ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಬಿಜೆಪಿ ಟೆಂಡರ್‌ ರದ್ದು: ಡಿಕೆಶಿ

By Kannadaprabha NewsFirst Published Jan 9, 2023, 2:30 AM IST
Highlights

ರಾಜ್ಯದ ಗಂಭೀರ ವಿಚಾರಗಳ ಬಗ್ಗೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಚರ್ಚಿಸಬಹುದಲ್ಲ? ಇದ್ಯಾವುದನ್ನೂ ರಾಜ್ಯ ಸರ್ಕಾರ ಮಾಡುತ್ತಿಲ್ಲ. ಡಬಲ್‌ ಎಂಜಿನ್‌ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ರಾಜ್ಯದ ಜನರಿಗೆ ಅರಿವಾಗಿದೆ. ಈ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಬೇಕು: ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಜ.09):  ಇನ್ನು 60 ದಿನಗಳು ಕಳೆದ ಬಳಿಕ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಸರ್ಕಾರ ಪ್ರಸ್ತುತ ತರಾತುರಿಯಲ್ಲಿ ಮಾಡುತ್ತಿರುವ ಎಲ್ಲ ಟೆಂಡರ್‌ಗಳನ್ನೂ ಮರು ಪರಿಶೀಲನೆ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ಇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಭಾನುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಆಡಳಿತ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತರಾತುರಿಯಲ್ಲಿ ಅನೇಕ ಯೋಜನೆಗಳಿಗೆ ಟೆಂಡರ್‌ ಕರೆಯಲು ಹೊರಟಿದೆ. ನಾನು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುತ್ತೇನೆ. ಅಧಿಕಾರಿಗಳು ಯಾರದ್ದೋ ಏಜೆಂಟ್‌ಗಳಾಗಬೇಡಿ. ಗುತ್ತಿಗೆದಾರರು ಸುಮ್ಮನೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ. ಇನ್ನು 60 ದಿನಗಳು ಕಳೆದ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಆ ಎಲ್ಲ ಟೆಂಡರ್‌ಗಳ ಅಂದಾಜು ಮೊತ್ತವನ್ನು ಮರು ಪರಿಶೀಲನೆ ಮಾಡಿಸುತ್ತೇವೆ ಎಚ್ಚರವಿರಲಿ’ ಎಂದು ಹೇಳಿದರು.

Karnataka Assembly election: ಕಾಂಗ್ರೆಸ್‌ನಿಂದ ಪ್ರತ್ಯೇಕ ಮಹಿಳಾ ಪ್ರಣಾಳಿಕೆ ಸಿದ್ಧ: ಡಿ.ಕೆ. ಶಿವಕುಮಾರ್

ಜ.16ಕ್ಕೆ ನಾ ನಾಯಕಿ ಕಾರ್ಯಕ್ರಮ:

ರಾಜ್ಯ ಮಹಿಳಾ ಕಾಂಗ್ರೆಸ್‌ನಿಂದ ಆಯೋಜಿಸಿರುವ ‘ನಾ ನಾಯಕಿ’ ವಿಶೇಷ ಮಹಿಳಾ ಸಮಾವೇಶವನ್ನು ಕಾರಣಾಂತರಗಳಿಂದ ಜ.16ಕ್ಕೆ ಮುಂದೂಡಲಾಗಿದೆ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ತಿಳಿಸಿದರು.
ನಾ ನಾಯಕಿ ಕಾರ್ಯಕ್ರಮಕ್ಕೆ ಪ್ರಿಯಾಂಕ ಗಾಂಧಿ ಬರುತ್ತಾರಾ ಎಂಬ ಪ್ರಶ್ನೆಗೆ, ಯಾವೆಲ್ಲಾ ರಾಷ್ಟ್ರೀಯ ನಾಯಕರು ಬರುತ್ತಾರೆ ಎಂಬ ಬಗ್ಗೆ ಶೀಘ್ರದಲ್ಲೇ ಗೊತ್ತಾಗಲಿದೆ. ಬಳಿಕ ಮಾಹಿತಿ ನೀಡುತ್ತೇವೆ. ಪ್ರತಿ ಬೂತ್‌ನಿಂದ ಮಹಿಳಾ ಕಾರ್ಯಕರ್ತರನ್ನು ಕರೆತರುತ್ತೇವೆ. ಸಮಾವೇಶವನ್ನು ಯಶಸ್ವಿಗೊಳಿಸಲು ನಾನು ಕೂಡ ಜೂಮ್‌ ಮೀಟಿಂಗ್‌ ನಡೆಸುತ್ತಿದ್ದು ಎಲ್ಲಾ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.

Karnataka Politics: ಡಿ.ಕೆ.ಶಿವಕುಮಾರ್ ಯಾರಿಗೆ ಚಹಾ ಕೊಡುತ್ತಿದ್ದರೆಂದು ತಿಳಿದುಕೊಳ್ಳಲಿ: ಸಚಿವ ಪ್ರಹ್ಲಾದ್‌ ಜೋಶಿ

ರಾಜ್ಯದ ಬಗ್ಗೆ ಕೇಂದ್ರಕ್ಕೆ ಗೌರವ ಇಲ್ಲ:

‘ಕೇಂದ್ರ ಸರ್ಕಾರ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡದ ಕುರಿತ ಪ್ರಶ್ನೆಗೆ, ಕರ್ನಾಟಕ ಅಂದ್ರೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಇಲ್ಲ. ನಾರಾಯಣಗುರು ಅವರ ಸ್ತಬ್ಧಚಿತ್ರವನ್ನು ಕಿತ್ತುಹಾಕಿದ ನೋವೇ ಇನ್ನೂ ಕಡಿಮೆ ಆಗಿಲ್ಲ. ಕೇಂದ್ರದಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಬಿಜೆಪಿ ಸಂಸದರಿದ್ದಾರೆ. ಒಂದು ದಿನವೂ ಅವರನ್ನು ಕರೆದು ರಾಜ್ಯದ ಬಗ್ಗೆ ಚರ್ಚೆ ಮಾಡಿಲ್ಲ. ಬಿಜೆಪಿಯವರಿಗೆ ಈ ಬಗ್ಗೆ ಚರ್ಚೆ ಮಾಡಲೂ ಶಕ್ತಿ ಇಲ್ಲ’ ಎಂದು ಕಿಡಿಕಾರಿದರು.

‘ಮಹದಾಯಿ ವಿಚಾರ, ಎಸ್ಸಿ ಎಸ್ಟಿಸಮುದಾಯದ ಮೀಸಲಾತಿ ಹೆಚ್ಚಳವನ್ನು 9ನೇ ಪರಿಚ್ಛೇದಕ್ಕೆ ಸೇರಿಸುವುದು ಸೇರಿದಂತೆ ರಾಜ್ಯದ ಗಂಭೀರ ವಿಚಾರಗಳ ಬಗ್ಗೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಚರ್ಚಿಸಬಹುದಲ್ಲ? ಇದ್ಯಾವುದನ್ನೂ ರಾಜ್ಯ ಸರ್ಕಾರ ಮಾಡುತ್ತಿಲ್ಲ. ಡಬಲ್‌ ಎಂಜಿನ್‌ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ರಾಜ್ಯದ ಜನರಿಗೆ ಅರಿವಾಗಿದೆ. ಈ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಬೇಕು’ ಎಂದರು.

click me!