ಪುತ್ರ ಶರತ್ ಬಚ್ಛೇಗೌಡ ಕಾಂಗ್ರೆಸ್‌ಗೆ: ತಂದೆ ಬಿಎನ್‌ ಬಚ್ಚೇಗೌಡ್ರ ಖಡಕ್ ಪ್ರತಿಕ್ರಿಯೆ..!

By Suvarna NewsFirst Published Sep 19, 2020, 2:29 PM IST
Highlights

ರಾಜ್ಯದಲ್ಲಿ  ನಾಯಕತ್ವ ಬದಲಾವಣೆ ಹಾಗೂ ಕಡು ವೈರಿ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನದ ಬಗ್ಗೆ ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪ್ರತಿಕ್ರಿಯೆ ಹೀಗಿದೆ.

ಬೆಂಗಳೂರು, (ಸೆ.19): ನಾಯಕತ್ವ ಬದಲಾವಣೆ ಕೇವಲ ಉಹಾಪೋಹ, ಹೈಕಮಾಂಡ್ ಅಂತಹ ತೀರ್ಮಾನ ಮಾಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್​ ಬಚ್ಚೇಗೌಡ ಹೇಳಿದ್ದಾರೆ. 

ವಿಧಾನಸೌಧದಲ್ಲಿಂದು ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ಪೂರ್ಣ ಅವಧಿ ಪೂರೈಸುತ್ತಾರೆ. ನಾಯಕತ್ವ ಬದಲಾವಣೆ ಪರಿಸ್ಥಿತಿ ರಾಜ್ಯದಲ್ಲಿಲ್ಲ. ಮೇಲ್ಮಟ್ಟದ ವರಿಷ್ಠರು ತೀರ್ಮಾನ ಮಾಡಿದರೆ ಮಾಡಬಹುದು ಎಂದು ಹೇಳಿದರು.

ಇನ್ನು ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರಮಟ್ಟದ ನಾಯಕರು ಬಹಳ ಎಚ್ಚರಿಕೆ ತೀರ್ಮಾನ ಮಾಡ್ತಾರೆ. ದಕ್ಷಿಣ ಭಾರತದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಹೈಕಮಾಂಡ್ ಎಚ್ಚರಿಕೆ ತೀರ್ಮಾನ ಮಾಡುತ್ತದೆ ಎಂದರು.

ಶೀಘ್ರ ಶರತ್ ಬಚ್ಚೇಗೌಡ ಅಧಿಕೃತ ಪಕ್ಷ ಸೇರ್ಪಡೆ : ಯಾವ ಪಕ್ಷ..?

ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆ ಆಗವುದು ಅವನಿಗೆ ಬಿಟ್ಟದ್ದು. ನಾನು ಬಿಜೆಪಿಯ ಸಂಸದನಾಗಿದ್ದೇನೆ. ಶರತ್ ಸ್ವಾಭಿಮಾನಿಯಾಗಿ ಚುನಾವಣೆ ಸ್ಪರ್ಧೆ ಮಾಡಿ ಗೆದ್ದಿದ್ದಾನೆ. ಅವನು ಭವಿಷ್ಯದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾನೆ ಎಂದು ಸ್ಪಷ್ಟಪಡಿಸಿದರು.

ನಾನು ಬಿಜೆಪಿಯಲ್ಲಿದ್ದು, ಇದರ ಬಗ್ಗೆ ಮಾತನಾಡುವುದಿಲ್ಲ. ನಾನು ಶರತ್​ಗೆ ಚುನಾವಣೆಯಲ್ಲಿ ಬೆಂಬಲ ನೀಡಿಲ್ಲ, ಭವಿಷ್ಯದ ರಾಜಕೀಯದ ಬಗ್ಗೆ ನಾನು ಮುನ್ಸೂಚನೆ ನೀಡುವುದಿಲ್ಲ ಎಂದು ತಿಳಿಸಿದರು. 

ಸದ್ಯ ಎಂಟಿಬಿ ನಾಗರಾಜ್​ಗೆ ಸಚಿವ ಸ್ಥಾನ ನೀಡುವುದು ಸಿಎಂಗೆ ಬಿಟ್ಟದ್ದು, ಇವತ್ತು ಮಂತ್ರಿ ಸ್ಥಾನ ನೀಡುವುದು ಗೊತ್ತಾಗುತ್ತದೆ. ಎಂಟಿಬಿ ನಾಗರಾಜ್ ಅವರಿಗೆ ಮಂತ್ರಿ ಸ್ಥಾನ ನೀಡುವುದಾದರೆ ನೀಡಬಹುದು. ನಾನು ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ ಎಂದು ನುಣುಚಿಕೊಂಡರು.

click me!