
ಕಾರವಾರ (ನ..10) : ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಒಬ್ಬ ಹಿಂದೂವಾಗಿ ಹಿಂದೂ ಪದ ಅಶ್ಲೀಲ ಅರ್ಥ ಹೊಂದಿದೆ ಎಂದು ಹೇಳಿಕೆ ನೀಡಿರುವುದು ಹಿಂದೂ ಸಮಾಜಕ್ಕೆ ಆಘಾತ ಉಂಟುಮಾಡಿದೆ. ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಸಮರ್ಥನೆ ಮಾಡುತ್ತಿರುವುದು ಆ ಪಕ್ಷದವರ ಹೇಡಿತನವನ್ನು ತೋರಿಸುತ್ತಿದೆ. ಭಾರತೀಯರ ಬಗ್ಗೆ, ಭಾರತ ದೇಶದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.
ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ!
ಸತೀಶ ಜಾರಕಿಹೊಳಿ ಈ ದೇಶದ ಬಹುಸಂಖ್ಯಾತ ಹಿಂದೂಗಳನ್ನು ನಿಂದಿಸಬೇಕು ಎನ್ನುವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ. ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಕೆಲವರ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡುತ್ತಿರುವುದನ್ನು ಖಂಡನೀಯ. ದೇವರು ಕೂಡ ಇಂತಹವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಹಿಂದೂ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡುವ, ಹಿಂದೂಗಳ ಬಗ್ಗೆ, ಧರ್ಮದ ಬಗ್ಗೆ ಕೆಟ್ಟಭಾವನೆಯನ್ನು ತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿರುವುದು ಖಂಡನೀಯ ಎಂದರು.
ಪಂಡಿತ್ ನೆಹರೂ ತಾವು ಆಕಸ್ಮಿಕವಾಗಿ ಹಿಂದೂ ಎಂದು ಹೇಳಿದ್ದರು. ರಾಜೀವ್ ಗಾಂಧಿ ತಾನೊಬ್ಬ ಪಾರ್ಸಿ ಎಂದು ಕರೆದುಕೊಂಡಿದ್ದರು. ರಾಹುಲ್ ಗಾಂಧಿ ತಾವೊಬ್ಬ ಜನಿವಾರಧಾರಿ ಬ್ರಾಹ್ಮಣ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ಹಿಂದೂ ವಿರೋಧಿಯಾಗಿದೆ. ನೆಹರೂವಿನಿಂದ ಆರಂಭಿಸಿ ಇಂದಿನವರೆಗೆ ದೇಶ- ಧರ್ಮದ ಬಗ್ಗೆ ಅರಿವಿಲ್ಲದೆ ಅಜ್ಞಾನದ ಮನಸ್ಥಿತಿಯಲ್ಲಿ ಇರುವ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಪರಿವರ್ತನೆ ಹೊಂದಿದೆ ಎಂದು ಟೀಕಿಸಿದರು.
ದೂರು:
ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ವಿರುದ್ಧ ಬಿಜೆಪಿಯವರು ಘೋಷಣೆ ಕೂಗಿದರು. ಎಸ್ಪಿ ಎನ್.ವಿಷ್ಣುವರ್ಧನ್ ಅವರಿಗೆ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಪಶ್ಚಿಮ ಘಟ್ಟಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ವಕ್ತಾರ ನಾಗರಾಜ ನಾಯಕ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮೊದಲಾದವರು ಇದ್ದರು.
ಜಾರಕಿಹೊಳಿ ಹೇಳಿಕೆ; ಸಿದ್ದು, ಡಿಕೆಶಿ ಮೌನವೇಕೆ?: ಸಚಿವ ಕೋಟ ಪ್ರಶ್ನೆ
ಸತೀಶ ಜಾರಕಿಹೊಳಿ ಹೇಳಿಕೆ ಖಂಡನೀಯ. ಹಿಂದೂ ಧರ್ಮವನ್ನು ಅವಹೇಳನ ಮಾಡುವಾಗ ಎಲ್ಲ ಧರ್ಮ ಸಮ ಎನ್ನುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಮೌನ ವಹಿಸಿರುವುದು ಏಕೆ? ಎಂದು ಅರ್ಥವಾಗುತ್ತಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.\ ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ನಿಮ್ಮದೇ ಪಕ್ಷದ ಕಾರ್ಯಾಧ್ಯಕ್ಷ ಹಿಂದೂ ಧರ್ಮದ ಅವಹೇಳನ ಮಾಡಿದಾಗ ಕನಿಷ್ಠ ತಪ್ಪಾಗಿದೆ ಎಂದು ಹೇಳದೇ ಇರುವಷ್ಟುಒರಟುತನ ಪ್ರದರ್ಶನ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ಬಗ್ಗೆ ಲಘುವಾಗಿ ಮಾತನಾಡಿ, ತಮ್ಮ ಮಾತನ್ನು ಸಮರ್ಥನೆ ಮಾಡುವಾಗ ನಿಮ್ಮ ಕಾರ್ಯಾಧ್ಯಕ್ಷರನ್ನು ಸಮರ್ಥನೆ ಮಾಡುತ್ತೀರಾ? ಹಿಂದೂಗಳಿಗೆ, ಮಠಮಾನ್ಯಗಳಿಗೆ ಅವಮಾನವಾದಾಗ, ನೋವಾದಾಗ ನಿಮ್ಮ ಪಕ್ಷದ ಮುಖಂಡನ ಬಗ್ಗೆ ಸಹಾನುಭೂತಿ ತೋರುತ್ತೀರಾ? ಹೇಳಿಕೆ ಖಂಡಿಸುತ್ತೀರಾ? ಕ್ರಮ ತೆಗೆದುಕೊಳ್ಳುತ್ತೀರಾ? ತಪ್ಪಾಗಿದೆ ಎಂದು ಹೇಳಿಸುತ್ತೀರಾ? ಅಸಹಾಯಕರಾಗಿ ಇರುತ್ತೀರಾ ? ಎಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ ಉತ್ತರಿಸಬೇಕು ಎಂದು ಸವಾಲು ಹಾಕಿದರು.
ಬಿಜೆಪಿ ಹಿಂದು ಆಕ್ರೋಶ: ಕಾಂಗ್ರೆಸ್ ಪ್ರತಿಕೃತಿ ದಹನ
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕರ್ತರು ದೂರು ನೀಡಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಕ್ರಮವಾಗುತ್ತದೆ. ಕಾನೂನಿನಲ್ಲಿ ಸಾಮಾನ್ಯ, ಅಸಾಮಾನ್ಯ ಎನ್ನುವ ಭೇದÜವಿಲ್ಲ. ಎಲ್ಲರೂ ಒಂದೇ ಎಂದು ಅಭಿಪ್ರಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.