
ಮಂಡ್ಯ (ಡಿ.30): ಮುಂಬರುವ ವಿಧಾನಸಭೆ ಚುನಾವಣೆ ಮೂಡಲಬಾಗಿಲು ಆಂಜನೇಯ ಮತ್ತು ಮುಲ್ಲಾಸಾಬ್ ನಡುವೆ ನಡೆಯುವ ಚುನಾವಣೆ, ಟಿಪ್ಪು ಹಾಗೂ ಒಡೆಯರ್ ನಡುವಿನ ನೇರ ಚುನಾವಣೆ. ಇದರಲ್ಲಿ ಆಂಜನೇಯನಿಗೆ ನ್ಯಾಯ ಕೊಡಬೇಕು, ನೀರು-ಅನ್ನ ಕೊಟ್ಟಒಡೆಯರ್ ಗೆಲ್ಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಚ್ಚು ಹಚ್ಚಿಸಿದರು. ಮಂಡ್ಯದ ವಿಶ್ವವಿದ್ಯಾನಿಲಯದ ಆವರಣದಲ್ಲಿ ಭಾರತೀಯ ಜನತಾ ಪಕ್ಷದಿಂದ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಈ ಬಾರಿ ಚುನಾವಣೆ ಮೂಡಲ ಬಾಗಿಲು ಹನುಮಪ್ಪನಿಗೂ, ಮುಲ್ಲಾಸಾಬ್ ನಡುವೆ ನಡೆಯುವ ಚುನಾವಣೆ.
ಮೂಡಲ ಬಾಗಿಲು ಆಂಜನೇಯನಿಗೆ ನ್ಯಾಯ ಕೊಡುವ ಸರ್ಕಾರ ನಮ್ಮದು. ನೀವು ಕೊಡುವ ಮತ ಮುಂದಿನ ಜನ್ಮದಲ್ಲಿ ಏನೋ ಆಗ್ತೀನಿ ಎಂದವರಿಗಲ್ಲ. ಮೂಡಲ ಬಾಗಿಲು ಆಂಜನೇಯನಿಗೆ ನ್ಯಾಯ ಕೊಡೋಕೆ ಎಂದು ಇಂದೇ ನಿರ್ಧರಿಸಬೇಕು ಎಂದು ಗಮನಸೆಳೆಯುವಂತೆ ಮಾತನಾಡಿದರು. ಹಾಗೆಯೇ ಈ ಚುನಾವಣೆ ಟಿಪ್ಪು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ನಡುವೆ ನಡೆಯಲಿರುವ ನೇರ ಚುನಾವಣೆ. ಮಂಡ್ಯಕ್ಕೆ ನೀರು ಕೊಟ್ಟಿದ್ದು ಟಿಪ್ಪು ಮತ್ತು ಅವರಪ್ಪ ಅಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ. ಕೆಲವರು ಟಿಪ್ಪು ನಮ್ಮಪ್ಪನಿಗಿಂತ ಹೆಚ್ಚು ಅಂತಾರಲ್ಲ. ಮೈಷುಗರ್ ಕಾರ್ಖಾನೆ, ಮೈಸೂರು ಬ್ಯಾಂಕ್, ಸಿಲ್್ಕ ಕಾರ್ಖಾನೆ, ಮೈಸೂರು ಪೇಪರ್ ಮಿಲ್ ಮಾಡಿದ್ದು ಯಾರು. ಅವೆಲ್ಲವನ್ನು ಟಿಪ್ಪು, ಅವರಪ್ಪ ಮಾಡಿದ್ದಲ್ಲ. ನಮ್ಮ ಪಾಲಿನ ಭಾಗ್ಯದಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ್ದು ಎಂದು ಮಾತುಗಳ ಮೂಲಕ ಬೆಂಕಿ ಉಗುಳಿದರು.
ಬೇನಾಮಿ ಆಸ್ತಿ ಮಾಡಲು ನನ್ನಪ್ಪ ಸಿಎಂ ಅಲ್ಲ: ಸಿ.ಟಿ.ರವಿ
ಮೈಸೂರಿನ ಹುಲಿ ಟಿಪ್ಪು ಅಲ್ಲ. ಉರಿಗೌಡ, ದೊಡ್ಡ ನಂಜೇಗೌಡ ಈ ನೆಲದ ನಿಜವಾದ ಹುಲಿಗಳು. ಅವರ ರಕ್ತವೇ ನಮ್ಮ ಮೈಯಲ್ಲಿ ಹರಿಯುತ್ತಿದೆ. ಟಿಪ್ಪುವನ್ನು ಕೊಂದ ಉರಿಗೌಡ, ದೊಡ್ಡನಂಜೇಗೌಡರ ಪ್ರತಿಮೆ ಈ ಭಾಗದಲ್ಲಿ ನಿರ್ಮಾಣವಾಗಬೇಕು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತೆ ಇವರನ್ನೂ ನೆನಪು ಮಾಡಿಕೊಳ್ಳಬೇಕು ಎಂದರು. ಕೆಲವರು ಟಿಪ್ಪುವನ್ನು ಕನ್ನಡಪ್ರೇಮಿ ಅಂತಾರೆ. ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಬದಲಾಯಿಸಿ ಪರ್ಷಿಯನ್ ಭಾಷೆಯನ್ನು ತಂದವನು ಕನ್ನಡಪ್ರೇಮಿ ಹೇಗಾಗುತ್ತಾನೆ. ಹಾಸನಕ್ಕೆ ಕೈಮಾಬಾದ್ ಎಂದು ಹೆಸರಿಟ್ಟವನು ಟಿಪ್ಪು. ಇತಿಹಾಸವನ್ನು ಮರೆತವನು ಇತಿಹಾಸವನ್ನು ಎಂದಿಗೂ ಸೃಷ್ಟಿಸಲಾರ. ಅದಕ್ಕಾಗಿ ಇತಿಹಾಸವನ್ನು ನೆನೆದು ಎಲ್ಲರೂ ಮತ ಹಾಕುವಂತೆ ಸಲಹೆ ನೀಡಿದರು.
ದೇಶದ ಯಾವುದೇ ಪಿಚ್ನಲ್ಲಿ ಶಾ ಉತ್ತಮ ಆಟ: ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಯಾವುದೇ ಪಿಚ್ನಲ್ಲಾದರೂ ಚೆನ್ನಾಗಿ ಆಟವಾಡುತ್ತಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಈ ಮೂಲಕ ಬಿಜೆಪಿಗೆ ಅಷ್ಟಾಗಿ ನೆಲೆ ಇಲ್ಲದ ಹಳೇ ಮೈಸೂರಲ್ಲಿ ಶಾ ರಣತಂತ್ರ ಯಶಸ್ವಿ ಆಗುತ್ತದೆ ಎಂಬ ವಿಶ್ವಾಸವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರಿಕೆಟ್ ಚೆನ್ನಾಗಿ ಆಡೋರು ಯಾವುದೇ ಪಿಚ್ ಕೊಟ್ಟರೂ ಚೆನ್ನಾಗಿ ಆಡುತ್ತಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಆ ಭಾಗದ ಜನರ ವಿಶ್ವಾಸ ಗೆಲ್ಲದೆ ಸ್ಪಷ್ಟಬಹುಮತ ಪಡೆಯುವುದು ಕಷ್ಟವಾಗಲಿದೆ.
ನನ್ನ, ಸಿ.ಟಿ.ರವಿ ಆಸ್ತಿ ತನಿಖೆ ಮಾಡಿ: ಬಿ.ಕೆ.ಹರಿಪ್ರಸಾದ್ ಸವಾಲು
ಇದು 2008 ಮತ್ತು 2018ರ ಚುನಾವಣೆ ಸಂದರ್ಭದಲ್ಲಿ ನಮ್ಮ ಅನುಭವಕ್ಕೆ ಬಂದಿದೆ. ಹೀಗಾಗಿ ಇಡೀ ರಾಜ್ಯದತ್ತ ಗಮನಹರಿಸುವುದರ ಜತೆಗೆ ಹಳೇ ಮೈಸೂರು ಭಾಗಕ್ಕೆ ವಿಶೇಷ ಒತ್ತು ನೀಡಲಿದ್ದೇವೆ’ ಎಂದರು. ‘ದೇಶದ ಒಂದೊಂದೇ ರಾಜ್ಯ ಗೆಲ್ಲುತ್ತಾ ಈ ಹಂತಕ್ಕೆ ಬಂದಿದ್ದೇವೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ನಮಗೆ ಅಸಾಧ್ಯವಲ್ಲ. ಕಬ್ಬಿಣದ ಕಡಲೆಯೂ ಅಲ್ಲ. ಪರಿಶ್ರಮ ಹಾಕಿದರೆ ಎಲ್ಲವೂ ಸಾಧ್ಯವಿದೆ. ಒಂದು ಕಾಲದಲ್ಲಿ ಚಿಕ್ಕಮಗಳೂರು ಕಾಂಗ್ರೆಸ್ ಭದ್ರಕೋಟೆ ಆಗಿತ್ತು. ಈಗ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ ಇದೆ. ಹೀಗಾಗಿ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಒಳಗೊಂಡಂತೆ ವಿಶೇಷ ಒತ್ತು ನೀಡುತ್ತೇವೆ. ಹಿಂದುತ್ವ ಮತ್ತು ಅಭಿವೃದ್ಧಿ ಮೇಲೆ ಮತ ಕೇಳುತ್ತೇವೆ. ಆ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನಿಸುತ್ತೇವೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.