ಎಚ್‌.ಡಿ. ಕುಮಾರಸ್ವಾಮಿಗೆ ನಳಿನ್‌ ಕುಮಾರ್‌ ಕಟೀಲ್‌ ಸವಾಲು

By Kannadaprabha NewsFirst Published Oct 7, 2021, 12:51 PM IST
Highlights
  • ಆರ್‌ಎಸ್‌ಎಸ್‌ ರಾಷ್ಟ್ರ ಕಟ್ಟುವ ದೇಶ ಭಕ್ತಿ ಮೂಡಿಸುವ ಸಂಘಟನೆ
  • ಆರ್‌ಎಸ್‌ಎಸ್‌ ಬಗ್ಗೆ ಕಾಮಾಲೆ ರೋಗದಿಂದ ನೋಡುವ ಬದಲು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಒಂದು ವಾರ ಆರ್‌ಎಸ್‌ಎಸ್‌ ಶಾಖೆಗೆ ಬಂದು ನೋಡಲಿ

 ಮಂಗಳೂರು (ಅ.07):  ಆರ್‌ಎಸ್‌ಎಸ್‌ (RSS) ರಾಷ್ಟ್ರ ಕಟ್ಟುವ ದೇಶ ಭಕ್ತಿ ಮೂಡಿಸುವ ಸಂಘಟನೆಯಾಗಿದ್ದು, ವ್ಯಕ್ತಿ ನಿರ್ಮಾಣ ಮಾಡುತ್ತಿದೆಯೇ ಹೊರತು ಅಧಿಕಾರವನ್ನಲ್ಲ. ಆರ್‌ಎಸ್‌ಎಸ್‌ ಬಗ್ಗೆ ಕಾಮಾಲೆ ರೋಗದಿಂದ ನೋಡುವ ಬದಲು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಒಂದು ವಾರ ಆರ್‌ಎಸ್‌ಎಸ್‌ ಶಾಖೆಗೆ ಬಂದು ನೋಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar kateel) ಸವಾಲು ಹಾಕಿದ್ದಾರೆ.

ಮಂಗಳೂರಿನಲ್ಲಿ (Mangaluru) ಬುಧವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕಾಮಾಲೆ ರೋಗದವರಿಗೆ ಜಗತ್ತೇ ಹಳದಿಯಾಗಿ ಕಾಣುತ್ತದೆ ಎಂಬಂತೆ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಕುಟುಂಬ ರಾಜಕಾರಣ ಮಾಡಿದವರು. ತನ್ನ ಸಂಬಂಧಿಕರಿಗೆ ಅಧಿಕಾರದ ಮೀಸಲಾತಿ ನೀಡಿದವರು. ಅಂಥಹ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ನೀಡಿದವರು. 

ಆರೆಸ್ಸೆಸ್‌ ಶಾಖೆ ಸೇರಿದರೆ ಇನ್ನಷ್ಟುಸತ್ಯ ಬಹಿರಂಗ : ಎಚ್ಡಿಕೆ

ಅಂತಹ ಕುಮಾರಸ್ವಾಮಿ ಅವರು ಈಗ ದೇಶಭಕ್ತ ಸಂಘಟನೆ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಲು ಹೊರಟಿದ್ದಾರೆ. ಆರ್‌ಎಸ್‌ಎಸ್‌ ಸಂಘಟನೆ ಅಧಿಕಾರ ಗಳಿಸಿಕೊಡುವುದಿಲ್ಲ. ಅಧಿಕಾರದ ಹಿಂದೆಯೇ ಬಿದ್ದಿಲ್ಲ. ಆರ್‌ಎಸ್‌ಎಸ್‌ನಡಿ 60 ಸಾವಿರ ಸಂಘಸಂಸ್ಥೆಗಳಿವೆ. ಇವೆಲ್ಲ ರಾಷ್ಟ್ರ ನಿರ್ಮಾಣದ ಕೆಲಸ ಮಾಡುತ್ತಿವೆ. ಐಎಎಸ್‌, ಐಪಿಎಸ್‌ ಕಲಿಯಲು ಶೈಕ್ಷಣಿಕವಾಗಿ ವ್ಯವಸ್ಥೆಗಳು ಇವೆ. 

ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಅನೇಕರು ಸಂಘಪರಿವಾರ ಹಿನ್ನೆಲೆಯಿಂದ ಮುನ್ನಲೆಗೆ ಬಂದವರು. ಜನತಾ ಪರಿವಾರದ ಮುಖಂಡ ಪಿ.ಜಿ.ಆರ್‌. ಸಿಂಧ್ಯಾ ಕೂಡ ಆರ್‌ಎಸ್‌ಎಸ್‌ ಶಾಖೆಯಿಂದ ಬಂದವರು. ಈ ಎಲ್ಲ ಸಂಗತಿಗಳನ್ನು ಕುಮಾರಸ್ವಾಮಿ ಮೊದಲು ತಿಳಿದುಕೊಳ್ಳಲಿ. ಯಾವುದಕ್ಕೂ ಸಂಘದ ಶಾಖೆಗೆ ಒಂದು ವಾರ ಬಂದು ನೋಡಲಿ, ಆಗ ಆರ್‌ಎಸ್‌ಎಸ್‌ ಏನು ಎಂಬುದು ಕುಮಾರಸ್ವಾಮಿಗೆ ಗೊತ್ತಾಗುತ್ತದೆ ಎಂದು ಹೇಳಿದರು.

ಗೌಡರೇ ಹೊಗಳಿದ್ದರು

 

 ದೇಶದಲ್ಲಿ 4 ಸಾವಿರಕ್ಕೂ ಅಧಿಕ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಆರೆಸ್ಸೆಸ್‌ ಕಾರ್ಯಕರ್ತರಾಗಿದ್ದು, ದೇಶದ ಕಾರ್ಯಾಂಗದ ಮೇಲೆ ಆರೆಸ್ಸೆಸ್‌(RSS) ಹಿಡಿತ ಸಾಧಿಸಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿಕೆಗೆ ಬಿಜೆಪಿ ನಾಯಕರಿಂದ(BJP Leaders) ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೆಸ್ಸೆಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನ(Pakistan) ಆಗಿರುತ್ತಿತ್ತು. ಆರೆಸ್ಸೆಸ್‌ ದೇಶ ಕಟ್ಟುವ ಸಂಸ್ಥೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(Fprmer PM HD Devegowda) ಕೂಡ ಆರೆಸ್ಸೆಸ್‌ ಅನ್ನು ಪ್ರಶಂಸಿಸಿದ್ದರು ಎಂದು ಬಿಜೆಪಿ ನಾಯಕರು ತರಾಟೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(nalin Kumar Kateel), ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಎಸ್‌.ಟಿ.ಸೋಮಶೇಖರ್‌, ಸುನಿಲ್‌ ಕುಮಾರ್‌, ಅಶ್ವತ್ಥನಾರಾಯಣ್‌, ಗೋವಿಂದ ಕಾರಜೋಳ, ಪ್ರಭು ಚವ್ಹಾಣ್‌ ಸೇರಿ ಹಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಾಲೆ ಕಣ್ಣಿನವರಿಗೆ ಊರೆಲ್ಲ ಹಳದಿಯಾಗಿ ಕಾಣುವ ಸ್ಥಿತಿ ಕುಮಾರಸ್ವಾಮಿ ಅವರದ್ದಾಗಿದೆ ಎಂದು ಕಟೀಲ್‌ ವ್ಯಂಗ್ಯವಾಡಿದರೆ, ಕೋವಿಡ್‌ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಸ್ವಯಂಸೇವಕರು ನಿರಂತರವಾಗಿ ಸೇವೆ ಸಲ್ಲಿಸಿದ್ದು, ಇದ್ಯಾವುದನ್ನೂ ತಿಳಿಯದ ಮೂರ್ಖರು ಈ ರೀತಿಯ ಆಪಾದನೆ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಆರೆಸ್ಸೆಸ್‌ ಇಲ್ಲದಿದ್ದರೆ ಭಾರತ ಈಗ ಪಾಕಿಸ್ತಾನ ಆಗಿರುತ್ತಿತ್ತು ಎಂದು ಸಚಿವ ಪ್ರಭು ಚವ್ಹಾಣ್‌ ಕಿಡಿಕಾರಿದ್ದಾರೆ.

ಆರೆಸ್ಸೆಸ್‌(RSS) ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಮುಂಬರುವ ಚುನಾವಣೆಗಳನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಅವರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಈಶ್ವರಪ್ಪ, ಕಾರಜೋಳ, ಎಸ್‌.ಟಿ.ಸೋಮಶೇಖರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!