ಯುವತಿಯರು ಆರತಿ ಬೆಳಗಿ ಸ್ವಾಗತಿಸಿದರು. ಈ ವೇಳೆ ಕುಟುಂಬಸ್ಥರು ಮಂಡಾಳ ಚುಡ್ವಾ, ಅವಲಕ್ಕಿ, ಉಪ್ಪಿಟ್ಟ, ಸಿರಾ ಹಾಗೂ ಚಹಾ ವ್ಯವಸ್ಥೆ ಮಾಡಿದ್ದರು. ಉಪಾಹಾರ ಸ್ವೀಕರಿಸಿದ ಮುಖ್ಯಮಂತ್ರಿಗಳು ಕುಟುಂಬದ ಸದಸ್ಯರ ಕುಶಲೋಪರಿ ವಿಚಾರಿಸಿ, ಅಲ್ಲಿಂದ ಹೊರಟರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಜುಗೌಡ, ಪರಣ್ಣ ಮುನ್ನೊಳ್ಳಿ, ಬಸವರಾಜ ಧಡೆಸೂಗೂರ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.