DK Suresh vs Ashwath Narayan: ಬಿಎಸ್‌ವೈ ಇಳಿಸಿದಂತೆ ಬೊಮ್ಮಾಯಿ ಇಳಿಸಲು ಪ್ರಯತ್ನ: ಡಿಕೆಶಿ

Published : Jan 04, 2022, 02:50 AM IST
DK Suresh vs Ashwath Narayan: ಬಿಎಸ್‌ವೈ ಇಳಿಸಿದಂತೆ ಬೊಮ್ಮಾಯಿ ಇಳಿಸಲು ಪ್ರಯತ್ನ: ಡಿಕೆಶಿ

ಸಾರಾಂಶ

*ಬಿಟ್‌ಕಾಯಿನ್‌, ವಿಚಾರಗಳ ಮಾಹಿತಿ ಕೊಟ್ಟವರೇ ಸಚಿವ ಅಶ್ವತ್ಥನಾರಾಯಣ್‌ * ರಾಮನಗರದ ಘಟನೆ ಒಬ್ಬ ಸಚಿವರ ದುರಹಂಕಾರದ ಪರಮಾವಧಿಯ ಕಾರಣ *‘ಗಂಡಸ್ರಾ’ ಎಂದಾಗ ಸುಮ್ಮನಿರಬೇಕಾ?-ಡಿಕೆ ಶಿವಕುಮಾರ್ ಕಿಡಿ!

ಮೈಸೂರು (ಜ. 4): ಮುಖ್ಯಮಂತ್ರಿ ಖುರ್ಚಿಯಿಂದ ಬಿ.ಎಸ್‌.ಯಡಿಯೂರಪ್ಪ (B. S. Yediyurappa) ಅವರನ್ನು ಇಳಿಸಿದಂತೆ ಬಸವರಾಜ ಬೊಮ್ಮಾಯಿ (Basvaraj Bommai) ಅವರನ್ನು ಇಳಿಸಲೂ ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ. ರಾಮನಗರ (Ramanagar) ಘಟನೆಗೆ ಸಂಬಂಧಿಸಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಇಳಿಸಲು ಮೊದಲಿಂದಲೂ ಬಿಜೆಪಿಯಲ್ಲಿ ಪ್ರಯತ್ನ ನಡೆಯುತ್ತಿದೆ.

ಬಿಟ್‌ಕಾಯಿನ್‌ ವಿಚಾರವೇ ಆಗಲಿ, ಬೇರೆ ವಿಚಾರವೇ ಆಗಲಿ. ತೆಗೆದುಕೊಳ್ಳಿ ಎಂದು ಅದರ ಮಾಹಿತಿ ನಮಗೆ ಕೊಟ್ಟವರೇ ಬಿಜೆಪಿಯವರು, ಇದೇ ಅಶ್ವತ್ಥ ನಾರಾಯಣ್‌. ಈ ವಿಚಾರಗಳ ಬಗ್ಗೆ ಸಮಯ ಬಂದಾಗ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು. ಈಗಲೂ ಗುತ್ತಿಗೆದಾರರ ಕಮಿಷನ್‌ ವಿಚಾರ ಬಳಸಿಕೊಳ್ಳುತ್ತಿದ್ದಾರೆ. ಅವರ ಆಂತರಿಕ ಸಮಸ್ಯೆಗೆ ಮುಖ್ಯಮಂತ್ರಿಗಳನ್ನು ವೇದಿಕೆ ಮೇಲೆ ಕೂರಿಸಿಕೊಂಡು ಅಪಮಾನ ಮಾಡಿದರೆ ಅದು ಸರಿಯೇ? ಗುತ್ತಿಗೆದಾರರ ಸಂಘದ ಕೆಂಪಣ್ಣ ಯಾರು? ಅವರಿಗೂ ಇವರಿಗೂ ಏನು ಸಂಬಂಧ? ಎಲ್ಲವೂ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.‌

ಗಂಡಸ್ರಾ ಎಂದಾಗ ಸುಮ್ಮನಿರಬೇಕಾ?

ರಾಮನಗರದ ಘಟನೆ ಒಬ್ಬ ಸಚಿವರ ದುರಹಂಕಾರದ ಪರಮಾವಧಿ. ಸಚಿವ ಅಶ್ವತ್ಥ್ ನಾರಾಯಣ ಸಿಎಂರನ್ನು ಕರೆದುಕೊಂಡು ಬಂದಿದ್ದಾರೆ. ಸಿಎಂ ಇರೋ ವೇದಿಕೆಯಲ್ಲಿ ಏನು ಮಾತನಾಡಬೇಕು, ಯಾವ ರೀತಿ ಗೌರವ ಕೊಡಬೇಕು ಎಂಬ ಪರಿಜ್ಞಾನ ಇರಬೇಕು. ‘ಗಂಡಸ್ರಾ...’ ಎಂದಾಗ ಸುಮ್ಮನಿರಬೇಕಾ? ರಾಜಕಾರಣದಲ್ಲಿ ಜೈಕಾರ ಹಾಕುವವರು, ಧಿಕ್ಕಾರ ಕೂಗುವವರು, ಕಲ್ಲು, ಮೊಟ್ಟೆ, ಟೊಮೆಟೋ ಎಸೆಯುವವರು ಇರುತ್ತಾರೆ. ಯಾವುದೋ ಸನ್ನಿವೇಶದಲ್ಲಿ ದಲಿತರಿಗೆ ನೋವಾಗಿದ್ದು, ಅವರು ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ: DKS vs Ashwath Narayan ತಮ್ಮೆದುರಲ್ಲೇ ನಡೆದ ಅಶ್ವತ್ಥ್ ನಾರಾಯಣ-ಡಿಕೆ ಸುರೇಶ್ ಗಲಾಟೆ ಬಗ್ಗೆ ಸಿಎಂ ಹೇಳಿದ್ದಿಷ್ಟು

ಇಂಥ ಘಟನೆಯನ್ನು ನಾವೂ ಎದುರಿಸಿದ್ದೇವೆ. ಸಭೆಯನ್ನು ಹೇಗೆ ನಿಭಾಯಿಸಬೇಕು? ಸಿಎಂ ಬಂದ ಸಂದರ್ಭದಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ಕನಿಷ್ಠಜ್ಞಾನ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಇರಬೇಕು. ಅವರಿಗೆ ಆ ಜ್ಞಾನ ಇಲ್ಲವೋ, ಸಮಯಪ್ರಜ್ಞೆ ಇಲ್ಲವೋ, ಇದೇ ಅವರ ಸಂಸ್ಕೃತಿಯೋ ಗೊತ್ತಿಲ್ಲ ಎಂದು ಕಿಡಿಕಾರಿದರು ಡಿ.ಕೆ.ಶಿವಕುಮಾರ್‌.

ರಾಮನಗರದ ಪ್ರತಿ ಮನೆಗೂ ರಾಜಕಾರಣ ಗೊತ್ತಿದೆ

ನನ್ನ ಸೋದರಿ ಅನಿತಾ ಕುಮಾರಸ್ವಾಮಿ ಮನಸಿಗೂ ನೋವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಸಿಎಂ ಕೂಡ ಆ ರೀತಿಯ ಮಾತು ಬೇಡ, ನಿಲ್ಲಿಸು ಎಂದು ಆ ಸಚಿವರಿಗೆ ಸನ್ನೆ ಮಾಡುತ್ತಾರೆ. ಆದರೂ ಅಶ್ವತ್ಥ ನಾರಾಯಣ್‌ ಮಾತು ನಿಲ್ಲಿಸಲಿಲ್ಲ ಎಂದರು.ರಾಮನಗರ ಜಿಲ್ಲೆ ಕೆಂಗಲ್‌ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡರು, ಕುಮಾರಸ್ವಾಮಿ ಅವರನ್ನು ಕೊಟ್ಟಜಿಲ್ಲೆ. ಅಲ್ಲಿನ ಪ್ರತಿ ಮನೆಗೂ ರಾಜಕಾರಣ ಗೊತ್ತಿದೆ. ನಾವು ಅಶ್ವತ್ಥ್ ಥನಾರಾಯಣ್‌ರಷ್ಟು ದೊಡ್ಡವರಲ್ಲ, ಎಳಸು ಇರಬಹುದು. ಆದರೆ ರಾಮನಗರ ಜಿಲ್ಲೆಯವರು ಅವರ ಬೆದರಿಕೆಗೆ ಹೆದರುವ ಮಕ್ಕಳಲ್ಲ ಎಂದು ಗುಡುಗಿದರು.‌

ಇದನ್ನೂ ಓದಿ: Political Fight: ಮುಖ್ಯಮಂತ್ರಿ ಎದುರೇ ಹೊಡೆದಾಟಕ್ಕೆ ಮುಂದಾದ ಸಂಸದ-ಮಿನಿಸ್ಟರ್

ಅವರು ಬಂದಿರುವುದು ಬೆಂಗಳೂರು ಕಟ್ಟಿದ ಕೆಂಪೇಗೌಡರು, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣಕ್ಕೆ. ಅದನ್ನು ಮಾಡಿಸಿದ್ದು ಇವರಲ್ಲ. ಜಿಲ್ಲಾ ಮಂತ್ರಿಯಾಗಿದ್ದಾಗ ನಾನು ಹಾಗೂ ಎಲ್ಲರೂ ಸೇರಿ ನಿರ್ಮಾಣ ಮಾಡಿದ ಪ್ರತಿಮೆ ಎಂದರು.

ಎಲ್ಲರಿಗೂ ಅಪಮಾನ: 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನಿತಕ್ಕ ಹಾಗೂ ಮುಖ್ಯಮಂತ್ರಿಗಳೇ ಅವರ ಮಾತು ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಮೇಲೆ ಅದರ ಬಗ್ಗೆ ನಾನು ಹೇಳುವುದಾದರೂ ಏನಿದೆ? ಅವರ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಸಿದ್ಧ. ಇದು ಸಿಎಂ, ಅವರ ಪಕ್ಷ, ಆರೆಸ್ಸೆಸ್‌, ಜಿಲ್ಲಾಡಳಿತ, ಜಿಲ್ಲೆಯ ಜನರಿಗೆ ಆಗಿರುವ ಅಪಮಾನ. ಇಂಥವರು ಮಂತ್ರಿಯಾಗಿರುವುದೇ ದೊಡ್ಡ ಅವಮಾನ ಎಂದರು.

ಅಭಿವೃದ್ಧಿ ತಿಳಿಸಲಿ: ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು 7 ಬಾರಿ ಶಾಸಕನಾಗಿರುವ ನನಗೂ ತಿಳಿಸಲಿ. ನಾಳೆ ಅವರೇ ಸಮಯ ನಿಗದಿ ಮಾಡಲಿ. ನಾವು ಬಂದು ತಿಳಿದುಕೊಳ್ಳುತ್ತೇವೆ. ಅಂಬೇಡ್ಕರ್‌ ಪ್ರತಿಮೆ ಅವರು ನಿರ್ಮಿಸಿದ್ರಾ? ಅವರೇನು ಅಣೆಕಟ್ಟು ಕಟ್ಟಿದ್ರಾ? ನರೇಗಾ ಯೋಜನೆಯಲ್ಲಿ ಯಾವುದಾದರೂ ಊರಿನ ಅಂತರ್ಜಲ ಹೆಚ್ಚಿಸಿದ್ದಾರಾ? ಕಟ್ಟಡ ಕಟ್ಟಿದ್ದಾರಾ? ರಸ್ತೆ ಮಾಡಿಸಿದ್ದಾರಾ? ಶಾಲೆ ನಿರ್ಮಿಸಿದ್ದಾರಾ? .900 ಕೋಟಿ ಎಲ್ಲಿ ಕೊಟ್ಟಿದ್ದಾರೆ? ಸರ್ಕಾರದಿಂದ ಅನುದಾನ ಹೋಗುತ್ತಿದೆಯಾ, ಅದೂ ಗೊತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

ಸಿಎಂ ಬಗ್ಗೆ ವೈಯಕ್ತಿಕವಾಗಿ ಗೌರವ-ಡಿಕೆಶಿ

ಮುಖ್ಯಮಂತ್ರಿ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಬೊಮ್ಮಾಯಿ ಅವರನ್ನು ವೈಯಕ್ತಿಕವಾಗಿ ನಾವು ಮೆಚ್ಚಿಕೊಳ್ಳುತ್ತೇವೆ. ಹಾಗೆಂದು ಅವರ ಸಮ್ಮುಖದಲ್ಲಿ ಮಂತ್ರಿಯೊಬ್ಬರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಕೂರಲು ಸಾಧ್ಯವೇ? ನಮಗೂ ಸ್ವಾಭಿಮಾನ ಇದೆ. ವೇದಿಕೆ ಮೇಲೆ ಕೂರಿಸಿ ನೀವು ಗಂಡಸಾ ಎಂದು ಕೇಳಿದರೆ ಸುಮ್ಮನೆ ಕೂರಲು ಸಾಧ್ಯವೇ? ರಾಜಕೀಯ, ಅಧಿಕಾರ ಬರುತ್ತದೆ ಹೋಗುತ್ತದೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರಿನ ಜನರ ರಕ್ತವೇ ಬೇರೆ ಎಂಬುದು ಅವರಿಗೆ ಗೊತ್ತಿರಲಿ ಎಂದು ಡಿ.ಕೆ.ಶಿವಕುಮಾರ್‌ ಗುಡುಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!