
ಯಾದಗಿರಿ(ಮಾ.12): ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ, ಸದ್ಯ ಬಿಜೆಪಿಯಲ್ಲಿರುವ ಡಾ. ಎ. ಬಿ. ಮಾಲಕರೆಡ್ಡಿ ಅವರು ಬೆಂಬಲಿಗನೊಬ್ಬನ ಜೊತೆ ಮೊಬೈಲ್ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇಲ್ಲೀಗ ಭಾರಿ ಸಂಚಲನ ಮೂಡಿಸಿದೆ. ಪುತ್ರಿಗೆ ಕಾಂಗ್ರೆಸ್ ಟಿಕೆಟ್ ದೊರಕಿದರೆ ಮತ್ತೇ ಕಾಂಗ್ರೆಸ್ ಪಾಳೆಯ ಸೇರಲು ಬಹುತೇಕ ತುದಿಗಾಲ ಮೇಲೆ ನಿಂತಿದ್ದ ಡಾ. ಮಾಲಕರೆಡ್ಡಿ ಅವರಿಗೆ ಈ ಆಡಿಯೋ ಸಂಕಷ್ಟಕ್ಕೀಡಾಗಿಸಬಹುದು ಅನ್ನೋದು ರಾಜಕೀಯ ಲೆಕ್ಕಾಚಾರ.
ಏನಿದು ಆಡಿಯೋ:
ಕೆಲವು ದಿನಗಳ ಹಿಂದಷ್ಟೇ ಡಾ. ಮಾಲಕರೆಡ್ಡಿ ಅವರು ತಮ್ಮ ಬೆಂಬಲಿಗರೊಬ್ಬರ ಜೊತೆ ಮೊಬೈಲ್ನಲ್ಲಿ ಮಾತನಾಡಿದ್ದಾರೆ ಎನ್ನಲಾದ, ಸುಮಾರು 15 ನಿಮಿಷಗಳ ಸಂಭಾಷಣೆಯುಳ್ಳ ಧ್ವನಿಮುದ್ರಿಕೆ ಇಲ್ಲೀಗ ಸಾಮಾಜಿಕ ತಾಲತಾಣದಲ್ಲಿ ಹಂಚಿಕೆಯಾಗಿದೆ.
ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿ ದೇಶಕ್ಕೆ ಬಂದಿಲ್ಲ: ಸಿ.ಟಿ.ರವಿ
ಸದ್ಯ, ಡಾ. ರೆಡ್ಡಿ ಬಿಜೆಪಿಯಲ್ಲಿದ್ದಾರಾದರೂ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ (ಪುತ್ರಿಗೆ). ಮೊಬೈಲ್ ಸಂಭಾಷಣೆಯಲ್ಲಿ ಅವರು, ಕಾಂಗ್ರೆಸ್ಗೆ ತಮ್ಮ ಗೆಲುವು ಎಂಬುದು ಗೊತ್ತಿದ್ದರೂ ಕೂಡ ಬೇಗ ನಿರ್ಧಾರ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಡಿಕೆಶಿ ಅವರಿಗೆ ತಾವು (ಡಾ. ಮಾಲಕರೆಡ್ಡಿ) ಕಾಂಗ್ರೆಸ್ ಬರುವುದು ಇಷ್ಟವಾಗಿದೆಯಾದರೂ, ಖರ್ಗೆ ಮನಸ್ಸು ಮಾಡುತ್ತಿಲ್ಲ. ಆಗಬಹುದು, ಆದರೆ ಬೇಗನೆ ಆಗಲಿ ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಸಂಭಾಷಣೆಯ ಒಂದು ಹಂತದಲ್ಲಿ, ಖರ್ಗೆಯವರ ನಾಯಕತ್ವದ ಬಗ್ಗೆ ಹಾಗೂ ಸೋನಿಯಾ ಗಾಂಧಿ ನಿರ್ಧಾರದ ಬಗ್ಗೆ ಹಾಗೂ ಯಾದಗಿರಿ ಹಾಲಿ ಶಾಸಕ ಮುದ್ನಾಳ್ ಬಗ್ಗೆ ಕೆಲವು ಪದಗಳು ಆಕ್ಷೇಪಾರ್ಹ ಎಂದೆನಿಸುತ್ತವೆ. ಕಾಂಗ್ರೆಸ್ ದಾರಿ ಕಾಯುತ್ತೇನೆ, ಇಲ್ಲವಾದಲ್ಲಿ ಬಿಜೆಪಿಯವರೂ ಟಿಕೆಟ್ ನೀಡುತ್ತಾರೆಂದು ಬೆನ್ನು ಬಿದ್ದಿದ್ದಾರೆ, ಅಲ್ಲಿಂದಲೇ ಟಿಕೆಟ್ ಪಡೆಯುತ್ತೇನೆ ಎಂದಿರುವುದು ಬಿಜೆಪಿಯಲ್ಲೂ ತಳಮಳ ಸೃಷ್ಟಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದ್ದ ಡಾ. ರೆಡ್ಡಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ವಿರುದ್ಧ ಸೋಲುಂಡಿದ್ದರು. ತದನಂತರ, ಲೋಕಸಭೆ ಚುನಾವಣೆಯ ವೇಳೆ, ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದ ಡಾ. ರೆಡ್ಡಿ, ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಪರ ಪ್ರಚಾರ ನಡೆಸಿ, ಖರ್ಗೆ ಕಾಂಗ್ರೆಸ್ ವಿರುದ್ಧ ಸೆಟೆದು ನಿಂತಿದ್ದರು.
ದೈಹಿಕವಾಗಿ ಬಿಜೆಪಿಯಲ್ಲಿದ್ದರೂ, ಮಾನಸಿಕವಾಗಿ ಕಾಂಗ್ರೆಸ್ನಲ್ಲಿದ್ದಂತಿರುವ ಡಾ. ರೆಡ್ಡಿ ಅವರ ನಡೆ ಇದೀಗ ಹೊಸ ಚರ್ಚೆಗಳಿಗೆ ಗ್ರಾಸವಾಗಿದೆ. ಪುತ್ರಿ, ಡಾ. ಅನುರಾಘಾ ಕಾಂಗ್ರೆಸ್ ಟಿಕೆಟ್ ಬಯಸಿ ಯಾದಗಿರಿ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ, ಹೈಕಮಾಂಡ್ ಇದನ್ನು ಪರಿಗಣಿಸಿದರೆ ತಾವು ಕಾಂಗ್ರೆಸ್ ಸೇರುವುದಾಗಿ ಡಾ. ರೆಡ್ಡಿ ಆಪ್ತರಲ್ಲಿ ಹೇಳಿಕೊಂಡಿದ್ದರೆನ್ನಲಾಗಿದೆ. ಆದರೆ, ಈ ಆಡಿಯೋ ಇಲ್ಲೀಗ ಸಂಕಷ್ಟಕ್ಕೆ ದೂಡಿದಂತಿದೆ.
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಶತಸಿದ್ಧ: ಜಗದೀಶ್ ಶೆಟ್ಟರ್
ಆಡಿಯೋ ನಕಲಿ: ಡಾ. ಮಾಲಕರೆಡ್ಡಿ ಸ್ಪಷ್ಟನೆ
ತಮ್ಮದು ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಆಡಿಯೋ ಸಂಭಾಷಣೆ ನಕಲಿ ಎಂದು ಮಾಜಿ ಸಚಿವ ಡಾ. ಮಾಲಕರೆಡ್ಡಿ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಸಂಜೆ, ಈ ಕುರಿತು ವೀಡಿಯೋ ಹಾಗೂ ಪತ್ರಿಕಾ ಪ್ರಕಟಣೆ ಮೂಲಕ ಕೋರಿರುವ ಡಾ. ರೆಡ್ಡಿ, ಖರ್ಗೆಯವರು ಹಾಗೂ ಸಮುದಾಯಗಳ ವಿರುದ್ಧ ಕೆಲವರು ತಿರುಚಿದ ಆಡಿಯೋ ಹಂಚಿದ್ದಾರೆ. ಅದು ನಕಲಿಯಾಗಿದೆ. ಖರ್ಗೆಯವರು ವಿರುದ್ಧ ನನಗೆ ಅಪಾರವಾದ ಗೌರವವಿದೆ ಎಂದಿರುವ ಡಾ. ರೆಡ್ಡಿ, ಈ ಚುನಾವಣೆಯಲ್ಲಿ ನಾನು ಅಥವಾ ಕುಟುಂಬದವರು ಸ್ಪರ್ಧಿಸಬಹುದು ಎಂಬ ಭೀತಿಯಲ್ಲಿ ಇಂತಹ ಮೆಸೇಜುಗಳ ಮೂಲಕ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ನಡೆದಿದೆ. ಇದು ಭಿನ್ನಾಭಿಪ್ರಾಯಗಳು ಹಾಗೂ ಗೊಂದಲ ಮೂಡಿಸುವ ಯತ್ನವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.