ಸಿದ್ದರಾಮುಲ್ಲಾ ಖಾನ್ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಕರ್ನಾಟಕದ ಜನ: ಸಂಸದ ಅನಂತಕುಮಾರ ಹೆಗಡೆ

By Kannadaprabha NewsFirst Published Feb 24, 2024, 1:01 AM IST
Highlights

ರಾಜ್ಯದಲ್ಲಿ ಸಿದ್ದರಾಮುಲ್ಲಾ ಖಾನ್ ಸರ್ಕಾರ ಮಾಡುತ್ತಿರುವ ಒಂದೊಂದು ಅವಾಂತರದಿಂದಾಗಿ ಕರ್ನಾಟಕದ ಜನ ಕುದಿಯುತ್ತಿದ್ದಾರೆ. ನಮ್ಮ ದೇವಾಲಯದ ಹಣವನ್ನು ಚರ್ಚ್ ಮತ್ತು ಮಸೀದಿಗಳಿಗೆ ನೀಡಲಾಗುತ್ತಿದೆ. ನಮ್ಮ ದೇವಾಲಯದ ಹಣವನ್ನು ನಮ್ಮ ದೇವಾಲಯಕ್ಕೆ ನೀಡದೆ ಮಸೀದಿ, ಚರ್ಚ್‌ಗಳಿಗೆ ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಸಂಸದ ಅನಂತಕುಮಾರ ಹೆಗಡೆ 

ಮುಂಡಗೋಡ(ಫೆ.24): ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಾರದೇ ಇದ್ದಿದ್ದರೆ ಇಂದು ಪ್ರತಿ ಮನೆಗೆ ಅಡುಗೆ ಅನಿಲ ಇರುತ್ತಿರಲಿಲ್ಲ. ಮಹಿಳೆಯರಿಗೆ ಭರವಸೆಯ ಬದುಕು ಇರುತ್ತಿರಲಿಲ್ಲ ಹಾಗೂ ಕೋಟ್ಯಂತರ ಹಿಂದೂಗಳ ಕನಸಾದ ರಾಮ ಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಶುಕ್ರವಾರ ತಾಲೂಕಿನ ಚಿಗಳ್ಳಿ, ಪಾಳಾ ಹಾಗೂ ಇಂದೂರ ಗ್ರಾಮದಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸಿ ಮಾತನಾಡಿದರು. ದೇಶ ಮತ್ತಷ್ಟು ಬಲಿಷ್ಠವಾಗಬೇಕಾದರೆ ಅದಕ್ಕೆ ೩ನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದಕ್ಕಿಂತಲೂ ಹೆಚ್ಚು ಕೆಲಸಗಳು ಆಗಿವೆ. ಉಜ್ವಲ, ಉಜಾಲಾ ಯೋಜನೆ ಸೇರಿದಂತೆ ಸಾಮಾಜಿಕ ಧರ್ಮ, ರಾಷ್ಟ್ರ ಸೇರಿದಂತೆ ಬಡವರು, ಮಹಿಳೆಯರ ಅಭಿವೃದ್ಧಿಯ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಮೂಲಭೂತ ಸೌಕರ್ಯಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡುತ್ತಿದೆ. ಹಳ್ಳಿ-ಹಳ್ಳಿಗಳಲ್ಲಿ ಮನೆ-ಮನೆಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಉತ್ತರ ಕನ್ನಡ ಲೋಕಸಭೆಗೆ 5 ಕೈ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಐವರಲ್ಲಿ ಗೆಲ್ಲುವವರಿಗಾಗಿ ಸಮೀಕ್ಷೆ: ಹೆಚ್.ಕೆ. ಪಾಟೀಲ್

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಬಿಜೆಪಿಗೆ ಮತ ಹಾಕಬೇಕಿದೆ. ನಮ್ಮ ಧರ್ಮ ಹಾಗೂ ದೇಶ ಉಳಿಯಬೇಕಾದರೆ ದೇಶಕ್ಕೆ ಬಿಜೆಪಿ ಅನಿವಾರ್ಯ. ದೇಶದ ಹಿತದೃಷ್ಟಿ ಬಯಸುವ ಬಹಳಷ್ಟು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರದ್ದು ಕೂಡ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದ ಆಶಯವಾಗಿದೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಕೂಡ ಬಿಜೆಪಿಗೆ ಮತ ಹಾಕಲಿದ್ದಾರೆ. ಆದರೆ ಅವರಿಗೆ ನಾವು ಸಂಪ್ರದಾಯದಂತೆ ಮತ ಹಾಕಲು ಒಂದು ಮಾತು ಹೇಳಬೇಕಷ್ಟೆ ಎಂದರು.

ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಅನಂತಕುಮಾರ:

ರಾಜ್ಯದಲ್ಲಿ ಸಿದ್ದರಾಮುಲ್ಲಾ ಖಾನ್ ಸರ್ಕಾರ ಮಾಡುತ್ತಿರುವ ಒಂದೊಂದು ಅವಾಂತರದಿಂದಾಗಿ ಕರ್ನಾಟಕದ ಜನ ಕುದಿಯುತ್ತಿದ್ದಾರೆ. ನಮ್ಮ ದೇವಾಲಯದ ಹಣವನ್ನು ಚರ್ಚ್ ಮತ್ತು ಮಸೀದಿಗಳಿಗೆ ನೀಡಲಾಗುತ್ತಿದೆ. ನಮ್ಮ ದೇವಾಲಯದ ಹಣವನ್ನು ನಮ್ಮ ದೇವಾಲಯಕ್ಕೆ ನೀಡದೆ ಮಸೀದಿ, ಚರ್ಚ್‌ಗಳಿಗೆ ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ನಮ್ಮ ಹಿಂದೂಗಳು ಹಾಕಿದ ಕಾಣಿಕೆ ದುಡ್ಡು ನಮ್ಮ ಹಕ್ಕು. ಶೇ. ೯೯ರಷ್ಟು ತೆರಿಗೆ ಕಟ್ಟುವವರು ನಮ್ಮ ಜನ, ಸರ್ಕಾರದ ಬೊಕ್ಕಸ ತುಂಬಿಸುವವರು ನಾವು, ಆ ಹಣದಲ್ಲಿ ಮಜಾ ಮಾಡುವರು ಇನ್ಯಾರೋ. ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಇದು ಸರಿಯಾಗಬೇಕೆಂದರೆ ರಾಜ್ಯದಲ್ಲಿ ಕೂಡ ಬಿಜೆಪಿ ಬರಬೇಕು. ಮುಂದಿನ ಚುನಾವಣೆಯಲ್ಲಿ ಯಾವ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಬರುವುದಿಲ್ಲ. ಬಿಜೆಪಿ ಸರ್ಕಾರವೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಅನಾರೋಗ್ಯ ಕಾರಣದಿಂದ ಅನಂತಕುಮಾರ ಹೆಗಡೆ ಅವರು ರಾಜಕಾರಣದಲ್ಲಿ ಸಕ್ರಿಯವಾಗಿರಲಿಲ್ಲ. ಈಗ ರಾಮ ಪ್ರತಿಷ್ಠಾಪನೆಯಾದ ಬಳಿಕ ಮೈಯಲ್ಲಿ ರಾಮ ತುಂಬಿಕೊಂಡು ಸಂಚಾರ ಆರಂಭಿಸಿದ್ದಾರೆ. ಮುಂಡಗೋಡ ತಾಲೂಕು ಮತ್ತು ಜಿಲ್ಲೆಯಲ್ಲಿ ಬಿಜೆಪಿ ಇಂದು ಸದೃಢವಾಗಲು ಅನಂತಕುಮಾರ ಹೆಗಡೆ ಪ್ರಮುಖ ಪಾತ್ರ ವಹಿಸಿದವರು ಎಂದರು.

ಇಸ್ಲಾಂ ಇರುವವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ: ಸಂಸದ ಅನಂತಕುಮಾರ ಹೆಗಡೆ

ಶಿವರಾಮ ಹೆಬ್ಬಾರ ಹಾಗೂ ಅವರ ಬೆಂಬಲಿಗರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆಂಬ ಉಹಾಪೋಹಕ್ಕೆ ಯಾರೂ ಕಿವಿಗೊಡಬಾರದು. ಜಗತ್ತಿನಲ್ಲಿಯೇ ಪ್ರಭಾವಿ ನಾಯಕ ಎನಿಸಿಕೊಂಡ ನರೇಂದ್ರ ಮೋದಿ ಅವರ ನಾಯಕತ್ವ ನಮ್ಮ ದೇಶಕ್ಕೆ ದೊರೆತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅನಂತಕುಮಾರ ಹೆಗಡೆ ಅಭ್ಯರ್ಥಿಯಾಗಬೇಕೆಂಬ ಆಶಯವಿದೆ. ಆದರೆ ಅಭ್ಯರ್ಥಿ ಯಾರೇ ಆದರೂ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಚಂದ್ರು ಎಸಳೆ, ಅಶೋಕ ಚಲವಾದಿ, ಮಾಜಿ ಶಾಸಕ ಸುನೀಲ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ, ಶ್ರೀಕಾಂತ ಸಾನು, ಮಹೇಶ ಹೊಸಕೊಪ್ಪ, ತುಕಾರಾಮ ಇಂಗಳೆ, ಗ್ರಾಪಂ ಗಣಪತಿ ಬಾಣಮ್ಮನವರ, ಶಿವರಾಯಪ್ಪ ತಳವಾರ ಉಪಸ್ಥಿತರಿದ್ದರು. ಸಂತೋಷ ಅಂತೋಜಿ ಸ್ವಾಗತಿಸಿದರು. ಭರತರಾಜ ಹದಳಗಿ ಕಾರ್ಯಕ್ರಮ ನಿರೂಪಿಸಿದರು.

click me!