Karnataka politics: ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಯತ್ನಾಳ್, ಜಾರಕಿಹೊಳಿ

By Suvarna NewsFirst Published Dec 3, 2021, 6:41 PM IST
Highlights

* ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬಿಜೆಪಿ ಶಾಸಕರು 
* ಹೊಸ ಬಾಂಬ್ ಸಿಡಿಸಿದ ಯತ್ನಾಳ್, ಜಾರಕಿಹೊಳಿ 
* ಪ್ರತ್ಯೇಕವಾಗಿ ಮಾಧ್ಯಮಗಳಿಗೆ ಯತ್ನಾಳ್, ಜಾರಕಿಹೊಳಿ ಪ್ರತಿಕ್ರಿಯೆ

ಬೆಳಗಾವಿ, (ಡಿ.03):  ವಿಧಾನಪರಿಷತ್ ಚುನಾವಣೆ (Karnataka MLC Election) ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು..... ಹತ್ತು ದಿನಗಳಲ್ಲಿ ನಾನು ಮತ್ತೆ ಮಂತ್ರಿಯಾಗುತ್ತೇನೆ ಎಂದು ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ (Ramesh Jarkiholi) ಸ್ಫೋಟಕ ಹೇಳಿಕೆ ನೀಡಿದ್ರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ದೆಹಲಿ ಭೇಟಿ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. 

Karnataka Politics: ಡಿಕೆಶಿ ವ್ಯಕ್ತಿತ್ವ ಏನೆಂದು ಹೇಳ್ತೀನಿ, ಸಂಚಲನ ಮೂಡಿಸಿದ ಜಾರಕಿಹೊಳಿ ಹೇಳಿಕೆ

ಡಿಸೆಂಬರ್ 10ರ ಬಳಿಕ ರಾಜ್ಯದಲ್ಲಿ ಬಹಳ ದೊಡ್ಡ ಬದಲಾವಣೆಯಾಗಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.

ಯತ್ನಾಳ್ ಹೇಳಿದ್ದೇನು?
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಯತ್ನಾಳ್, ಡಿಸೆಂಬರ್ 10ರ ಬಳಿಕ ರಾಜ್ಯದಲ್ಲಿ ಬಹಳ ದೊಡ್ಡ ಬದಲಾವಣೆಯಾಗಲಿದೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಅಲ್ಲದೆ ಬಸನಗೌಡ ಪಾಟೀಲ್ ಯತ್ನಾಳ್, ಪೂರ್ಣ ಸಚಿವ ಸಂಪುಟವೇ ಪುನಾರಚನೆಯಾಗಬಹುದು ಎಂದು ಹೇಳುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ. ಜೊತೆಗೆ ಪರೋಕ್ಷವಾಗಿ ಕೆಲ ಸಚಿವರುಗಳ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಅವರುಗಳು ವಿಧಾನಸೌಧಕ್ಕೆ ಬರುವುದಿಲ್ಲ. ಶಾಸಕರುಗಳ ಸಮಸ್ಯೆಗೂ ಸ್ಪಂದಿಸುವುದಿಲ್ಲ. ದಿನಬೆಳಗಾದರೆ ಮುಖ್ಯಮಂತ್ರಿಗಳ ಬಾಲಂಗೋಚಿಯಂತೆ ತಿರುಗಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಯತ್ನಾಳ್ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದರು. ಅಲ್ಲದೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದು ಖಚಿತ ಎಂದು ಭವಿಷ್ಯ ನುಡಿದಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ರಮೇಶ್ ಜಾರಕಿಹೊಳಿ ಮಾತು
ಅಥಣಿಯಲ್ಲಿ ನಡೆದ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,  ಹತ್ತು ದಿನಗಳಲ್ಲಿ ನಾನು ಮತ್ತೆ ಮಂತ್ರಿಯಾಗುತ್ತೇನೆ ಎಂದು ಹೇಳಿದರು.

 ಅಲ್ಲದೇ ಯಾರಿಗೆ ಪ್ರಥಮ ಪ್ರಾಶಸ್ತ್ಯದ ಮತ ಕೊಡಬೇಕು ಎನ್ನುವುದನ್ನು ಇನ್ನೆರಡು ದಿನಗಳಲ್ಲಿ ತಿಳಿಸುವೆ  ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಮುಂದುವರಿದು, 'ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್ ಕೊಡಲಿಲ್ಲ. ಹೀಗಾಗಿ, ಕಾಂಗ್ರೆಸ್‌ ಸೋಲಿಸಲು ಪಕ್ಷೇತರ ಅಭ್ಯರ್ಥಿ ಹಾಕಿದ್ದೇನೆ' ಎಂದರು.

ಕೆಲ ಹೊತ್ತಿನ ಬಳಿಕ, ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಕೂಡ ಇದೇ ವೇದಿಕೆಯಲ್ಲಿ ಮತಯಾಚಿಸಿದರು. ಬಿಜೆಪಿ ಮುಖಂಡರು ಕೂಡ ಭಾಗವಹಿಸಿದ್ದರು! ಲಖನ್‌ಗೆ ಮತ ಕೇಳಿದರು.

ಜಾರಕಿಹೊಳಿಗೆ ಸವದಿ ಟಾಂಗ್ 
 ಬೆಳಗಾವಿ: 'ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಅವರಿಗೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ‌ ಬೆಂಬಲ ನೀಡುತ್ತಿದ್ದಾರೆಯೋ, ಇಲ್ಲವೋ ಎನ್ನುವುದನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ' ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಜಾರಕಿಹೊಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ನಮ್ಮದು ರಾಷ್ಟ್ರೀಯ ಪಕ್ಷ. ಯಾರು ಯಾರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎನ್ನುವುದನ್ನು ಮುಖಂಡರು ಅವಲೋಕಿಸುತ್ತಾರೆ' ಎಂದು ಪ್ರತಿಕ್ರಿಯಿಸಿದರು.

ಫಲಿತಾಂಶದ ದಿನವಾದ ಡಿಸೆಂಬರ್​ 14ರಂದು ಡಿಕೆ ಶಿವಕುಮಾರ್ ಅವರ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೋರವಾಗಿ ಉತ್ತರ ಕೊಡುತ್ತೇನೆ ಎಂದು ಹೇಳುವ ಮೂಲಕ ಜಾರಕಿಹೊಳಿ ಕುತೂಹಲ ಹುಟ್ಟುಹಾಕಿದ್ದರು.

ನಾವು ಈಗ ಚುನಾವಣೆ ಮೂಡ್​ನಲ್ಲಿ ಇದ್ದೇನೆ. ಹತಾಶೆ ಮನೋಭಾವದಿಂದ ಡಿಕೆಶಿ ಟೀಕೆ ಮಾಡಿದ್ದಾರೆ. 1985ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ವಿಚಾರ ಬಹಿರಂಗ ಮಾಡುತ್ತೇನೆ. ನನ್ನ ವ್ಯಕ್ತಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳುತ್ತೀನಿ ಎಂದಿರುವುದನ್ನಿ ಇಲ್ಲಿ ಸ್ಮರಿಸಬಹುದು,

click me!