Karnataka Politics: ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಯವರು ನಾಯಿ, ನರಿಗಳಂತೆ ಖರೀದಿಸಿದರು: ಆಂಜನೇಯ

By Kannadaprabha NewsFirst Published Dec 6, 2021, 10:45 AM IST
Highlights

*  ವಾಮಮಾರ್ಗದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ
*  ಗ್ರಾಪಂಗಳಿಗೆ ಹಣ ಕೊಟ್ಟಿದ್ದು ಕಾಂಗ್ರೆಸ್‌ ಸರ್ಕಾರ
*  ನಮ್ಮಲ್ಲಿ ಯಾವುದೇ ಒಡಕಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ

ಹಾವೇರಿ(ಡಿ.06):  ಬಿಜೆಪಿ ಸರ್ಕಾರ(BJP Government) ಜನಾದೇಶ ಪಡೆದು ಅಧಿಕಾರಕ್ಕೆ ಬಂದಿಲ್ಲ. ಅದು ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಎಚ್‌. ಆಂಜನೇಯ(H Anjaneya) ಆರೋಪಿಸಿದ್ದಾರೆ.  ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮಲ್ಲಿದ್ದ ಶಾಸಕರನ್ನೇ ನಾಯಿ, ನರಿಗಳಂತೆ ಖರೀದಿ ಮಾಡಿದರು ಎಂದು ಲೇವಡಿ ಮಾಡಿದರು.

ಬಾಂಬೆಗೆ ಕರ್ಕೊಂಡು ಹೋಗಿ ಪಿಕ್ಚರ್‌, ವಿಡಿಯೋ, ಸಿನಿಮಾ ಮಾಡಿ ಸರ್ಕಾರ ರಚಿಸಿದರು. ಬಿಜೆಪಿಯವರು ರಾಜ್ಯದಲ್ಲಿ ಜನಪ್ರತಿನಿಧಿಗಳನ್ನು ಖರೀದಿ ಮಾಡುವ ಕೆಟ್ಟ ಸಂಪ್ರದಾಯ ಹುಟ್ಟು ಹಾಕಿದರು. ರಾಜ್ಯದಲ್ಲಿ(Karnataka) ಈ ಹಿಂದೆ ಕಾಂಗ್ರೆಸ್‌ ಸರ್ಕಾರವಿದ್ದಾಗ ಪ್ರಧಾನಿ ಮೋದಿ(Narendra Modi) ಅದನ್ನು ಶೇ. 10ರ ಸರ್ಕಾರ ಎಂದಿದ್ದರು. ಆಗ ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದು ತನಿಖೆ ನಡೆಸಿ ತಪ್ಪು ಮಾಡಿದ್ದರೆ ಜೈಲಿಗೆ ಹಾಕಿಸಬಹುದಿತ್ತು. ಆಗ ಯಾವೊಬ್ಬ ಗುತ್ತಿಗೆದಾರನೂ ದೂರು ಹೇಳಿರಲಿಲ್ಲ, ಈಗ ಬಿಜೆಪಿ ಸರ್ಕಾರದ ಪರ್ಸೆಂಟೇಜ್‌ ಬಗ್ಗೆ ಗುತ್ತಿಗೆದಾರರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈಗಿನ ಬಿಜೆಪಿ ಸರ್ಕಾರದ ಶಾಸಕರು ಪರ್ಸೆಂಟೇಜ್‌ ಇಲ್ಲದೇ ಯಾವುದೇ ಕಾಮಗಾರಿಗೆ ಭೂಮಿಪೂಜೆ ನಡೆಸುತ್ತಿಲ್ಲ, ಗುತ್ತಿಗೆದಾರರಿಂದ ಮೊದಲು ಪರ್ಸೆಂಟೇಜ್‌ ಪಡದೇ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ. ಇದೆಲ್ಲ ನಮ್ಮ ಅವಧಿಯಲ್ಲಿ ಇರಲಿಲ್ಲ ಎಂದು ದೂರಿದರು.

Council Election Karnataka : ಸೋಮಶೇಖರ್‌ಗೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕಾದ ‘ಸವಾಲು’

ಗ್ರಾಪಂಗಳಿಗೆ ಹಣ ಕೊಟ್ಟಿದ್ದು ಕಾಂಗ್ರೆಸ್‌ ಸರ್ಕಾರ

ಬಿಜೆಪಿಯವರು ಗ್ರಾಮ ಪಂಚಾಯಿತಿಗಳ ವಿರುದ್ಧವಾಗಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಹಣ ಕೊಟ್ಟಿದ್ದು ನಮ್ಮ ಕಾಂಗ್ರೆಸ್‌ ಸರ್ಕಾರ(Congress Government). ನಮ್ಮ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರದಿದ್ರೆ ಜನರು ಗುಳೆ ಹೋಗ್ತಿದ್ರು. ಇವತ್ತು ಗುಳೆ ಹೋಗುವ ಪರಿಸ್ಥಿತಿ ಇಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಜತೆಗೆ ಗ್ರಾಮದ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಹಣ ಅನುಕೂಲ ಆಗಿದೆ. ಬಿಜೆಪಿಯವರು ಮತ ಕೇಳುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಡಾ. ಮನಮೋಹನ ಸಿಂಗ್‌(Dr Manmohan Singh) ಮತ್ತು ಸಿದ್ದರಾಮಯ್ಯ(Siddaramaiah) ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ವಚನ ಭ್ರಷ್ಟರಾಗಿದ್ದಾರೆ. ರಾಷ್ಟ್ರದಲ್ಲಿ ಕೋವಿಡ್‌ಗೆ(Covid19) ಎಷ್ಟು ಜನರು ಬಲಿಯಾಗಿದ್ದಾರೆ ಎನ್ನುವ ನಿಖರ ಅಂಕಿ-ಅಂಶಗಳು ಬಿಜೆಪಿ ಸರ್ಕಾರದಿಂದ ಸಿಗ್ತಿಲ್ಲ. ಬಿಜೆಪಿಯವರ ಆಡಳಿತ ವೈಫಲ್ಯದಿಂದ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಹಾನಗಲ್‌ ಉಪಚುನಾವಣೆಯಲ್ಲಿನ ಕಾಂಗ್ರೆಸ್‌ ಗೆಲುವು 2023ರ ಚುನಾವಣೆಗೆ ದಿಕ್ಸೂಚಿ ಆಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ವಿಪ ಚುನಾವಣೆಯಲ್ಲಿ ಹದಿನೈದರಿಂದ ಹದಿನಾರು ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಬಿಟ್‌ ಕಾಯಿನ್‌(Bitcoin) ವಿಚಾರದಲ್ಲಿ ಸಿದ್ದರಾಮಯ್ಯನವರ ಪುತ್ರನ ಹೆಸರು ಎಳೆದು ತಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಮಗನೂ ಈಗ ಜೀವಂತ ಇಲ್ಲ. ಸಿದ್ದರಾಮಯ್ಯ ಮಗನ ಹೆಸರು ತಂದಿದ್ದು ಬಿಜೆಪಿಯವರ ಕುತಂತ್ರ. ಈಗ ಚುನಾವಣೆ ಇದೆ. ಚುನಾವಣೆ ಮುಗಿದ್ಮೇಲೆ ಬಿಟ್‌ ಕಾಯಿನ್‌ ವಿರುದ್ಧ ಮತ್ತೆ ಹೋರಾಟ ಮಾಡುತ್ತೇವೆ ಎಂದರು.

Karnataka BJP Politics: ಸಿಎಂ ಬದಲಾವಣೆ ಬಗ್ಗೆ ಕೇಂದ್ರ ಸಚಿವ ಜೋಶಿ ಹೇಳಿದ್ದಿಷ್ಟು

ಕಾಂಗ್ರೆಸ್‌ನಲ್ಲಿ ಒಡಕಿಲ್ಲ

ನಮ್ಮಲ್ಲಿ ಯಾವುದೇ ಒಡಕಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. 2023ರ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಜನಾದೇಶ ಸಿಕ್ಕ ಕೂಡಲೇ ನಮ್ಮ ಶಾಸಕರು ಐದೇ ನಿಮಿಷದಲ್ಲಿ ಮುಂದಿನ ಸಿಎಂ ಯಾರು ಎಂಬುದನ್ನು ಆಯ್ಕೆ ಮಾಡುತ್ತಾರೆ. ಜನರು ಬಿಜೆಪಿ ಸರ್ಕಾರ ತೆಗೆಯುವ ಮನಸ್ಸು ಮಾಡಿದ್ದಾರೆ ಎಂದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ಡಿ. ಬಸವರಾಜ, ವಿ.ಎಸ್‌. ಆರಾಧ್ಯ, ಶ್ರೀನಿವಾಸ ಹಳ್ಳಳ್ಳಿ, ಸಂಜೀವಗಾಂಧಿ ಸಂಜೀವಣ್ಣನವರ, ನಿಂಗಪ್ಪ ಕಡೂರ, ಸುರೇಶ ಮಡಿವಾಳರ, ಮಾಲತೇಶ ಕಾಲ್ವಿಹಳ್ಳಿ, ದಾನಪ್ಪ ಗಂಟೇರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
 

click me!