ಮುಸ್ಲಿಮರ ಓಲೈಕೆಗೆ ಎಚ್ಡಿಕೆ ಹೊಸ ವರಸೆ: ಯೋಗೇಶ್ವರ್‌

By Kannadaprabha NewsFirst Published Oct 23, 2022, 10:30 PM IST
Highlights

ಕಳೆದ ಚುನಾವಣೆಯಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾದರು ಸಹ ಚುನಾವಣಾ ಪ್ರಣಾಳಿಕೆಯಲ್ಲಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಲ್ಲ ಎಂದು ದೂರಿದ ಯೋಗೇಶ್ವರ್‌

ರಾಮನಗರ(ಅ.23):  ಮುಂಬರುವ ಚುನಾವಣೆಯಲ್ಲಿ ಮುಸ್ಲಿಮೇತರ ಸಮುದಾಯಗಳ ಜನರು ಮತ ನೀಡುವುದಿಲ್ಲ ಎಂಬುದನ್ನು ಅರಿತು ಮಾಜಿ ಸಿಎಂ ಕುಮಾರಸ್ವಾಮಿ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡಲು ಹೊಸವರಸೆ ಶುರು ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಲೇವಡಿ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾದರು ಸಹ ಚುನಾವಣಾ ಪ್ರಣಾಳಿಕೆಯಲ್ಲಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಲ್ಲ ಎಂದು ದೂರಿದರು.

ಯೋಗೇಶ್ವರ್‌ ಅಂಬೇಡ್ಕರ್‌ ಭವನಕ್ಕೆ ನೀಡಿದ್ದ ಅನುದಾನ ತಡೆ ಹಿಡಿದಿದ್ದಾರೆಂದು ಆರೋಪಿಸಿ ಕುಮಾರಸ್ವಾಮಿ ಅಪಪ್ರಚಾರ ಮಾಡಿದ್ದಾರೆ. ಇದು ದುರುದ್ದೇಶದಿಂದ ಮಾಡಿರುವ ಷಡ್ಯಂತ್ರ. ನಾನೆಂದು ದಲಿತರ ವಿರುದ್ಧ ಕೆಲಸ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಕೈಗೆ ಸಿಗುವುದಿಲ್ಲ. ರಾಮನಗರ ಕಳೆದುಕೊಳ್ಳುತ್ತಾರೆ. ಮಾಗಡಿಯಲ್ಲಿ ಗೆಲುವು ಕಷ್ಷವಾಗಿದೆ. ಕನಕಪುರದಲ್ಲಿ ಎರಡಂಕಿ ಮತ ದಾಟುವುದಿಲ್ಲ. ಸ್ವಂತ ಜಿಲ್ಲೆಯಲ್ಲಿಯೇ ಜೆಡಿಎಸ್‌ ನೆಲೆ ಕಳೆದುಕೊಳ್ಳಲಿದೆ. ಇದನ್ನು ಅರಿತು ಕುಮಾರಸ್ವಾಮಿ ತುಂಬಾ ಹತಾಶರಾಗಿದ್ದಾರೆ ಎಂದು ಟೀಕಿಸಿದರು.

Karnataka Assembly Elections: ಚನ್ನಪಟ್ಟಣದಿಂದಲೇ ಮುಂದಿನ ಸಲವೂ ಸ್ಪರ್ಧೆ: ಎಚ್‌ಡಿಕೆ ಸ್ಪಷ್ಟನೆ

ರಾಮನಗರ ಕ್ಷೇತ್ರದಲ್ಲಿ ಅವರ ಅಭ್ಯರ್ಥಿಯನ್ನು ಸೋಲಿಸಲು ಬೇಕಾದ ಎಲ್ಲ ಸಿದ್ಧತೆ ಮಾಡುತ್ತಿದ್ದೇವೆ. ಚನ್ನಪಟ್ಟಣದಲ್ಲಿ ಅವರ ಪರವಾಗಿ ಕೆಲಸ ಮಾಡಿದ ಸಮುದಾಯದ ಮುಖಂಡರು ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾಗಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೊಸ ಮುಖವಾಣಿಯೊಂದಿಗೆ ಪ್ಲಾನ್‌, ಸ್ಕೀಮ…ಗಳನ್ನು ಹೇಳಿಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ದೂರಿದ ಸಿಪಿವೈ, 30 ಅಂಬೇಡ್ಕರ್‌ ಭವನಗಳ ನಿರ್ಮಾಣ ಕ್ಕೆ ತಲಾ 50 ಲಕ್ಷ ರು. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಕೇಳಿದ್ದೆ. ಅದರಂತೆ 15 ಕೋಟಿ ಕೇಳಿದ್ದರಲ್ಲಿ, 5 ಕೋಟಿ ನೀಡಿದ್ದರು. ಆಯುಕ್ತರ ಕಚೇರಿಯಲ್ಲಿ ಆ.5 ಕೋಟಿಗೆ ತುಂಡು ಗುತ್ತಿಗೆಯಲ್ಲಿ ಕಾಮಗಾರಿ ಮಾಡಲು ಅಂಬೇಡ್ಕರ್‌ ಪಟ್ಟಿಸಿದ್ಧ ಪಡಿಸಿ ಕುಮಾರಸ್ವಾಮಿ ಆದೇಶ ಮಾಡಿಸಿದ್ದರು ಎಂದು ಆರೋಪಿಸಿದರು.

ನಾನು ತಂದಿರುವ ಅನುದಾನವನ್ನು ಪ್ರತಿ ಅಂಬೇಡ್ಕರ್‌ ಭವನಕ್ಕೆ ತಲಾ 50 ಲಕ್ಷ ನೀಡಬೇಕೆಂದು ಉದ್ದೇಶಿಸಿದ್ದೆ. ಈಗ 10 ಭವನ ಅನುಮೋದನೆ ಮಾಡಿಸಿಕೊಂಡಿದ್ದೇನೆ. ತುಂಡು ಗುತ್ತಿಗೆ ಕಾಮಗಾರಿ ತಡೆಯುವಂತೆ ಹೇಳಿದ್ದೇನೆಯೇ ಹೊರತು ಅಂಬೇಡ್ಕರ್‌ ಭವನಕ್ಕೆ ಅನುದಾನ ಬಿಡುಗಡೆ ಮಾಡದಂತೆ ಹೇಳಿಲ್ಲ. ಆದರೆ ಇದನ್ನು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

click me!